ಕಾಂಗ್ರೆಸ್ ಪ್ರಣಾಳಿಕೆ : ಕಾಮ್, ದಾಮ್, ಶಾನ್, ಸುಶಾಸನ್, ಸ್ವಾಭಿಮಾನ್ ಮತ್ತು ಸಮ್ಮಾನ್!
ನವದೆಹಲಿ, ಏಪ್ರಿಲ್ 02 : "ಚುನಾವಣಾ ಪ್ರಣಾಳಿಕೆಯಲ್ಲಿ ಏನೇನು ಅಶ್ವಾಸನೆ ನೀಡುತ್ತಿದ್ದೇವೆಯೋ ಅದೆಲ್ಲವೂ ಸತ್ಯವಾಗಿರಬೇಕು. ಪ್ರಣಾಳಿಕೆಯಲ್ಲಿನ ಒಂದೇ ಒಂದು ಸಂಗತಿಯೂ ಸುಳ್ಳಾಗಿರಬಾರದು. ಏಕೆಂದರೆ, ಪ್ರತಿದಿನ ಪ್ರಧಾನಿಯಿಂದ ಸುಳ್ಳುಗಳನ್ನು ಕೇಳುತ್ತಲೇ ಬಂದಿದ್ದೇವೆ" ಎಂದು ವಾಗ್ದಾಳಿ ಮಾಡುತ್ತ ರಾಹುಲ್ ಅವರು, ಲೋಕಸಭೆಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಒಂದು ವರ್ಷದ ಹಿಂದೆಯೇ ಪ್ರಣಾಳಿಕೆಯ ಸಮಿತಿಯನ್ನು ರಚಿಸಿದಾಗ ಅದರ ಅಧ್ಯಕ್ಷ ಪಿ ಚಿದಂಬರಂ ಅವರಿಗೆ ಮತ್ತು ಕಾರ್ಯದರ್ಶಿ ರಾಜೀವ್ ಗೌಡ ಅವರಿಗೆ ಎರಡು ನಿರ್ದೇಶನ ನೀಡಿದ್ದೆ. ಅವೇನೆಂದರೆ, ಇದು ಮುಚ್ಚಿದ ಕೋಣೆಯಲ್ಲಿ ಕುಳಿತು ತಯಾರಿಸುವ ಪ್ರಣಾಳಿಕೆಯಲ್ಲ ಮತ್ತು ಇದು ಭಾರತದ ಜನರ ಆಶೋತ್ತರದ ಪ್ರತಿಬಿಂಬವಾಗಿರಬೇಕು ಎಂದು ರಾಹುಲ್ ನುಡಿದರು.
ಕಾಂಗ್ರೆಸ್ ಪ್ರಣಾಳಿಕೆ LIVE: ಯಾರಿಗೆ ಮೊದಲ ಆದ್ಯತೆ?
ವರ್ಷದ ರಾಹುಲ್ ಗಾಂಧಿ ಅವರು, ಪಿ ಚಿದಂಬರಂ ನೇತೃತ್ವದಲ್ಲಿ ಕರ್ನಾಟಕದ ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್ ಹೆಗಡೆ, ಜೈರಾಮ್ ರಮೇಶ್ ಮುಂತಾದವರಿದ್ದ ಸಮಿತಿಯನ್ನು ರಚಿಸಿದ್ದರು. ಚಿದಂಬರಂ ಮತ್ತು ರಾಜೀವ್ ಗೌಡ ಅವರು ಬೆಂಗಳೂರಿನಲ್ಲಿ ಎಲ್ಲ ಕ್ಷೇತ್ರಗಳ ತಜ್ಞರನ್ನು ಕರೆಸಿ ಪ್ರಣಾಳಿಕೆಗೆ ಮಾಹಿತಿಯನ್ನು ಪಡೆದಿದ್ದರು.
ಕಾಂಗ್ರೆಸ್ ಪ್ರಣಾಳಿಕೆಯನ್ನು ಆರು ಪ್ರಮುಖ ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಕಾಮ್ (ಉದ್ಯೋಗ ಮತ್ತು ಬೆಳವಣಿಗೆ), ದಾಮ್ (ಆರ್ಥಿಕತೆ), ಶಾನ್ (ನಮ್ಮ ಭದ್ರತಾ ಶಕ್ತಿಯ ಬಗ್ಗೆ ಹೆಮ್ಮೆ), ಸುಶಾಸನ್ (ಸ್ವತಂತ್ರ ಮತ್ತು ಬಾಧ್ಯತಾ ಸಂಸ್ಥೆಗಳ ಮೂಲಕ ಆಡಳಿತ), ಸ್ವಾಭಿಮಾನ್ (ತುಳಿತಕ್ಕೊಳಗಾದವರ ಆತ್ಮಗೌರವ) ಮತ್ತು ಸಮ್ಮಾನ್ (ಎಲ್ಲರಿಗೂ ಗೌರವದ ಬದುಕು).
