ಮೈತ್ರಿಗೆ ಇದು ಸಮಯವಲ್ಲ, ಕಾಂಗ್ರೆಸ್ಸಿಗೆ ಎಎಪಿ ತಿರುಗೇಟು!
ನವದೆಹಲಿ, ಮಾರ್ಚ್ 15: ದೆಹಲಿಯಲ್ಲಿ ಕಾಂಗ್ರೆಸ್ ತನ್ನೊಂದಿಗೆ ಮೈತ್ರಿಯ ಮಾತುಕತೆ ಆಡಬಹುದೇನೋ ಎಂದು ಕಾದಿದ್ದ ಆಮ್ ಆದ್ಮಿ ಪಕ್ಷಕ್ಕೆ 'ಮೈತ್ರಿಗೆ ತಾನೊಲ್ಲೆ' ಎಂದ ಕಾಂಗ್ರೆಸ್ ನಡೆ ವಿಚಿತ್ರ ಎನ್ನಿಸಿತ್ತು. ಎಎಪಿಯೇ ಖುದ್ದಾಗಿ ಮೈತ್ರಿ ಮಾತುಕತೆಗೆ ಸಿದ್ಧವಾಗಿದ್ದರೂ ಕಾಂಗ್ರೆಸ್ ಅದಕ್ಕೆ ಮುಂದಾಗಲಿಲ್ಲ. ಆದರೆ ಇದೀಗ ಚುನಾವಣೆ ಘೋಷಣೆಯಾದ ನಂತರ ಕಾಂಗ್ರಸ್ ಎಎಪಿಯೊಂದಿಗೆ ಮೈತ್ರಿಯ ಆಸಕ್ತಿಯನ್ನು ವ್ಯಕ್ತಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಅದಕ್ಕೆ ತಾವು ಸಿದ್ಧವಿಲ್ಲ, ಮೈತ್ರಿಗೆ ಇದು ಸಮಯವಲ್ಲ, ಈಗ ಸಮಯ ಮಿತಿ ಮೀರಿದೆ ಎಂದು ಎಎಪಿಯ ಹಿರಿಯ ಮುಖಂಡ ಗೋಪಾಲ್ ರೈ ಹೇಳಿದ್ದಾರೆ.
ದೆಹಲಿಯಲ್ಲಿ ಆಪ್ ದೋಸ್ತಿ ಇಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಕಾಂಗ್ರೆಸ್
ಮಹಾಘಟಬಂಧನದಲ್ಲಿ ಎಎಪಿಯೂ ಒಂದು ಭಾಗವಾಗುತ್ತದೆ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್-ಈಪಿ ಮೈತ್ರಿ ಮಾಡಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳಲು ದೆಹಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಅವರೇ ಒಪ್ಪದ ಕಾರಣದಿಂದ ಮೈತ್ರಿ ಮಾತುಕತೆ ನಡೆಯಲಿಲ್ಲ. ಆದರೆ ಈಗಲೂ ಯಾವುದಾದರೂ ಪಕ್ಷಗಳು ಮೈತ್ರಿಗೆ ಮುಂದಾದರೆ ಅದಕ್ಕೆ ನಾವು ಸಿದ್ಧರಿಲ್ಲ ಎಂದು ಎಎಪಿ ಸ್ಪಷ್ಟಪಡಿಸಿದೆ.
ಈ ಎಲ್ಲಾ ಬೆಳವಣಿಗೆಯ ನಂತರ ಮಾರ್ಚ್ 2 ರಂದೇ ಎಎಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನೂ ಪ್ರಕಟಿಸಿ, ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿತು. ದೆಹಲಿಯಲ್ಲಿ ಒಟ್ಟು ಏಳು ಲೋಕಸಭಾ ಕ್ಷೇತ್ರಗಳಿದ್ದು 2014 ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು.
ದೆಹಲಿ: ಲೋಕಸಭೆಗೆ 6 ಅಭ್ಯರ್ಥಿಗಳನ್ನು ಘೋಷಿಸಿದ AAP
ಏಪ್ರಿಲ್ 11 ರಿಂದ ಆರಂಭವಾಗುವ ಲೋಕಸಭಾ ಚುನಾವಣೆ ಮೇ 19 ರವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.