ಸಂಸತ್ನಲ್ಲಿ ಅಂಬರೀಶ್ಗೆ ಅವಮಾನ?: ಬುಧವಾರವೂ ಸಂತಾಪ ಸೂಚನೆಯಿಲ್ಲ
Recommended Video
ನವದೆಹಲಿ, ಡಿಸೆಂಬರ್ 12 : ಕಳೆದ ತಿಂಗಳು ನಿಧನರಾದ ನಟ, ರಾಜಕಾರಣಿ ಅಂಬರೀಶ್ ಅವರ ನಿಧನಕ್ಕೆ ಎರಡನೆಯ ದಿನವೂ ಸಂಸತ್ ಸಂತಾಪ ವ್ಯಕ್ತಪಡಿಸದೆ ಇರುವುದು ರಾಜ್ಯ ರಾಜಕೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸಂಸತ್ ಚಳಿಗಾಲದ ಅಧಿವೇಶನ ಮಂಗಳವಾರ ಆರಂಭವಾದಾಗ ಈ ಅವಧಿಯಲ್ಲಿ ಮೃತಪಟ್ಟ ಗಣ್ಯರಿಗೆ ಸಂತಾಪ ವ್ಯಕ್ತಪಡಿಸಲಾಯಿತು.
ಅದರಲ್ಲಿ ಬಿಜೆಪಿಯ ಅನಂತ್ ಕುಮಾರ್ ಅವರ ಹೆಸರು ಇತ್ತು. ಆದರೆ, ಕೇಂದ್ರದ ಮಾಜಿ ಸಚಿವರೂ ಆಗಿದ್ದ ಅಂಬರೀಶ್ ಮತ್ತು ಜಾಫರ್ ಷರೀಫ್ ಅವರ ಹೆಸರನ್ನು ಕಲಾಪದಲ್ಲಿ ಪ್ರಸ್ತಾಪಿಸಲೇ ಇಲ್ಲ. ಹೀಗಾಗಿ ಅಂಬರೀಶ್ ಅವರಿಗೆ ಸಂತಾಪ ಸೂಚನೆ ಆಗಲಿಲ್ಲ.
ಸಂಸತ್ ಅಧಿವೇಶನ ಆರಂಭವಾದ ಸಂದರ್ಭದಲ್ಲಿ ಅಧಿವೇಶನದ ಪೂರ್ವದ ಅವಧಿಯ ಸಂದರ್ಭದಲ್ಲಿ ಮೃತಪಟ್ಟ ಗಣ್ಯರಿಗೆ ಸಂತಾಪ ಸೂಚಿಸುವುದು ವಾಡಿಕೆ.
ಮೈಸೂರಿನ ವಿಮಾನ ನಿಲ್ದಾಣಕ್ಕೆ ನಟ ಅಂಬರೀಶ್ ಹೆಸರಿಡುವಂತೆ ಒತ್ತಾಯ
ಲೋಕಸಭೆಯ ಸ್ಪೀಕರ್ ಅಗಲಿದ ಗಣ್ಯರ ಹೆಸರನ್ನು ಪ್ರಸ್ತಾಪಿಸುತ್ತಾರೆ. ಎಲ್ಲ ಸದಸ್ಯರೂ ಎದ್ದು ನಿಂತು ಸಂತಾಪ ಸೂಚನೆ ಮಾಡುತ್ತಾರೆ. ಕೆಲವೊಮ್ಮೆ ಗಣ್ಯರ ಹೆಸರು ತಪ್ಪಿ ಹೋದರೂ ಅವರ ಹೆಸರನ್ನು ನೆನಪಿಸಿದಾಗ ಸೇರಿಸಿಕೊಂಡು ಸಂತಾಪ ಸೂಚಿಸಲಾಗುತ್ತದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಸಚಿವ ಅನಂತ್ ಕುಮಾರ್, ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ, ಸಂಸದ ಭೋಲಾ ಸಿಂಗ್, ಮೊಹಮ್ಮದ್ ಅಸ್ರರಾಲ್ ಹಕ್ ಖಮ್ಸಿ, ಎಂ ಐ ಶ್ರೀನಿವಾಸ್ ರಾಜ್ಯಸಭೆಯ ಮಾಜಿ ಸದಸ್ಯ ಆರ್ ಕೆ ದೊರೇಂದ್ರ ಸಿಂಗ್, ಕುಲದೀಪ್ ನಯ್ಯರ್, ಕರ್ಮಾ ತೊಪ್ಡೆನ್, ನಂದಮೂರಿ ಹರಿಕೃಷ್ಣ, ದರ್ಶನ್ ಸಿಂಗ್ ಯಾದವ್, ರತ್ನಾಕರ್ ಪಾಂಡೆ, ಸತ್ಯ ಪ್ರಕಾಶ್ ಮಾಳವೀಯ, ರಾಮ ಡಿಯೊ ಭಂಡಾರಿ, ಮಾಲತಿ ಶರ್ಮಾ, ಎನ್ ಡಿ ತಿವಾರಿ, ಪಿ ಕೆ ಮಹೇಶ್ವರಿ ಮತ್ತು ಬೈಶ್ನಬ್ ಪರಿದಾ ಅವರಿಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸಂತಾಪ ಸಲ್ಲಿಸಲಾಯಿತು.
ಆದರೆ, ಅಂಬರೀಶ್ ಅವರ ಹೆಸರನ್ನು ಕೈಬಿಟ್ಟಿರುವುದು ರಾಜ್ಯದ ನಾಯಕರಲ್ಲಿ ಬೇಸರ ಮೂಡಿಸಿದೆ.