ಸಾರ್ವಜನಿಕರೊಂದಿಗೆ ಚರ್ಚಿಸಿ ಪ್ರಣಾಳಿಕೆ
ಒಟ್ಟು 24 ರಾಜ್ಯಗಳಲ್ಲಿ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ, 121 ಸಾರ್ವಜನಿಕ ಸಭೆಗಳನ್ನು ಮಾಡಿ, ರೈತರು, ಶಿಕ್ಷಕರು, ಉದ್ಯಮಿಗಳು, ವೈದ್ಯರು, ವಕೀಲರು, ಆರ್ಥಿಕತಜ್ಞರೊಂದಿಗೆ 53 ಕಡೆಗಳಲ್ಲಿ ಸಂವಾದ ನಡೆಸಿ ಈ ಪ್ರಣಾಳಿಕೆ ರಚಿಸಲಾಗಿದೆ. ಅಲ್ಲದೆ, 12 ರಾಷ್ಟ್ರಗಳಲ್ಲಿ ಅನಿವಾಸಿ ಭಾರತೀಯರೊಂದಿಗೆ ಚರ್ಚೆ ನಡೆಸಿದ್ದನ್ನು ಕೂಡ ಪ್ರಣಾಳಿಕೆಯಲ್ಲಿ ಅಳವಡಿಸಲಾಗಿದೆ. ಆಯ್ಕೆಗಳು ನಿಮ್ಮ ಮುಂದಿವೆ ಎಂದಿದ್ದಾರೆ ರಾಹುಲ್ ಗಾಂಧಿ.
ಕಾಂಗ್ರೆಸ್ ಪ್ರಣಾಳಿಕೆ ಮುಖ್ಯಾಂಶ ತಿಳಿಯಲು ಕೆಪಿಸಿಸಿ ಟ್ವೀಟ್ ನೋಡಿ
ಕಾಮ್ (ಉದ್ಯೋಗ ಮತ್ತು ಬೆಳವಣಿಗೆ)
ನಿರುದ್ಯೋಗ ಕುರಿತಂತೆ ನರೇಂದ್ರ ಮೋದಿ ಸರಕಾರದ ಮೇಲೆ ಪ್ರಹಾರ ಮಾಡುತ್ತಲೇ ಇರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್, ತನ್ನ ಪ್ರಣಾಳಿಕೆಯಲ್ಲಿ ಕೇಂದ್ರ ಸರಕಾರದಲ್ಲಿ 4 ಲಕ್ಷ ಖಾಲಿ ಹುದ್ದೆ ಮತ್ತು ಪಂಚಾಯತ್ ಮಟ್ಟದಲ್ಲಿ 10 ಲಕ್ಷ ಹುದ್ದೆಗಳನ್ನು ತುಂಬುವುದಾಗಿ ಭರವಸೆ ನೀಡಿದೆ. ಅಲ್ಲದೆ, ಉದ್ಯಮ, ಮೂಲಸೌಕರ್ಯ, ನಗರಗಳು, ನಗರೀಕರಣ, ಗ್ರಾಮೀಣ ಅಭಿವೃದ್ಧಿ ಉತ್ತಮಪಡಿಸುವುದಾಗಿ ಹೇಳಿದ್ದು, ಅಸಂಘಟಿತ ಕ್ಷೇತ್ರದಲ್ಲಿಯೂ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ದೇಶದ ಜನತೆಗೆ ನೀಡಿದೆ.
ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?
