ಕೊರೊನಾ ಭೀತಿ ನಡುವೆಯೇ ಟ್ರೆಂಡ್ ಆಯ್ತು ಹೊಸ ಉದ್ಯೋಗ!
ನವದೆಹಲಿ, ಮೇ.20: ಕೊರೊನಾ ವೈರಸ್ ಭೀತಿ ಹಾಗೂ ಭಾರತ ಲಾಕ್ ಡೌನ್ ನಿಯಮದಿಂದಾಗಿ ಕಂಪನಿಗಳೆಲ್ಲ ಬಾಗಿಲು ಹಾಕುತ್ತಿವೆ. ಲಕ್ಷಾಂತರ ನೌಕರರು ಉದ್ಯೋಗ ಕಳೆದುಕೊಂಡಿದ್ದು, ಇನ್ನೂ ಸಾಕಷ್ಟು ಮಂದಿ ನಿರುದ್ಯೋಗದ ಸುಳಿಗೆ ಸಿಲುಕುವ ಲಕ್ಷಣಗಳು ಗೋಚರಿಸುತ್ತಿವೆ.
ನಿರುದ್ಯೋಗದ ಆತಂಕದ ನಡುವೆಯೇ ಭಾರತದಲ್ಲಿ ಹೊಸ ಉದ್ಯೋಗವು ಸಖತ್ ಸದ್ದು ಮಾಡುತ್ತಿದೆ. ಭಾರತ ಲಾಕ್ ಡೌನ್ 4.0ನಲ್ಲಿ ಕೊಂಚ ಸಡಿಲಿಕೆ ಮಾಡುತ್ತಿದ್ದಂತೆ ವಾಹನಗಳೆಲ್ಲ ರಸ್ತೆಗಿಳಿದಿವೆ. ಇದನ್ನೇ ಎನ್ ಕ್ಯಾಶ್ ಮಾಡಿಕೊಂಡ ಕೆಲವು ಕಂಪನಿಗಳು ವಾಹನಗಳಿಗೆ ಸ್ಯಾನಿಟೈಸಿಂಗ್ ಮಾಡುವುದನ್ನೇ ಉದ್ಯೋಗವನ್ನಾಗಿ ಪರಿವರ್ತಿಸಿವೆ.
ಲಾಕ್ಡೌನ್ನಿಂದ ದೇಶದ 43 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ: ಕೆ. ನೀಲಾ
ನವದೆಹಲಿಯಲ್ಲಿ ಎರಡು ತಿಂಗಳುಗಳ ನಂತರ ಕಾರ್, ಬೈಕ್ ಗಳು ರಸ್ತೆಗೆ ಇಳಿದಿದ್ದು, ಕೊರೊನಾ ವೈರಸ್ ಸೋಂಕಿನಿಂದ ವಾಹನಗಳನ್ನು ದೂರ ಇರಿಸಲು ಸ್ಯಾನಿಟೈಸ್ ಮಾಡಿಸುವಂತೆ ಜಾಗೃತಿ ಮೂಡಿಸುವುದರ ಜೊತೆಗೆ ಅದನ್ನೇ ವ್ಯಾಪಾರವನ್ನಾಗಿ ಮಾಡಿಕೊಳ್ಳಲಾಗಿದೆ.
ಭಾರತ ಲಾಕ್ ಡೌನ್ ನಡುವೆ ಹೊಸ ಉದ್ಯೋಗ:
ನವದೆಹಲಿಯಲ್ಲಿ ನಾಲ್ವರು ವ್ಯಾಪಾರಿಗಳು ಸೇರಿಕೊಂಡು ಮೊದಲಿಗೆ ಸೋಫಾ, ಕಾರ್, ಶೌಚಾಲಯ ಮತ್ತು ಅಡುಗೆ ಕೋಣೆಗಳಿಗೆ ಶುದ್ಧಗೊಳಿಸಲು ಆರಂಭಿಸಿದ್ದರು. ನಂತರ ವಾಹನಗಳಿಗೂ ಈ ಸ್ಯಾನಿಟೈಸ್ ಸೇವೆ ವಿಸ್ತರಿಸಲು ಮುಂದಾಗಿದ್ದಾರೆ.
ಭಾರತ ಲಾಕ್ ಡೌನ್ ಜಾರಿಗೆ ಬಂದಾಗಿನಿಂದ ಉದ್ಯೋಗವಿಲ್ಲದೇ ಕುಳಿತಿದ್ದೆವು. ಈ ವೇಳೆ ಸ್ವಂತ ಉದ್ಯೋಗವನ್ನೇಕೆ ಆರಂಭಿಸಬಾರದು ಎಂಬ ಆಲೋಚನೆ ಹೊಳೆಯಿತು. ಕೊರೊನಾ ವೈರಸ್ ಸೋಂಕಿನಿಂದ ದೂರವಿದ್ದೇ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಉದ್ಯೋಗವನ್ನು ಕಂಡುಕೊಂಡೆವು ಎಂದು ಭರತ್ ಆನಂದ್ ತಿಳಿಸಿದ್ದಾರೆ.
ದ್ವಿಚಕ್ರ ವಾಹನಗಳನ್ನು ಸ್ಯಾನಿಟೈಸ್ ಮಾಡುವುದಕ್ಕೆ ಕನಿಷ್ಠ 15 ನಿಮಿಷ ಹಾಗೂ ನಾಲ್ಕ ಚಕ್ರದ ವಾಹನಗಳನ್ನು ಸ್ಯಾನಿಟೈಸ್ ಮಾಡುವುದಕ್ಕೆ 20 ನಿಮಿಷ ಬೇಕಾಗುತ್ತದೆ. ಬೈಕ್ ಗಳಿಗೆ 20 ರೂಪಾಯಿ ದರ ನಿಗದಿಗೊಳಿಸಿದ್ದು, ಕಾರ್ ಗಳಿಗೆ 50 ರೂಪಾಯಿ ಚಾರ್ಜ್ ಮಾಡಲಾಗುತ್ತದೆ.