ಕೋರ್ಟ್ನಲ್ಲಿ ಸಹಾಯಬೇಕಾ? ನಾನಿದ್ದೇನೆ: ಗಂಭೀರ್ಗೆ ಸುಬ್ರಮಣಿಯನ್ ಸ್ವಾಮಿ ಅಭಯ
ನವದೆಹಲಿ, ಮೇ 11: ಪೂರ್ವ ದೆಹಲಿ ಕ್ಷೇತ್ರದ ತಮ್ಮ ಎದುರಾಳಿ ಎಎಪಿಯ ಅತಿಶಿ ಮರ್ಲೀನಾ ಅವರ ವಿರುದ್ಧ ಅಸಭ್ಯ ಕರಪತ್ರ ಹಂಚಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಗೌತಮ್ ಗಂಭೀರ್ ಅವರಿಗೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಬುದ್ದಿಮಾತು ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಈ ರೀತಿಯ ಅಪಪ್ರಚಾರಗಳಿಗೆ ಹೆದರಿ ಯೋಚಿಸುತ್ತಿದ್ದರೆ ಏನೂ ಮಾಡಲು ಆಗುವುದಿಲ್ಲ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ಒಂದು ವೇಳೆ ನ್ಯಾಯಾಲಯದ ಕೆಲಸಗಳಲ್ಲಿ ಅಗತ್ಯಬಿದ್ದರೆ, ನಾನಿದ್ದೇನೆ. ನಾನು ಬೇಕಾದರೆ ಸಹಾಯ ಮಾಡುತ್ತೇನೆ ಎಂದು ಸ್ವಾಮಿ ಅಭಯ ನೀಡಿದ್ದಾರೆ.
ಕರಪತ್ರದ ವಿವಾದಕ್ಕೆ ಗಂಭೀರ್ ನೀಡುತ್ತಿರುವ ಪ್ರತಿಕ್ರಿಯೆಗೆ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಜತೆಗೆ ಧೈರ್ಯವನ್ನೂ ಹೇಳಿದ್ದಾರೆ.
Why is Gambhir so defensive about a bogus self generated Naxalite promoted anonymous letter? He should ignore it . If a dumb Commission issues notice just ignore that. If Gambir needs help in Courts I will be happy to help him
— Subramanian Swamy (@Swamy39) 11 May 2019
'ಸ್ವಯಂ ಸೃಷ್ಟಿಯ ನಕ್ಸಲ್ ಬೆಂಬಲಿತ ಅನಾಮಧೇಯ ನಕಲಿ ಪತ್ರದ ಬಗ್ಗೆ ಗಂಭೀರ್ ಏಕಿಷ್ಟು ರಕ್ಷಣಾತ್ಮಕವಾಗಿದ್ದಾರೆ? ಅವರು ಅದನ್ನು ನಿರ್ಲಕ್ಷಿಸಬೇಕು. ಬಾಯಿಯಿಲ್ಲದ ಆಯೋಗವೊಂದು ನೋಟಿಸ್ ಜಾರಿ ಮಾಡಿದರೆ ಅದನ್ನು ನಿರ್ಲಕ್ಷಿಸಬೇಕು. ಗಂಭೀರ್ ಅವರಿಗೆ ನ್ಯಾಯಾಲಯದ ಕೆಲಸದಲ್ಲಿ ಸಹಾಯ ಬೇಕಿದ್ದರೆ, ಸಹಾಯ ಮಾಡಲು ನಾನಿದ್ದೇನೆ' ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಎಎಪಿ ಅಭ್ಯರ್ಥಿ ಅತಿಶಿ ವಿರುದ್ಧ ಅಶ್ಲೀಲ ಭಾಷೆಯ ಕರಪತ್ರಗಳನ್ನು ಹಂಚಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಹಾಗೂ ಪಕ್ಷದ ಅನೇಕ ಮುಖಂಡರು ಆರೋಪಿಸಿದ್ದಾರೆ.
ತಾವು ಈ ರೀತಿ ಕೆಲಸ ಮಾಡಿಲ್ಲ. ಒಂದು ವೇಳೆ ಹೀಗೆ ಮಾಡಿರುವುದು ಸಾಬೀತಾದರೆ ನಾನು ಈಗಲೇ ಉಮೇದುವಾರಿಕೆಯಿಂದ ಹಿಂದೆ ಸರಿಯುತ್ತೇನೆ. ಅದು ಸಾಬೀತಾದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ. ಹಾಗೆಯೇ ಅದು ಸುಳ್ಳಾದರೆ ನೀವು ರಾಜಕೀಯ ತೊರೆಯಬೇಕು, ಸಾಧ್ಯವೇ? ಎಂದು ಗಂಭೀರ್ ಅವರು ಕೇಜ್ರಿವಾಲ್ಗೆ ಸವಾಲು ಹಾಕಿದ್ದಾರೆ.