ರಾಹುಲ್ರನ್ನು ಸೋಲಿಸಿದ ಸ್ಮೃತಿ ಇರಾನಿಗೆ ಭರ್ಜರಿ ಚಪ್ಪಾಳೆ ಸ್ವಾಗತ
ನವದೆಹಲಿ, ಜೂನ್ 17: ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸೋಮವಾರ ಆರಂಭವಾದ ಮಳೆಗಾಲದ ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ಭರ್ಜರಿ ಚಪ್ಪಾಳೆಯ ಶ್ಲಾಘನೆ ವ್ಯಕ್ತವಾಯಿತು.
ಸ್ಮೃತಿ ಅವರನ್ನು ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದಾಗ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಇತರೆ ಕೇಂದ್ರ ಸಚಿವರು ಮತ್ತು ಸಂಸದರು ಸೇರಿದಂತೆ ಆಡಳಿತಾರೂಢ ಎನ್ಡಿಎದ ಸದಸ್ಯರು ಬೆಂಚನ್ನು ಸುದೀರ್ಘ ಸಮಯ ತಟ್ಟುವ ಮೂಲಕ ಸ್ವಾಗತಿಸಿದರು.
ಗುರುವಿನ ಹೆಸರು ಬಳಕೆ: ಸಾಧ್ವಿ ಪ್ರಗ್ಯಾ ಪ್ರಮಾಣವಚನ ಸ್ವೀಕಾರಕ್ಕೆ ಅಡ್ಡಿ
ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಸ್ಮೃತಿ ಇರಾನಿ, ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್, ರಾಹುಲ್ ಗಾಂಧಿ ಅವರ ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ವಿರೋಧಪಕ್ಷದ ಸದಸ್ಯರಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಾಜರಿರಲಿಲ್ಲ. ಸಚಿವೆ ಸ್ಮೃತಿ ಇರಾನಿ ಅವರು ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ 55 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದರು. ಸುದೀರ್ಘ ಕಾಲದ ಗಾಂಧಿ ಕುಟುಂಬದ ಪ್ರಬಲ ಕ್ಷೇತ್ರವಾಗಿದ್ದ ಅಮೇಥಿಯಲ್ಲಿ ಮೊದಲ ಬಾರಿಗೆ ಕುಟುಂಬದ ಸದಸ್ಯರೊಬ್ಬರನ್ನು ಸೋಲಿಸುವ ಮೂಲಕ ಸ್ಮೃತಿ ಇತಿಹಾಸ ಬರೆದಿದ್ದಾರೆ.