ಉಗ್ರರನ್ನು ಹಣಿಯಲು ಎನ್ಐಎಗೆ ಬಲ: ಮಸೂದೆ ಅಂಗೀಕಾರ, ಲೋಕಸಭೆಯಲ್ಲಿ ಜಟಾಪಟಿ
ನವದೆಹಲಿ, ಜುಲೈ 15: ಎನ್ಐಎ (ತಿದ್ದುಪಡಿ) ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಭಯೋತ್ಪಾದನೆಯ ವಿರುದ್ಧ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದಂತೆ ಶೂನ್ಯ ಸಹಿಷ್ಣುತೆಯ ತನ್ನ ನೀತಿಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖಾ ಅಧಿಕಾರಗಳನ್ನು ಮತ್ತಷ್ಟು ವಿಸ್ತರಿಸಲು ಈ ಮಸೂದೆ ನೆರವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಗೃಹ ಖಾತೆ ರಾಜ್ಯಸಚಿವ ಜಿ. ಕೃಷ್ಣನ್ ರೆಡ್ಡಿ ಅವರು ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿ, ಅದನ್ನು ಅನುಮೋದಿಸುವಂತೆ ಎಲ್ಲ ಪಕ್ಷಗಳ ಬೆಂಬಲ ಕೋರಿದರು. ಹಾಗೆಯೇ ವಿಚಾರಣಾ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಮುಖ್ಯ ನ್ಯಾಯಮೂರ್ತಿಯವರು ವಿಶೇಷ ನ್ಯಾಯಾಲಯದ ನ್ಯಾಯಾಧೀಶರನ್ನು ನಡೆಸುವ ಪದ್ಧತಿ ಮುಂದುವರಿಯಲಿದೆ ಎಂದು ತಿಳಿಸಿದರು.
2008ರ ನವೆಂಬರ್ 26ರಂದು ಮುಂಬೈ ಮೇಲೆ ಉಗ್ರರ ದಾಳಿ ನಡೆದು 166 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘೋರ ದಾಳಿ ಬಳಿಕ 2009ರಲ್ಲಿ ಎನ್ಐಎಯನ್ನು ರಚಿಸಲಾಗಿತ್ತು.
ಲೋಕಸಭೆ ಬಳಿಕ ರಾಜ್ಯ ಸಭೆಯಲ್ಲೂ ಆಧಾರ್ ಮಸೂದೆ ಮಂಡನೆ
'ನೂತನ ಕಾನೂನು ಭಾರತೀಯರು ಹಾಗೂ ವಿದೇಶದಲ್ಲಿರುವ ಅವರ ಆಸ್ತಿಗಳನ್ನು ಗುರಿಯನ್ನಾಗಿಸುವ ಭಯೋತ್ಪಾದನೆ ಪ್ರಕರಣಗಳನ್ನು ತನಿಖೆ ಮಾಡಲು ಸಂಸ್ಥೆಗೆ ಅವಕಾಶ ನೀಡಲಿದೆ. ಜತೆಗೆ ಸೈಬರ್ ಭಯೋತ್ಪಾದನೆಯಲ್ಲದೆ ಶಸ್ತ್ರಾಸ್ತ್ರ ಹಾಗೂ ಮಾನವ ಕಳ್ಳಸಾಗಣೆ ಪ್ರಕರಣಗಳ ತನಿಖೆ ನಡೆಸುವ ನಿಟ್ಟಿನಲ್ಲಿಯೂ ಎನ್ಐಎಗೆ ಬಲ ನೀಡಲಿದೆ' ಎಂದು ಕೃಷ್ಣನ್ ರೆಡ್ಡಿ ತಿಳಿಸಿದರು.
ಪೊಲೀಸ್ ರಾಜ್ಯ ಮಾಡುವ ಪ್ರಯತ್ನ
ಕಾಂಗ್ರೆಸ್ ಈ ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಈ ಮಸೂದೆಯ ಮೂಲಕ ಕೇಂದ್ರ ಸರ್ಕಾರವು ಭಾರತವನ್ನು 'ಪೊಲೀಸ್ ರಾಜ್ಯ'ವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತು.
'2008ರ ಎನ್ಐಎ ಮಸೂದೆಯನ್ನು, ದೇಶವು ಹಿಂದೆಂದೂ ಕಾಣದಂತಹ ಭೀಕರ ಘಟನೆಗಳಿಗೆ ಸಾಕ್ಷಿಯಾದ ಬಳಿಕದ ನಿರ್ದಿಷ್ಟ ಸಂದರ್ಭಗಳಿಗಾಗಿ ರೂಪಿಸಲಾಗಿತ್ತು' ಎಂದು ಕಾಂಗ್ರೆಸ್ ಸಂಸದ ಮನೋಜ್ ತಿವಾರಿ ಹೇಳಿದರು.
ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ನಳಿನ್ ಕುಮಾರ್ ಕಟೀಲ್ ಮಾತು
ಅಮಾಯಕರು ಬಲಿಪಶು ಆಗುತ್ತಿದ್ದಾರೆ
''ಎನ್ಐಎ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವದ ಗೊಂದಲ ಇನ್ನೂ ಬಗೆಹರಿದಿಲ್ಲ. ಬಾಂಬೆ ಹೈಕೋರ್ಟ್ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿತ್ತು. ಆದರೆ, ಅದಕ್ಕೆ ಜಮ್ಮು ಮತ್ತು ಕಾಶ್ಮೀರ ನ್ಯಾಯಾಲಯ ಇನ್ನೂ ಅನುಮತಿ ನೀಡಿಲ್ಲ. 2013ರ ನವೆಂಬರ್ನಲ್ಲಿ ಗುವಾಹಟಿ ಹೈಕೋರ್ಟ್ನ ವಿಭಾಗೀಯ ಪೀಠವು 'ಅಕ್ರಮ ಸಂಸ್ಥೆ' ಕುರಿತು ಮಾತನಾಡಿತ್ತು'' ಎಂದು ಹೇಳಿದರು.
ತನಿಖಾ ಸಂಸ್ಥೆಗಳು 'ರಾಜಕೀಯ ಪ್ರಯೋಜನ'ಗಳಿಗಾಗಿ ಮತ್ತು 'ಮಾಧ್ಯಮ ಸೋರಿಕೆಯಿಂದ ಪ್ರಭಾವಿತ'ವಾಗಿ ದುರ್ಬಳಕೆಯಾಗುತ್ತಿವೆ. ಇದರಿಂದಾಗಿ ಅನೇಕ ಅಮಾಯಕರನ್ನು ತಪ್ಪಿತಸ್ಥರೆಂದು ಸಾಬೀತುಪಡಿಸಲಾಗಿದೆ' ಎಂದು ಆರೋಪಿಸಿದರು.
ಬಿಜೆಪಿ ದುರ್ಬಳಕೆ ಮಾಡಿಕೊಳ್ಳೊಲ್ಲ
ಇದಕ್ಕೆ ತಿರುಗೇಟು ನೀಡಿದ ಗೃಹ ಸಚಿವ ಅಮಿತ್ ಶಾ ಅವರು, 'ಬಿಜೆಪಿಯು ಎನ್ಐಎ ಕಾನೂನನ್ನು ಎಂದಿಗೂ ಧರ್ಮದ ಆಧಾರದಲ್ಲಿ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಆದರೆ, ಅದರ ಬದಲಾಗಿ ಆರೋಪಿಯು ಯಾವುದೇ ಧರ್ಮಕ್ಕೆ ಸೇರಿದವನಾದರೂ ಭಯೋತ್ಪಾದನೆಯನ್ನು ಅಂತ್ಯಗೊಳಿಸುವುದಕ್ಕೆ ಬದ್ಧವಾಗಿದೆ' ಎಂದು ತಿಳಿಸಿದರು.
2002ರ ಭಯೋತ್ಪಾದನೆ ನಿಗ್ರಹ ಕಾಯ್ದೆಯನ್ನು ರದ್ದುಗೊಳಿಸಿದ್ದಕ್ಕೆ ಆಗಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಕಾಯ್ದೆಯನ್ನು ರದ್ದುಗೊಳಿಸಿದ್ದು ದುರ್ಬಳಕೆಗಾಗಿ ಅಲ್ಲ, ಆದರೆ ತಮ್ಮ ಮತ ಬ್ಯಾಂಕ್ ರಕ್ಷಿಸಿಕೊಳ್ಳಲು ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರವು ಭಯೋತ್ಪಾದನಾ ವಿರೋಧಿ ಕಾಯ್ದೆಯನ್ನು ರದ್ದುಗೊಳಿಸಿದ ಬಳಿಕ ಭಯೋತ್ಪಾದನಾ ದಾಳಿಗಳು ಅಧಿಕಗೊಂಡವು. ಮುಂಬೈ ದಾಳಿಯ ಬಳಿಕ ತನಿಖಾ ಸಂಸ್ಥೆಯೊಂದನ್ನು ಸ್ಥಾಪಿಸುವ ಒತ್ತಡಕ್ಕೆ ಸಿಲುಕಿತು. ಭಯೋತ್ಪಾದಕರು ಮತ್ತು ಜಗತ್ತಿಗೆ ಕಠಿಣ ಸಂದೇಶವನ್ನು ರವಾನಿಸಲು ಎನ್ಐಎಗೆ ವಿಶೇಷ ಅಧಿಕಾರ ನೀಡುವ ವಿಚಾರದಲ್ಲಿ ಇಡೀ ಸಂಸತ್ತು ಒಂದೇ ಧ್ವನಿಯಲ್ಲಿ ಮಾತನಾಡಬೇಕು ಎಂದು ಪ್ರತಿಪಕ್ಷಗಳಿಗೆ ಸಲಹೆ ನೀಡಿದರು.
ಬ್ಯಾಂಕಿಂಗ್ ಪರೀಕ್ಷೆ ಸ್ಥಳೀಯ ಭಾಷೆಗೆ ಆದ್ಯತೆ: ನಿರ್ಮಲಾ ಸೀತಾರಾಮನ್
ಸತ್ಯಪಾಲ್ ಸಿಂಗ್-ಓವೈಸಿ ಜಟಾಪಟಿ
ತಮ್ಮ ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುವ ಸಲುವಾಗಿ ಕೆಲವು ರಾಜಕೀಯ ಪಕ್ಷಗಳು ಭಯೋತ್ಪಾದನೆಯನ್ನು ಪೋಷಿಸಿದ್ದವು. ಈ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡುವ ಪ್ರಯತ್ನದಲ್ಲಿ ಭಯೋತ್ಪಾದನೆಯ ವಿರುದ್ಧದ ಕಾನೂನುಗಳು ಬಲಗೊಳ್ಳಬೇಕು ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಹೇಳಿದರು. ಅವರ ಹೇಳಿಕೆಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು.
ಪ್ರಕರಣವೊಂದರ ತನಿಖೆಯ ದಿಕ್ಕನ್ನು ಬದಲಿಸಬೇಕು ಇಲ್ಲದಿದ್ದರೆ ವರ್ಗಾವಣೆ ಎದುರಿಸಬೇಕಾಗುತ್ತದೆ ಎಂದು ರಾಜಕೀಯ ನಾಯಕರೊಬ್ಬರು ಹೈದರಾಬಾದ್ ಪೊಲೀಸ್ ಕಮಿಷನರ್ ಅವರಿಗೆ ಬೆದರಿಕೆ ಹಾಕಿದ್ದರು ಎಂದು ಸತ್ಯಪಾಲ್ ಸಿಂಗ್ ಆರೋಪಿಸಿದರು. ಆಗ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕಿಡಿಕಾರಿದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಸದನದಲ್ಲಿ ಹಾಜರುಪಡಿಸುವಂತೆ ಆಗ್ರಹಿಸಿದರು.
'ನಿಮ್ಮ ಮನಸ್ಸಿನಲ್ಲೇ ಭಯವಿರುವಾಗ'...!
ಆಗ ಓವೈಸಿ ಕಡೆ ಬೊಟ್ಟು ಮಾಡಿದ ಅಮಿತ್ ಶಾ, ಪ್ರತಿಪಕ್ಷದವರು ಮಾತನಾಡುವಾಗ ಆಡಳಿತಪಕ್ಷದವರು ಅಡ್ಡಿಪಡಿಸಲಿಲ್ಲ. ಈಗ ಅವರೂ ಸುಮ್ಮನಿರಬೇಕು ಎಂದು ಹೇಳಿದರು. ತಮ್ಮ ಕಡೆಗೆ ಬೆರಳು ತೋರಿಸುವುದು ಬೇಡ. ಅದರಿಂದ ತಮಗೆ ಯಾವ ಭಯವೂ ಆಗುವುದಿಲ್ಲ ಎಂದು ಓವೈಸಿ ಸಿಟ್ಟಿನಿಂದ ಹೇಳಿದರು.
ಆಗ ಅಮಿತ್ ಶಾ, ''ನಿಮ್ಮ ಮನಸ್ಸಿನಲ್ಲಿ ಭಯ ಇರುವಾಗ ನಾನೇನು ಮಾಡಲು ಸಾಧ್ಯ?'' ಎಂದು ಪ್ರತಿಕ್ರಿಯಿಸಿದರು.
ಏನಿದು ಎನ್ಐಎ ಕಾಯ್ದೆ?
ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಯನ್ನು 'ಭಯೋತ್ಪಾದಕ' ಎಂದು ಘೋಷಿಸಲು ಈ ಮಸೂದೆ ಅವಕಾಶ ನೀಡಲಿದೆ. ಈವರೆಗಿನ ಕಾಯ್ದೆಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದ ಸಂಘಟನೆಗಳನ್ನು 'ಭಯೋತ್ಪಾದನಾ ಸಂಘಟನೆ' ಎಂದು ಘೋಷಿಸಲು ಅವಕಾಶವಿದೆಯೇ ವಿನಾ, ವ್ಯಕ್ತಿಯನ್ನು 'ಭಯೋತ್ಪಾದಕ' ಎಂದು ಘೋಷಿಸಲು ಅವಕಾಶವಿಲ್ಲ.
ಎನ್ಐಎ ತಿದ್ದುಪಡಿ ಮಸೂದೆಯು ನಿರ್ದಿಷ್ಟ ಅಪರಾಧಗಳ ಪಟ್ಟಿಯಲ್ಲಿರುವ ಅಪರಾಧಗಳ ತನಿಖೆ ಮತ್ತು ವಿಚಾರಣೆಗೆ ಈ ಕಾಯ್ದೆ ಅವಕಾಶ ನೀಡಲಿದೆ. ಜತೆಗೆ ಈ ಅಪರಾಧಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಸಹ ಅನುಮತಿ ನೀಡಲಿದೆ.