ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ ಲೋಕ್ ಪಾಲ್ ಕಚೇರಿ ಆರಂಭ
ನವದೆಹಲಿ, ಏಪ್ರಿಲ್ 22: ದೇಶದ ಮೊದಲ ಲೋಕ್ ಪಾಲ್, ಭ್ರಷ್ಟಾಚಾರ ವಿರೋಧಿ ಒಂಬುಡ್ಸ್ ಮನ್ ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ ಕೆಲಸ ಆರಂಭಿಸಲಿದ್ದಾರೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ. ಲೋಕ್ ಪಾಲ್ ಅಧ್ಯಕ್ಷ, ಅದರ ಎಲ್ಲ ಎಂಟು ಸದಸ್ಯರು ಹಾಗೂ ಸಹಾಯಕ ಸಿಬ್ಬಂದಿಗೆ ಹೋಟೆಲ್ ಆವರಣದಲ್ಲಿ ಸ್ಥಳಾವಕಾಶ ಮಾಡಲಾಗಿದೆ.
ದೆಹಲಿಯ ಚಾಣಕ್ಯಪುರಿಯಲ್ಲಿ ಇರುವ ಅಶೋಕ ಹೋಟೆಲ್ ನಲ್ಲಿ ಲೋಕ್ ಪಾಲ್ ಕಚೇರಿ ಆರಂಭ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಇದು ತಾತ್ಕಾಲಿಕ ಕಚೇರಿ ಆಗಿರಲಿದೆ. ಪಿನಾಕಿ ಚಂದ್ರ ಘೋಷ್ ಅವರಿಗೆ ಮಾರ್ಚ್ ಇಪ್ಪತ್ಮೂರರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸಿದ್ದರು.
ಭಾರತದ ಮೊದಲ ಲೋಕಪಾಲರಾಗಿ ಪಿನಾಕಿ ಚಂದ್ರ ಅಧಿಕೃತ ನೇಮಕ
ಇನ್ನು ಲೋಕ್ ಪಾಲ್ ನ ಎಂಟು ಸದಸ್ಯರು ನ್ಯಾ.ಘೋಷ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದರು. ನ್ಯಾಯಮೂರ್ತಿಗಳಾದ ದಿಲೀಪ್ ಬಿ.ಭೋಸ್ಲೆ, ಪ್ರದೀಪ್ ಕುಮಾರ್ ಮೊಹಂತಿ, ಅಭಿಲಾಷಾ ಕುಮಾರಿ, ಅಜಯ್ ಕುಮಾರ್ ತ್ರಿಪಾಠಿ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದ್ದಾರೆ.
ಇನ್ನು ನ್ಯಾಯಾಂಗದ ಹೊರತಾದ ಸದಸ್ಯರಾಗಿ ಸಶಸ್ತ್ರ ಸೀಮಾ ಬಲದ ಮೊದಲ ಮಹಿಳಾ ಮುಖ್ಯಸ್ಥರಾಗಿದ್ದ ಅರ್ಚನಾ ರಾಮಸುಂದರಮ್, ಮಹಾರಾಷ್ಟ್ರದ ಮಾಜಿ ಮುಖ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್, ಮಾಜಿ ಐಆರ್ ಎಸ್ ಅಧಿಕಾರಿ ಮಹೇಂದ್ರ ಕುಮಾರ್, ಗುಜರಾತ್ ಕೇಡರ್ ನ ಮಾಜಿ ಐಎಎಸ್ ಅಧಿಕಾರಿ ಇಂದ್ರಜಿತ್ ಪ್ರಸಾದ್ ಗೌತಮ್ ಪ್ರಮಾಣ ಸ್ವೀಕರಿಸಿದ್ದಾರೆ.
ನಿಯಮದ ಪ್ರಕಾರ, ಅಧ್ಯಕ್ಷರು ಸೇರಿ ಗರಿಷ್ಠ ಎಂಟು ಮಂದಿ ಸದಸ್ಯರು ಲೋಕ್ ಪಾಲ್ ಸಮಿತಿಯಲ್ಲಿ ಇರಬಹುದು. ಅದರಲ್ಲಿ ನಾಲ್ಕು ಮಂದಿ ನ್ಯಾಯಾಂಗದ ಸದಸ್ಯರು ಇರಬೇಕು. ಪ್ರಧಾನಮಂತ್ರಿ ನರೇಂದ್ರ ನೇತೃತ್ವದ ಉನ್ನತ ಮಟ್ಟದ ಆಯ್ಕೆ ಸಮಿತಿಯು ಲೋಕ್ ಪಾಲ್ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡುತ್ತದೆ.
ಲೋಕಪಾಲ ಪಿ.ಕೆ. ಘೋಷ್ ನೇಮಕಕ್ಕೆ ರಾಷ್ಟ್ರಪತಿ ಅಂಕಿತ
ಅರವತ್ತಾರು ವರ್ಷದ ಘೋಷ್ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ. ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.