ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಅಡ್ವಾಣಿಗಿಲ್ಲ ಆಹ್ವಾನ!
ಲಕ್ನೌ, ಆಗಸ್ಟ್ 1: ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆಗಸ್ಟ್ 5 ರಂದು ಅಧಿಕೃತ ಚಾಲನೆ ಸಿಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಸಮಾರಂಭದಲ್ಲಿ ಬಿಜೆಪಿಯ ಹಿರಿಯ ನಾಯಕರು ಭಾಗವಹಿಸುತ್ತಿಲ್ಲ ಎಂಬ ವಿಚಾರ ಹೊರಬಿದ್ದಿದೆ.
ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಇಬ್ಬರಿಗೂ ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಆಹ್ವಾನ ಇಲ್ಲ ಎಂದು ತಿಳಿದು ಬಂದಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ವಿಚಾರಣೆಗೆ ಅಡ್ವಾಣಿ ಹಾಜರು
ಕೇಂದ್ರದ ಮಾಜಿ ಸಚಿವ ಉಮಾ ಭಾರತಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ ಹಲವರಿಗೆ ಭೂಮಿ ಪೂಜೆಗೆ ಆಹ್ವಾನ ನೀಡಲಾಗಿದೆ. ಆದರೆ, ರಾಮ ಮಂದಿರ ನಿರ್ಮಾಣದ ಕನಸು ಕಂಡು ಹೋರಾಡಿದ ಪ್ರಮುಖ ನಾಯಕರಿಬ್ಬರು ಈ ಕ್ಷಣಕ್ಕೆ ಸಾಕ್ಷಿಯಾಗುತ್ತಿಲ್ಲ ಎನ್ನುವುದು ಚರ್ಚೆಗೆ ಕಾರಣವಾಗಿದೆ. ಮುಂದೆ ಓದಿ....
ಕೊರೊನಾ ಆತಂಕದಿಂದ ಆಹ್ವಾನ ಇಲ್ಲ!
92 ವರ್ಷದ ಎಲ್ ಕೆ ಅಡ್ವಾಣಿ ಹಾಗೂ 86 ವರ್ಷದ ಮುರಳಿ ಮನೋಹರ್ ಜೋಶಿ ಇಬ್ಬರು ರಾಮ ಮಂದಿರ ಭೂಮಿ ಪೂಜೆ ಸಮಾರಂಭದಲ್ಲಿ ಭಾಗಿಯಾಗುತ್ತಿಲ್ಲ. ಕೊರೊನಾ ವೈರಸ್ ಭೀತಿ ಮತ್ತು ಆರೋಗ್ಯದ ಸ್ಥಿತಿಗತಿಯ ಕಾರಣ ಕಾರ್ಯಕ್ರಮದಲ್ಲಿ ಖುದ್ದು ಭಾಗಿಯಾಗುತ್ತಿಲ್ಲ ಎಂದು ಹೇಳಲಾಗಿದೆ.
ವಿಡಿಯೋ ಕಾನ್ಫೆರೆನ್ಸ್ ಮೂಲಕ ವೀಕ್ಷಣೆ
ರಾಮ ಜನ್ಮಭೂಮಿಗಾಗಿ ಹೋರಾಡಿದ ಇಬ್ಬರು ಹಿರಿಯ ನಾಯಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ವೀಕ್ಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇವರಿಬ್ಬರು ಮಾತ್ರವಲ್ಲ ಇನ್ನು ಏಂಟು ನಾಯಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ 10 ಜನರ ಪಟ್ಟಿ ಸಹ ಸಿದ್ದಪಡಿಸಲಾಗಿದೆ.
ಅಯೋಧ್ಯೆ ರಾಮಮಂದಿರ ಭೂಮಿಪೂಜೆಗೆ ಮೋದಿ: ಓವೈಸಿ ಎಚ್ಚರಿಕೆ
ಮೋದಿ ಜೊತೆ 4 ಮಂದಿ ಮಾತ್ರ ವೇದಿಕೆ ಹಂಚಿಕೆ
ರಾಮ ಮಂದಿರ ಭೂಮಿ ಪೂಜೆಯ ವೇದಿಕೆ ಸಮಾರಂಭದಲ್ಲಿ ಮೋದಿ ಅವರ ಜೊತೆ ಕೇವಲ ನಾಲ್ಕು ನಾಯಕರು ಮಾತ್ರ ಕುಳಿತುಕೊಳ್ಳಲಿದ್ದಾರೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಮ ಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥ ಗೋಪಾಲ್ ದಾಸ್ ಹಾಗೂ ಇತರೆ ಇಬ್ಬರು ಗಣ್ಯರು ಮಾತ್ರ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಉಳಿದ ಯಾವ ನಾಯಕ ಹಾಗೂ ಸ್ವಾಮೀಜಿಗಳು ಈ ವೇದಿಕೆಯಲ್ಲಿರುವುದಿಲ್ಲ.
ವಿರೋಧ ಪಕ್ಷದ ನಾಯಕರಿಗೂ ಆಹ್ವಾನ ಇಲ್ಲ
ಭೂಮಿಪೂಜೆಗೆ ಹಿಂದೂ ಸಾಧುಸಂತರ ಜೊತೆಗೆ, ಮುಸ್ಲಿಂ ಧಾರ್ಮಿಕ ಮುಖಂಡರಿಗೂ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಹ್ವಾನವನ್ನು ಕಳುಹಿಸಿದೆ. ಆದರೆ, ಯಾವುದೇ, ವಿರೋಧ ಪಕ್ಷದ ಮುಖಂಡರಿಗೆ, ಇದುವರೆಗೆ ಆಹ್ವಾನ ಹೋಗಿಲ್ಲ.
3500 ಪೊಲೀಸ್ ನಿಯೋಜನೆ
ಆಗಸ್ಟ್ 5 ರಂದು ನಡೆಯಲಿರುವ ಈ ಸಮಾರಂಭ ಹಿನ್ನೆಲೆ ಅಯೋಧ್ಯೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಸರ್ಕಾರದಿಂದ ಸುಮಾರು 3500 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ. ಸ್ಥಳಿಯ ಆಡಳಿತ ಮಂಡಳಿ ಈ ಕುರಿತು ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಖುದ್ದು ಪರಿಶೀಲಿಸಲಿದ್ದಾರೆ.