ದಾಮ್ (ಎಲ್ಲರಿಗೂ ಅನುಕೂಲವಾಗುವ ಆರ್ಥಿಕತೆ)
ಇತ್ತೀಚೆಗೆ ಘೋಷಣೆ ಮಾಡಿದಂತೆ ಕನಿಷ್ಠ ಆದಾಯ ಯೋಜನೆಯನ್ನು ಜಾರಿಗೆ ತರುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಜೊತೆಗೆ, ಆರ್ಥಿಕಾಭಿವೃದ್ಧಿಗಾಗಿ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ, ಹೊಸ ಆರ್ಥಿಕ ನೀತಿ ರೂಪಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ತೆರಿಗೆಯಲ್ಲಿಯೂ ಅಮೂಲಾಗ್ರ ಬದಲಾವಣೆ ತರುವುದಾಗಿ ವಾಗ್ದಾನ ನೀಡಿದೆ. ಬ್ಯಾಂಕಿಂಗ್, ಹಣಕಾಸು ಕ್ಷೇತ್ರ, ವಿಜ್ಞಾನ, ತಂತ್ರಜ್ಞಾನ, ಇನ್ನೊವೇಷನ್, ಮೀನುಗಾರಿಕೆ ಕ್ಷೇತ್ರದಲ್ಲಿ ಆರ್ಥಿಕ ಪ್ರಗತಿ ತರುವ ಭರವಸೆಯನ್ನೂ ರಾಹುಲ್ ಗಾಂಧಿ ನೀಡಿದ್ದಾರೆ.
ಶಾನ್ (ನಮ್ಮ ಭದ್ರತಾ ಶಕ್ತಿಯ ಬಗ್ಗೆ ಹೆಮ್ಮೆ)
ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ, ಆಂತರಿಕ ಭದ್ರತೆ, ಗಡಿ ಭದ್ರತೆ, ನಿವೃತ್ತ ಯೋಧರು, ಕೇಂದ್ರ ಪೊಲೀಸ್ ಪಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಕಾಂಗ್ರೆಸ್ ತಿಳಿಸಿದೆ. ಎನ್ಡಿಎ ಸರಕಾರ ರಕ್ಷಣೆಯನ್ನು ನಿರ್ಲಕ್ಷಿಸುತ್ತಿದ್ದು, ಇಡೀ ಹೂಡಿಕೆ ಪ್ರಕ್ರಿಯೆಯನ್ನು ತಿರುವುಮುರುವು ಮಾಡುವುದಾಗಿ ಹೇಳಿದೆ. ಸೇನೆಗಳಿಗೆ ಪಾರದರ್ಶಕ ರೀತಿಯಲ್ಲಿ ಅಗತ್ಯವಾಗಿ ಬೇಕಾದಂಥ ಶಸ್ತ್ರಾಸ್ತ್ರಗಳನ್ನು ಪೂರೈಸುವುದಾಗಿ ವಾಗ್ದಾನ ಮಾಡಿದ್ದು, ರಫೇಲ್ ಮತ್ತು ಸೇನೆಯ ಮೇಲೆ ಇತ್ತೀಚೆಗೆ ನಡೆದಿರುವ ಉಗ್ರರ ದಾಳಿಯನ್ನು ಗಮನದಲ್ಲಿಟ್ಟುಕೊಂಡು ಕಾಲೆಳೆದಿದೆ. ಜೊತೆಗೆ, ಕಲೆ, ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದಾಗಿ ತಿಳಿಸಿದೆ. ಅನಿವಾಸಿ ಭಾರತೀಯರು, ಮತ್ತು ನಾಗರಿಕರೊಂದಿಗೆ ಸಾಮಾಜಿಕ ಸಂಪರ್ಕ ಇಟ್ಟುಕೊಳ್ಳುವುದಾಗಿ ತಿಳಿಸಿದೆ.
ಸುಶಾಸನ್ (ಸ್ವತಂತ್ರ ಮತ್ತು ಬಾಧ್ಯತಾ ಸಂಸ್ಥೆಗಳ ಮೂಲಕ ಆಡಳಿತ)
ಆರ್ಬಿಐ, ಸಿಬಿಐನಂಥ ಸಂಸ್ಥೆಗಳನ್ನು ಎನ್ಡಿಎ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದು, ಅವುಗಳ ಗೌರವ ಹಿಂತಿರುಗಿಸುವುದಾಗಿ ಕಾಂಗ್ರೆಸ್ ವಾಗ್ದಾನ ಮಾಡಿದೆ. ಮಾಧ್ಯಮ ಸ್ವಯಂ ನಿರ್ಬಂಧ ಹೇರುವಂತಾಗಲು, ಪತ್ರಕರ್ತರ ವಾಕ್ ಸ್ವಾತಂತ್ರ್ಯ ರಕ್ಷಿಸಲು, ಸಂಪಾದಕೀಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಮತ್ತು ಸರಕಾರದ ಹಸ್ತಕ್ಷೇಪದಿಂದ ಕಾಪಾಡಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಕಾಯ್ದೆ 1978 ತಿದ್ದುಪಡಿ ಮಾಡುವುದಾಗಿ ಕಾಂಗ್ರೆಸ್ ತಿಳಿಸಿದೆ. ಜೊತೆಗೆ ಭ್ರಷ್ಟಾಚಾರ ಕಾನೂನನ್ನು ಬಲಪಡಿಸುವುದಾಗಿಯೂ ತಿಳಿಸಿದೆ. ಆಡಳಿತದಲ್ಲಿ ಪಾರದರ್ಶಕತೆ ತರುವುದು ಕಾಂಗ್ರೆಸ್ಸಿನ ಆದ್ಯತೆಯಾಗಿದೆ ಎಂದು ವಾಗ್ದಾನ ಮಾಡಿದೆ.
