ಪ್ರಣಬ್ ನಡೆ ಸಮಕಾಲೀನ ಇತಿಹಾಸದಲ್ಲೇ ಮಹತ್ವದ್ದು: ಅಡ್ವಾಣಿ
ನವದೆಹಲಿ, ಜೂನ್ 08: ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದು ನಮ್ಮ ಸಮಕಾಲೀನ ಇತಿಹಾಸದ ಅತ್ಯಂತ ಮಹತ್ವದ ಘಟನೆ ಎಂದು ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
"ಭಾರತೀಯ ರಾಷ್ಟ್ರೀಯತೆಯ ಕುರಿತು ಅವರು ವ್ಯಕ್ತಪಡಿಸಿದ ಭಾವನೆಗಳು ನಿಜಕ್ಕೂ ಮಹೋನ್ನತವಾದುದು" ಎಂದ ಅಡ್ವಾಣಿ, ಆರೆಸ್ಸೆಸ್ ಆಮಂತ್ರಣವನ್ನು ಸ್ವೀಕರಿಸಿ, ಈ ನಾಗ್ಪುರಕ್ಕೆ ಆಗಮಿಸಿದ್ದ ಪ್ರಣಬ್ ದಾ ಅವರ ನಡೆಯನ್ನು ಶ್ಲಾಘಿಸಿದರು.
ಆರೆಸ್ಸೆಸ್, ಪ್ರಣಬ್ ಮುಖರ್ಜಿ ಮತ್ತು ರಾಷ್ಟ್ರಭಕ್ತಿ ಸ್ಫುರಿಸುವ ಮಾತು
ಪ್ರಣಬ್ ಮುಖರ್ಜಿ ಮತ್ತು ಆರೆಸ್ಸೆಸ್ ಮುಖ್ಯಸ್ಥ(ಸರಸಂಘಚಾಲಕ್) ಮೋಹನ್ ಜೀ ಭಾಗವತ್ ಇಬ್ಬರ ಮಾತೂ ಸ್ಫುರಿಸಿದ್ದು ಒಂದೇ ಸಂದೇಶವನ್ನು. ಇಬ್ಬರು ದಿಗ್ಗಜರಿಗೂ ರಾಷ್ಟ್ರದ ಮೇಲಿರುವ ಅಭಿಮಾನ, ಭಕ್ತಿ ಅನುಸರಣೀಯ ಎಂದು ಎಲ್ ಕೆ ಅಡ್ವಾಣಿ ಹೇಳಿದರು.
ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಮೂರನೇ ವರ್ಷದ ಶಿಕ್ಷಾ ವರ್ಗ್ ನಲ್ಲಿ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು.
ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಪ್ರಣಬ್ ಮುಖರ್ಜಿ ಸಂಘದ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ್ ಅವರನ್ನು ಭಾರತ ಮಾತೆಯ ಹೆಮ್ಮೆಯ ಪುತ್ರ ಎಂದು ಕರೆದರಲ್ಲದೆ, ವಿವಿಧತೆಯಲ್ಲಿ ಏಕತೆ ನಮ್ಮ ದೊಡ್ಡ ಶಕ್ತಿ ಎಂದು ಭಾರತವನ್ನು ಹಾಡಿ ಹೊಗಳಿದ್ದರು.