ನೋಟಿಸ್ ನಂತರ ಎಚ್ಚೆತ್ತುಕೊಂಡ ಇನ್ಸ್ಟಾ, ಶಿವನ ಕೈಲಿಲ್ಲ ವೈನ್ ಗ್ಲಾಸ್!
ನವದೆಹಲಿ, ಜೂನ್ 15: ಇತ್ತೀಚೆಗೆ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಆನ್ ಲೈನ್ ಮಳಿಗೆಗಳ ಸರಕುಗಳ ಮೂಲಕ ದೇಶ, ಭಾಷೆ, ದೇವರುಗಳಿಗೆ ಅಪಮಾನವಾಗುವ ರೀತಿಯಲ್ಲಿ ನಡೆದುಕೊಳ್ಳುವುದು ನಡೆದಿದೆ.
ಜನಪ್ರಿಯ ಸಾಮಾಜಿಕ ಜಾಲ ತಾಣ ಇನ್ಸ್ಟಾಗ್ರಾಂನಲ್ಲಿ ಹಿಂದೂ ದೇವರುಗಳ ಬಗ್ಗೆ "ಅತ್ಯಂತ ಕೀಳುಮಟ್ಟದ ಮತ್ತು ಆಕ್ಷೇಪಾರ್ಹ ಪೋಸ್ಟ್, ಇಮೋಜಿ ಬಳಸಿದ ಆರೋಪ ಎದುರಾಗಿತ್ತು.
ಈ ಸಂಬಂಧವಾಗಿ ಇನ್ಸ್ಟಾಗ್ರಾಂ ಸಂಸ್ಥೆಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ನಂತರ ಎಚ್ಚೆತ್ತುಕೊಂಡ ಇನ್ಸ್ಟಾ ಆಕ್ಷೇಪಾರ್ಹ ಫೋಸ್ಟ್, ಇಮೋಜಿ ತೆಗೆದು ಹಾಕಿರುವುದಾಗಿ ಹೇಳಿದೆ.
ವಕೀಲ ಆದಿತ್ಯ ಸಿಂಗ್ ದೇಶ್ವಾಲ್ ಸಲ್ಲಿಸಿದ್ದ ಮನವಿ ಆಧರಿಸಿ ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಕೇಂದ್ರ ಸರ್ಕಾರ, ಇನ್ಸ್ಟಾಗ್ರಾಂ ಮತ್ತು ಅದರ ಮಾಲೀಕರಾದ ಫೇಸ್ಬುಕ್ಗೆ ನೋಟಿಸ್ ಜಾರಿ ಮಾಡಿದ್ದರು.
''ಹಿಂದೂ ದೇವರು ಮತ್ತು ದೇವತೆಗಳನ್ನು ನಿಂದಿಸುವುದು ಮಾತ್ರವಲ್ಲದೇ ಗ್ರಾಫಿಕ್ಸ್ ಮತ್ತು ಕಾರ್ಟೂನ್ಗಳ ಮೂಲಕ ಅಶ್ಲೀಲವಾಗಿ ಬಿಂಬಿಸಲಾಗಿದೆ," ಎಂದು ವಕೀಲ ಆದಿತ್ಯ ಸಿಂಗ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು
ಇನ್ಸ್ಟಾಗ್ರಾಂ ಪ್ರತಿಕ್ರಿಯೆ: ''ಆಕ್ಷೇಪಾರ್ಹವಾದ ಮಾಹಿತಿಯನ್ನು ಇನ್ಸ್ಟಾಗ್ರಾಂನಿಂದ ತೆಗೆದು ಹಾಕಲಾಗಿದೆ,'' ಎಂದು ಇನ್ಸ್ಟಾಗ್ರಾಂ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿದೆ.
ಆದರೆ, ನೂತನ ಐಟಿ ನಿಯಮಗಳನ್ನು ಇನ್ಸ್ಟಾಗ್ರಾಂ ಪಾಲಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಹಾಗಾಗಿ, ಹೊಸ ನೀತಿ ಪಾಲಿಸುವಂತೆ ಇನ್ಸ್ಟಾಗ್ರಾಂಗೆ ನಿರ್ದೇಶಿಸುವಂತೆ ನ್ಯಾಯಾಲಯಕ್ಕೆ ಅರ್ಜಿದಾರರು ಮನವಿ ಮಾಡಿದ್ದರು. ಫೇಸ್ಬುಕ್ ಹಾಗೂ ಇನ್ಸ್ಟಾ ಕುರಿತಂತೆ ಅಹವಾಲು ಸ್ವೀಕರಿಸಲು ಒಬ್ಬ ಅಧಿಕಾರಿಯನ್ನು ನೇಮಿಸಲಾಗಿದ್ದು, ಇದರಿಂದ ಮಾಹಿತಿ ಸಂಗ್ರಹ, ಅಹವಾಲು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರು ಕೋರ್ಟ್ ಮುಂದೆ ಮನವಿ ಮಾಡಿದ್ದಾರೆ. ಈ ಬಗ್ಗೆ ಆಗಸ್ಟ್ 16ಕ್ಕೆ ವಿಚಾರಣೆ ನಡೆಯಲಿದೆ.