ಅನುಮತಿ ಇಲ್ಲದೆ ಸಮಾವೇಶ: ಗೌತಮ್ ಗಂಭೀರ್ ವಿರುದ್ಧ ದೂರು
ನವದೆಹಲಿ, ಏಪ್ರಿಲ್ 27: ಸಂಬಂಧ ಪಟ್ಟ ಅಧಿಕಾರಿಗಳ ಅನುಮತಿ ಪಡೆಯದೆ ದೆಹಲಿಯಲ್ಲಿ ಸಾರ್ವಜನಿಕ ಸಮಾವೇಶ ನಡೆಸಿದ ದೆಹಲಿ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ವಿರುದ್ಧ ದೆಹಲಿ ಪೊಲೀಸರು ದೂರು ದಾಖಲಿಸಿದ್ದಾರೆ.
ಅನುಮತಿ ಪಡೆಯದೆ ಸಮಾವೇಶ ನಡೆಸಿದ ಗೌತಮ್ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಚುನಾವಣಾ ಆಯೋಗವೇ ಸೂಚನೆ ನೀಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ಎರಡು ವೋಟರ್ ಐಡಿ: ಗೌತಮ್ ಗಂಭೀರ್ ವಿರುದ್ಧ ಕ್ರಿಮಿನಲ್ ದೂರು
ಏಪ್ರಿಲ್ 25 ರಂದು ದೆಹಲಿಯ ಜಂಗ್ಪುರ ಎಂಬಲ್ಲಿ ಗೌತಮ್ ಗಂಭೀರ್ ಸಾರ್ವಜನಿಕ ಸಮಾವೇಶ ನಡೆಸಿದ್ದರು. ಅನುಮತು ಪಡೆಯದೆ ಕಾರ್ಯಕ್ರಮ ನಡೆಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರು.
ಎರಡು ವೋಟರ್ ಐಡಿ ಹೊಂದಿರುವ ಕಾರಣಕ್ಕೆ ಗೌತಮ್ ಗಂಭೀರ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಆಮ್ ಆದ್ಮಿ ಪಕ್ಷ ಶುಕ್ರವಾರವಷ್ಟೇ ದೆಹಲಿಯ ಟಿಸ್ ಹಜಾರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುಫ್ತಿ ವಿರುದ್ಧ ಗೌತಿ ಟ್ವೀಟ್ ವಾರ್, ಮೋದಿ ಸುನಾಮಿ ಎಚ್ಚರಿಕೆ
ಇತ್ತೀಚೆಗಷ್ಟೆ ಬಿಜೆಪಿ ಸೇರಿದ ಗೌತಮ್ ಗಂಭೀರ್ ಅವರನ್ನು ಬಿಜೆಪಿ ದೆಹಲಿ ಪೂರ್ವ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಕೇಂದ್ರಾಡಳಿತ ಪ್ರದೇಶವಾದ ರಾಜಧಾನಿ ದೆಹಲಿ ಒಟ್ಟು ಏಳು ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಮೇ 12 ರಂದು ಇಲ್ಲಿ ಚುನಾವಣೆ ನಡೆಯಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.