ಸ್ವಾಭಿಮಾನ್ (ತುಳಿತಕ್ಕೊಳಗಾದವರ ಆತ್ಮಗೌರವ)
ಚುನಾವಣೆ ಗೆದ್ದು ಆಯ್ಕೆಯಾಗುತ್ತಿದ್ದಂತೆ 17ನೇ ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಶೇ.33ರಷ್ಟು ಮೀಸಲಾತಿ ತರಲು ಸಂಸತ್ತಿಗೆ ತಿದ್ದುಪಡಿ ತರುವುದಾಗಿ ಕಾಂಗ್ರೆಸ್ ಮಾತು ಕೊಟ್ಟಿದೆ. ಕೇಂದ್ರ ಸರಕಾರದಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮೀಸಲಾತಿ ತರಲು ಸೇವಾ ನಿಯಮಕ್ಕೂ ತಿದ್ದುಪಡಿ ತರುವುದಾಗಿ ನುಡಿದಿದೆ. ಜೊತೆಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರಿಗಾಗಿ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ನೀಡುವುದಾಗಿ ವಾಗ್ದಾನ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸುವುದಾಗಿ ತಿಳಿಸಿದೆ. ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೂ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತೇವೆ ಎನ್ನುವುದನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ.
ಸಮ್ಮಾನ್ (ಎಲ್ಲರಿಗೂ ಗೌರವದ ಬದುಕು)
ಆರೋಗ್ಯ, ಶಿಕ್ಷಣ, ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ, ಮಕ್ಕಳ ಕಲ್ಯಾಣ, ನೀರು ನಿರ್ವಹಣೆ, ಪರಿಸರ ಮತ್ತು ವಾತಾವರಣ ಬದಲಾವಣೆ, ವಿಪ್ಪತ್ತು ನಿರ್ವಹಣೆ, ಪ್ರತಿ ನಾಗರಿಕನ ಡಿಜಿಟಲ್ ಹಕ್ಕು, ಕ್ರೀಡಾ ಕ್ಷೇತ್ರಗಳಲ್ಲಿ ಎಲ್ಲರಿಗೂ ಸಮಾನ ಹಕ್ಕು ಮತ್ತು ಸಮಾನ ಗೌರವ ಸಿಗುವಂತೆ ಕೆಲಸ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಜೊತೆಗೆ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮತ್ತು ಕೆಲ ಪಟ್ಟಿ ಮಾಡಲಾದ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲ ನಾಗರಿಕರಿಗೆ ಆರೋಗ್ಯದ ಹಕ್ಕು ಸಿಗುವಂತೆ ಹೆಲ್ತ್ ಕೇರ್ ಆಕ್ಟ್ ಜಾರಿಗೆ ತರುವುದಾಗಿ, ಉಚಿತ ತಪಾಸಣೆ, ಔಷಧಿ ಮತ್ತು ಆಸ್ಪತ್ರೆ ಸೌಕರ್ಯ ದೊರಕಿಸಿಕೊಡುವ ವಾಗ್ದಾನವನ್ನೂ ನೀಡಲಾಗಿದೆ. ಜಿಡಿಪಿಯ ಶೇ.3ರಷ್ಟು ಹಣವನ್ನು ಆರೋಗ್ಯ ಕ್ಷೇತ್ರರದಲ್ಲಿ ವಿನಿಯೋಗಿಸುವುದಾಗಿ ರಾಹುಲ್ ಗಾಂಧಿ ವಾಗ್ದಾನ ಮಾಡಿದ್ದಾರೆ.