ಸೀಟು ಹಂಚಿಕೆ ಬಗ್ಗೆ ಟ್ವಿಟ್ಟರ್ನಲ್ಲಿ ರಾಹುಲ್-ಕೇಜ್ರಿವಾಲ್ ಬಹಿರಂಗ ಕಿತ್ತಾಟ
ನವದೆಹಲಿ, ಏಪ್ರಿಲ್ 15: ದೆಹಲಿಯಲ್ಲಿ ಇರುವ ನಾಲ್ಕು ಲೋಕಸಭೆ ಕ್ಷೇತ್ರಗಳಿಗಾಗಿ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಎಎಪಿ ನಡುವೆ ಸಹಮತ ಮೂಡುತ್ತಿಲ್ಲ. ಬದಲಾಗಿ ಈ ಇಬ್ಬರೂ ನಾಯಕರು ಟ್ವಿಟ್ಟರ್ನಲ್ಲಿ ಬಹಿರಂಗ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇದರಿಂದ ರಾಜಧಾನಿಯಲ್ಲಿ ಈ ಪಕ್ಷಗಳ ನಡುವೆ ಮೈತ್ರಿಯ ಸಾಧ್ಯತೆ ಬಹುತೇಕ ಕ್ಷೀಣಿಸಿದೆ.
ದೆಹಲಿಯಲ್ಲಿ ಎಎಪಿ ಜೊತೆ ಮೈತ್ರಿ ಇಲ್ಲ: ಕಾಂಗ್ರೆಸ್ ಸ್ಪಷ್ಟನೆ
ಆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎಎಪಿಗೆ ಇನ್ನೂ ಬಾಗಿಲು ತೆರೆದಿರುವುದಾಗಿ ಆಹ್ವಾನ ನೀಡಿದ್ದಾರೆ. ಅದರ ಬೆನ್ನಲ್ಲೇ ಕೇಜ್ರಿವಾಲ್ ವಿರುದ್ಧ 'ಯು-ಟರ್ನ್' ಎಂದು ಕಿಡಿಕಾರಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಕೇಜ್ರಿವಾಲ್, ಬಿಜೆಪಿಗೆ ನೀವೇ ಉತ್ತರ ಪ್ರದೇಶದಲ್ಲಿ ನೆರವಾಗುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಮವಾರ ಸಂಜೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಕಾಂಗ್ರೆಸ್ ಮತ್ತು ಎಎಪಿಯ ಮೈತ್ರಿಯು ಬಿಜೆಪಿಯನ್ನು ದೆಹಲಿಯಿಂದ ಕಿತ್ತೊಗೆಯಲು ನೆರವಾಗಲಿದೆ. ಕಾಂಗ್ರೆಸ್ ಎಲ್ಲ ನಾಲ್ಕೂ ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧವಿದೆ. ಎಎಪಿ ಇದನ್ನು ತಿಳಿದುಕೊಳ್ಳಬೇಕು. ಆದರೆ, ಕೇಜ್ರಿವಾಲ್ ಮತ್ತೊಂದು ಯು-ಟರ್ನ್ ತೆಗೆದುಕೊಂಡಿದ್ದಾರೆ. ನಮ್ಮ ಬಾಗಿಲುಗಳು ಇನ್ನೂ ತೆರೆದಿವೆ. ಆದರೆ, ಸಮಯ ಮೀರುತ್ತಿದೆ' ಎಂದು ಹೇಳಿದ್ದಾರೆ.
ದೆಹಲಿ: 'ಪೊರಕೆ' ಹಿಡಿಯಲು ಹೋದ 'ಕೈ'ಗೆ ಮುಖಭಂಗ, ಎಎಪಿ ಸೆಡ್ಡು
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ದೆಹಲಿಯಲ್ಲಿ ಮೈತ್ರಿ ಬಗ್ಗೆ ಚರ್ಚೆಗಳು ಇನ್ನೂ ನಡೆಯುತ್ತಲೇ ಇರುವಾಗ ಯಾವ ಯು-ಟರ್ನ್ ಬಗ್ಗೆ ನೀವು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
An alliance between the Congress & AAP in Delhi would mean the rout of the BJP. The Congress is willing to give up 4 Delhi seats to the AAP to ensure this.
— Rahul Gandhi (@RahulGandhi) 15 April 2019
But, Mr Kejriwal has done yet another U turn!
Our doors are still open, but the clock is running out. #AbAAPkiBaari
'ನಿಮಗೆ ಮೈತ್ರಿ ಬೇಕಿಲ್ಲ ಎನ್ನುವುದನ್ನು ನೀವು ಮಾಡಿರುವ ಟ್ವೀಟ್ ಹೇಳುತ್ತದೆ. ಇವೆಲ್ಲವೂ ನಿಮ್ಮ ತೋರಿಕೆಯ ನಡೆ. ಮೋದಿ-ಶಾ ಅವರಿಂದ ದೇಶವನ್ನು ರಕ್ಷಿಸುವುದು ಅಗತ್ಯ. ಆದರೂ ನೀವು ವಿರೋಧಪಕ್ಷಗಳ ಮತ ಬ್ಯಾಂಕ್ಅನ್ನು ಒಡೆಯುವ ಮೂಲಕ ಉತ್ತರ ಪ್ರದೇಶ ಮತ್ತು ಇತರೆ ರಾಜ್ಯಗಳಲ್ಲಿ ಅವರಿಗೆ ನೆರವಾಗುತ್ತಿದ್ದೀರಿ' ಎಂದು ಕೇಜ್ರಿವಾಲ್, ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.