ದೇವೇಗೌಡರ ಅಸಮಾಧಾನ
ಈ ಬಗ್ಗೆ ಸಂಸದ ಎಚ್ ಡಿ ದೇವೇಗೌಡ ಸದನದಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂಬರೀಶ್ ಅವರು ಕೇಂದ್ರದ ಸಚಿವರಾಗಿದ್ದರು. ರಾಜಕಾರಣಿಯಾಗಿ ಅವರ ಸೇವೆ ಗಣನೀಯ. ಅವರನ್ನು ಸ್ಮರಿಸಿಕೊಳ್ಳುವುದು ಸದನದ ಕರ್ತವ್ಯ ಎಂದು ಜ್ಞಾಪಿಸಿದರು. ಆಗ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಮರುದಿನದ ಕಲಾಪದ ವೇಳೆ ಸಂತಾಪ ಸೂಚನೆ ಮಾಡುವುದಾಗಿ ತಿಳಿಸಿದ್ದರು.
ಸುಮಲತಾ ಅಂಬರೀಶ್ ರ ಹೃದಯಸ್ಪರ್ಶಿ ಸಂದೇಶದಲ್ಲಿ ಏನಿದೆ?
ಮಲ್ಲಿಕಾರ್ಜುನ ಖರ್ಗೆ ಅತೃಪ್ತಿ
ಬುಧವಾರ ಕೇಂದ್ರದ ರೈಲ್ವೆ ಖಾತೆ ಮಾಜಿ ಸಚಿವ ಸಿ. ಜಾಫರ್ ಷರೀಪ್ ಅವರಿಗೆ ಸಂತಾಪ ಸೂಚನೆ ನಡೆಯಿತು. ಆದರೆ, ಪುನಃ ಅಂಬರೀಶ್ ಅವರ ಹೆಸರನ್ನು ಕೈಬಿಡಲಾಯಿತು.
ಇದರಿಂದ ಅಸಮಾಧಾನಗೊಂಡ ಮಲ್ಲಿಕಾರ್ಜುನ ಖರ್ಗೆ, ಅಂಬರೀಶ್ ಅವರಿಗೆ ಸಂತಾಪ ಸೂಚಿಸಬೇಕು ಎಂದು ಮನವಿ ಮಾಡಿದರು. ಆದರೆ, ಕಲಾಪಕ್ಕೆ ಚಾಲನೆ ನೀಡುವ ಹಂತಕ್ಕೆ ಬಂದಿದ್ದರಿಂದ ಅವರಿಗೆ ಗುರುವಾರ ಸಂತಾಪ ಸೂಚನೆ ಮಾಡುವುದಾಗಿ ಸ್ಪೀಕರ್ ತಿಳಿಸಿದರು.
ಅಂಬರೀಶ್ ಕೊನೆಯ ಆಸೆ ಈಡೇರಲೇ ಇಲ್ಲ: ಸುಮಲತಾ ನೋವಿನ ಮಾತು
ಕೇಂದ್ರದ ಸಣ್ಣತನ
ಸಂಸತ್ ಕಲಾಪದ ವೇಳೆ ಅಂಬರೀಶ್ ಅವರ ಹೆಸರನ್ನು ಪದೇ ಪದೇ ಕೈಬಿಟ್ಟಿರುವುದರ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಅಂಬರೀಶ್ ಅವರ ಹೆಸರನ್ನು ಕಡೆಗಣಿಸಿರುವುದು ಕೇಂದ್ರದ ಸಣ್ಣತನದ ರಾಜಕಾರಣವನ್ನು ತೋರಿಸುತ್ತದೆ. ಇದು ದಿವಂಗತ ಅಂಬರೀಶ್ ಅವರಿಗೆ ಮಾಡಿದ ಅವಮಾನ ಎಂದು ಪ್ರತಿಕ್ರಿಯಿಸಿದ್ದಾರೆ.
ಮಾಹಿತಿಯನ್ನೇ ಕಳುಹಿಸಿಲ್ಲ?
ಗಣ್ಯ ವ್ಯಕ್ತಿಗಳು ನಿಧನರಾದ ಸಂದರ್ಭದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಅದರ ವಿವರಗಳನ್ನು ರವಾನಿಸಬೇಕು. ಅದು ಅವರ ಕರ್ತವ್ಯ. ಆದರೆ, ಮಂಡ್ಯ ಜಿಲ್ಲಾಧಿಕಾರಿಯಾಗಲೀ ಅಥವಾ ಬೆಂಗಳೂರು ಜಿಲ್ಲಾಧಿಕಾರಿಯಾಗಲೀ ಅಂಬರೀಶ್ ಅವರ ಹೆಸರನ್ನು ಲೋಕಸಭೆಗೆ ರವಾನಿಸಿಲ್ಲ. ಹೀಗಾಗಿ ಅಂಬರೀಶ್ ಅವರ ನಿಧನದ ಬಗ್ಗೆ ಅಧಿಕೃತ ಮಾಹಿತಿ ದೊರಕದ ಕಾರಣ ಅವರ ಹೆಸರನ್ನು ಸಂತಾಪ ಸೂಚನೆಯಲ್ಲಿ ಪ್ರಸ್ತಾಪಿಸಲಾಗಿಲ್ಲ ಎನ್ನಲಾಗಿದೆ.