ಸೂಕ್ತ ಸಮಯದಲ್ಲಿ ಜಮ್ಮು ಕಾಶ್ಮೀರಕ್ಕೆ ರಾಜ್ಯತ್ವ ಸ್ಥಾನಮಾನ; ಅಮಿತ್ ಶಾ
ನವದೆಹಲಿ, ಫೆಬ್ರುವರಿ 13: ಲೋಕಸಭೆಯಲ್ಲಿ ಶನಿವಾರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಕಾಯ್ದೆ 2021 ಮಂಡನೆಯಾಗಿದ್ದು, ಜಮ್ಮು ಹಾಗೂ ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯತ್ವ ಸ್ಥಾನಮಾನ ನೀಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ಲೋಕಸಭೆಯಲ್ಲಿ ಈ ಕಾಯ್ದೆ ಬೆಂಬಲಿಸಿ ಮಾತನಾಡಿದ ಅವರು, "ವಿರೋಧ ಪಕ್ಷಗಳು ಜಮ್ಮು ಹಾಗೂ ಕಾಶ್ಮೀರ, ಲಡಾಖ್ ವಿಷಯಗಳನ್ನು ರಾಜಕೀಯಗೊಳಿಸಬಾರದು. ಯಾರಿಗೂ ಇಲ್ಲಿ ಭಯವಿಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರ ದೇಶದ ಅತಿ ಸೂಕ್ಷ್ಮ ಭಾಗ. ಈ ಭಾಗದಲ್ಲಿ ಶಾಂತಿ ಸ್ಥಾಪಿಸುವ ಭರವಸೆ ನೀಡುತ್ತಿದ್ದೇವೆ. ಗಾಯವನ್ನು ಮತ್ತೆ ಕೆದಕಲು ಅವಕಾಶ ನೀಡುವುದಿಲ್ಲ" ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಕಾಯ್ದೆ 2021ಗೆ ಅಂಗೀಕಾರ
ಆಗಸ್ಟ್ 5, 2019ರಲ್ಲಿ 370 ಅನುಚ್ಛೇದದಡಿಯಲ್ಲಿ ಕಣಿವೆ ರಾಜ್ಯಕ್ಕೆ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಈ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಲಾಗಿದೆ. ಆದರೆ ರಾಜತ್ವ ನೀಡುವುದಿಲ್ಲ ಎಂದು ನಾನು ಎಂದೂ ಹೇಳಿಲ್ಲ. ಶೀಘ್ರವೇ ಸೂಕ್ತ ಸ್ಥಾನಮಾನ ದೊರೆಯಲಿದೆ" ಎಂದು ಹೇಳಿದರು.
ಜಮ್ಮು ಹಾಗೂ ಕಾಶ್ಮೀರದ ನಾಗರಿಕ ಸೇವಾ ಅಧಿಕಾರಿಗಳ ಕೇಡರ್ ಅನ್ನು ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಕೇಂದ್ರಾಡಳಿತ ಪ್ರದೇಶಗಳ ಕೇಡರ್ ನೊಂದಿಗೆ ವಿಲೀನಗೊಳಿಸುವ ಮಸೂದೆ ಇದಾಗಿದ್ದು, ಗೃಹಖಾತೆ ವ್ಯವಹಾರಗಳ ಸಚಿವ ಜಿ.ಕಿಶನ್ ರೆಡ್ಡಿ ಅವರು ಶನಿವಾರ ಜಮ್ಮು ಹಾಗೂ ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಕಾಯ್ದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಸರ್ಕಾರ ಶ್ರಮಿಸುತ್ತದೆ ಎಂದು ಹೇಳಿದರು.
ಆಗಸ್ಟ್ 5 ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ಅನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿತ್ತು. ಆಗಸ್ಟ್ 6 ರಂದು ಲೋಕಸಭೆಯಲ್ಲಿ ಕಾಯ್ದೆಗೆ ಅಂಗೀಕಾರ ದೊರೆತಿತ್ತು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಅನುಚ್ಛೇದ 370 ಮತ್ತು 35 ಎ ರದ್ದುಗೊಳಿಸಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ 2019 ಮಸೂದೆಯನ್ನು ಮಂಡಿಸಿತ್ತು.