ತಿದ್ದುಪಡಿಯಾದ ಲೋಕಪಾಲ ವಿಧೇಯಕದಲ್ಲೇನಿದೆ?
ನವದೆಹಲಿ, ಡಿ. 18 : ದೇಶದ ಪಾಲಿಗೆ ಬುಧವಾರ ಐತಿಹಾಸಿಕ ದಿನ ಲೋಕಪಾಲ ಮಸೂದೆಗೆ ಲೋಕಸಭೆ ಬುಧವಾರ ಧ್ವನಿಮತದ ಮೂಲಕ ಅಂಗೀಕಾರ ನೀಡಿದೆ. 40 ವರ್ಷಗಳಲ್ಲಿ ಸಂಸತ್ ನಲ್ಲಿ ಎಂಟು ಬಾರಿ ಮಂಡನೆಯಾಗಿದ್ದ ಮಸೂದೆ ಬೆಂಬಲ ಸಿಗದೆ ಬಿದ್ದು ಹೋಗಿತ್ತು. ರಾಜ್ಯಸಭೆಯೂ ಮಂಗಳವಾರ ಮಸೂದೆಗೆ ಅಂಗೀಕಾರ ನೀಡಿದೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆಗೆ ಅನುಮತಿ ದೊರೆಕಿರುವುದರಿದಂದ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲುಗಲ್ಲೊಂದು ಸ್ಥಾಪನೆಯಾದಂತಾಗಿದೆ. ಬುಧವಾರ ನಾಲ್ಕು ತಾಸು ಲೋಕಸಭೆಯಲ್ಲಿ ಮಸೂದೆ ಬಗ್ಗೆ ಚರ್ಚೆ ನಡೆಯಿತು. ಸಮಾಜವಾದಿ ಪಕ್ಷ ಹೊರತು ಪಡಿಸಿದರೆ, ಉಳಿದ ಪಕ್ಷಗಳು ಮಸೂದೆಗೆ ಬೆಂಬಲ ನೀಡಿದವು. [ಲೋಕಸಭೆಯಲ್ಲೂ ಲೋಕಪಾಲ ಪಾಸು]
ಲೋಕಸಭೆಯ ಉಭಯ ಸದನಗಳಲ್ಲಿ ಅಂಗೀಕಾರವಾದ ಲೋಕಪಾಲ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಲಾಗುತ್ತಿದ್ದು, ಪ್ರಣಬ್ ಮುಖರ್ಜಿ ಅವರು ಸಹಿ ಮಾಡಿದ ಬಳಿಕ "ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ 2011' ಅಧಿಕೃತವಾಗಿ ಜಾರಿಗೆ ಬರದಲಿದೆ. ಹಾಗಾದರೆ ಲೋಕಪಾಲ ಮಸೂದೆಯ ಮುಖ್ಯಾಂಶಗಳೇನು ನೋಡೋಣ
* ಲೋಕಪಾಲದ ಸದಸ್ಯರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿರಬಾರದು.
* ಪ್ರಧಾನ ಮಂತ್ರಿ ಲೋಕಸಭೆ ವಿರೋಧ ಪಕ್ಷದ ನಾಯಕ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಲೋಕಪಾಲರನ್ನು ನೇಮಕ ಮಾಡಲಿದ್ದಾರೆ.
* ಖ್ಯಾತ ನ್ಯಾಯಶಾಸ್ತ್ರ ತಜ್ಞರೊಬ್ಬರು ಲೋಕಪಾಲದ ಸದಸ್ಯರಾಗಿರುತ್ತಾರೆ. ಇವರ ನೇಮಕ ರಾಷ್ಟ್ರಪತಿ ಶಿಫಾರಸಿನ ಅನ್ವಯ ನಡೆಯುತ್ತದೆ.
* ಪ್ರಧಾನಿ ಕೂಡ ಲೋಕಪಾಲ ವ್ಯಾಪ್ತಿಗೆ ಬರುತ್ತಾರೆ. ಆದರೆ ಇದಕ್ಕೆ ಕೆಲವೊಂದು ಮಿತಿಗಳಿವೆ, ಪ್ರಧಾನ ಮಂತ್ರಿ ವಿರುದ್ಧದ ದೂರುಗಳ ನಿರ್ವಹಣೆಗೆ ನಿರ್ದಿಷ್ಟ ಪ್ರಕ್ರಿಯೆಗಳಿವೆ. ಸರ್ಕಾರದಿಂದ ನಿಧಿ ಸ್ವೀಕರಿಸುವ ಸೊಸೈಟಿಗಳು, ಟ್ರಸ್ಟ್, ಸಂಘ ಸಂಸ್ಥೆಗಳು, ಎನ್ ಜಿಓಗಳಿಗೆ ಲೋಕಪಾಲ ಅನ್ವಯವಾಗುತ್ತದೆ.
* ಲೋಕಪಾಲ ತನಿಖೆಗೆ ಕಾಲಮಿತಿ ನಿಗದಿ ಪಡಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಅಪರಾಧಿ ಎಂದು ಸಾಬೀತಾದವರಿಗೆ ಕನಿಷ್ಠ 10 ವರ್ಷ ಶಿಕ್ಷೆಯಾಗುತ್ತದೆ. ವಿಚಾರಣೆಯು 60 ದಿನಗಳೊಳಗೆ ಪೂರ್ಣಗೊಳ್ಳಬೇಕು ಮತ್ತು ಆರು ತಿಂಗಳೊಳಗೆ ತನಿಖೆ ಪೂರ್ಣಗೊಳ್ಳಬೇಕಾಗಿದೆ.
* ಕೇಂದ್ರೀಯ ವಿಚಕ್ಷಣಾ ದಳದ ಮುಖ್ಯನಿರ್ದೇಶಕರ ಶಿಫಾರಸಿನ ಮೇರೆಗೆ ಸಿಬಿಐ ನಿರ್ದೇಶಕ (ವಿಚಾರಣೆ) ಅವರ ನೇಮಕಾತಿ ನಡೆಯುತ್ತದೆ. ಅವರ ಅವಧಿ 2 ವರ್ಷಕ್ಕೆ ಸೀಮಿತ.
* ಯಾವುದೇ ಪ್ರಕರಣ ವಿಚಾರಣೆ ನಡೆಸುವ ಅಧಿಕಾರಿಗಳ ವರ್ಗಾವಣೆಗೆ ಲೋಕಪಾಲದ ಅನುಮತಿ ಪಡೆಯಬೇಕು.
* ಸುಪ್ರೀಂ ಕೋರ್ಟ್ ಮಧ್ಯಾಂತರ ಆದೇಶದ ಮೇರೆಗೆ ರಾಷ್ಟ್ರಪತಿಗಳು ಲೋಕಪಾಲದ ಸದಸ್ಯರನ್ನು ವಜಾಗೊಳಿಸಬಹುದು. ಅಲ್ಲದೇ, ಸುಪ್ರೀಂ ಕೋರ್ಟ್ ವಿಚಾರಣೆಯಾದ ಬಳಿಕವೂ ರಾಷ್ಟ್ರಪತಿಗಳು ಲೋಕಪಾಲದ ಸದಸ್ಯರನ್ನು ವಜಾಗೊಳಿಸಬಹುದು.
* ಲೋಕಪಾಲ ಜಾರಿಗೆ ಬಂದ ಒಂದು ವರ್ಷದವೊಳಗೆ ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕವಾಗಬೇಕು.