ಲೋಕಸಭೆಯಲ್ಲಿ ವಿರೋಧದ ನಡುವೆ ಕೃಷಿ ಸಂಬಂಧಿತ ಮಸೂದೆ ಅಂಗೀಕಾರ
ನವದೆಹಲಿ, ಸಪ್ಟೆಂಬರ್.16: ಲೋಕಸಭೆಯಲ್ಲಿ ತೀವ್ರ ವಿರೋಧದ ನಡುವೆಯೂ ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳನ್ನು ಅಂಗೀಕರಿಸಲಾಗಿದ್ದು, ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಕಲಾಪವನ್ನು ಮುಂದೂಡಲಾಗಿದೆ.
ಕೇಂದ್ರ ಸರ್ಕಾರವು ರೈತರ ಉತ್ಪಾದನೆಯ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಸೌಲಭ್ಯ) ಮಸೂದೆ, ಕೃಷಿ ಸೇವೆ ಮತ್ತು ಬೆಲೆ ನಿಗದಿ ಬಗ್ಗೆ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ಮಸೂದೆ, ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಿದೆ.
ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ರಾಜೀನಾಮೆ
ಕೇಂದ್ರ ಸರ್ಕಾರದ ಉದ್ದೇಶಿತ ಕೃಷಿ ಸಂಬಂಧಿತ ಮಸೂದೆ ಮಂಡನೆಗೆ ಶಿರೋಮಣಿ ಅಕಾಲಿದಳ ವಿರೋಧ ಭಾರಿ ವ್ಯಕ್ತಪಡಿಸಿದ ಬೆನ್ನಲ್ಲೇ ಮೋದಿ ಸಚಿವ ಸಂಪುಟದಿಂದ ಪಕ್ಷದ ಏಕೈಕ ಪ್ರತಿನಿಧಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಗುರುವಾರದಂದು ಶಿರೋಮಣಿ ಅಕಾಲಿ ದಳಾ ಅಧ್ಯಕ್ಷ ಸುಖ್ ಬೀರ್ ಸಿಂಗ್ ಬಾದಲ್ ಅವರು ಈ ಬಗ್ಗೆ ಘೋಷಿಸಿದ್ದರು.
ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ರಾಜೀನಾಮೆ:
ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ಸಲ್ಲಿಸಿದ್ದಾರೆ. ರೈತ ಸಂಘಟನೆ, ರೈತರು ಮತ್ತು ಕೃಷಿ ಕಾರ್ಮಿಕರು ವ್ಯಕ್ತಪಡಿಸುವ ಎಲ್ಲ ಮೀಸಲಾತಿ ಬೇಡಿಕೆಗಳನ್ನು ಪರಿಹರಿಸಬೇಕಿದೆ. ಅಲ್ಲಿವರೆಗೆ ಸಂಸತ್ತಿನಲ್ಲಿ ಕೃಷಿ ಸಂಬಂಧಿತ ಮೂರು ಮಸೂದೆಗಳನ್ನು ಅನುಮೋದನೆಗಾಗಿ ಪರಿಚಯಿಸದಂತೆ ಶಿರೋಮಣಿ ಅಕಾಲಿ ದಳ ಕೇಂದ್ರಕ್ಕೆ ಮನವಿ ಮಾಡಿತ್ತು.
ರೈತರ ಪರ ಬೆಂಬಲ ಎಂದ ಶಿರೋಮಣಿ ಅಕಾಲಿ ದಳ:
ಕೇಂದ್ರ ಸರ್ಕಾರವು ಕೃಷಿ ಸಂಬಂಧಿತ ಮಸೂದೆಯನ್ನು ಅಂಗೀಕರಿಸಿರಬಹುದು. ಶಿರೋಮಣಿ ಅಕಾಲಿ ದಳ ಮಾತ್ರ ರೈತರ ಬೆಂಬಲಕ್ಕೆ ಸದಾ ಇರುತ್ತದೆ. ಪಕ್ಷದ ಮುಂದಿನ ನಡೆ ಏನು ಎನ್ನುವುದರ ಬಗ್ಗೆ ಚರ್ಚಿಸುವುದಕ್ಕೆ ಆದಷ್ಟು ಬೇಗ ಸಭೆ ಸೇರುವುದಾಗಿ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ತಿಳಿಸಿದ್ದಾರೆ.