LIVE: ಸ್ಪೀಕರ್ ಭೇಟಿಯಾದ ಕುಮಾರಸ್ವಾಮಿ-ಸಿದ್ದರಾಮಯ್ಯ
ನವದೆಹಲಿ, ಜುಲೈ 17: ರಾಜ್ಯ ರಾಜಕಾರಣ ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಿನ್ನೆ ನಡೆದಿದ್ದು ಇಂದು ತೀರ್ಪು ಹೊರಬೀಳಲಿದೆ.
ತಮ್ಮ ರಾಜೀನಾಮೆಯನ್ನು ಶೀಘ್ರವಾಗಿ ಅಂಗೀಕಾರ ಮಾಡಬೇಕೆಂದು ಕರ್ನಾಟಕ ವಿಧಾನಸಭೆ ಸ್ಪೀಕರ್ಗೆ ನಿರ್ದೇಶನ ನೀಡಿರೆಂದು ಮನವಿ ಮಾಡಿ ಅತೃಪ್ತ ಶಾಸಕರು ಸುಪ್ರೀಂ ಮೊರೆ ಹೋಗಿದ್ದರು. ಇದಕ್ಕೆ ವಿರುದ್ಧವಾಗಿ ಸ್ಪೀಕರ್ ಸಹ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಸುಪ್ರೀಂಕೋರ್ಟ್ನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆ: ಯಾರ ವಾದ ಏನು?
ಅತೃಪ್ತ ಶಾಸಕರು, ಸ್ಪೀಕರ್ ರಮೇಶ್ ಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪರವಾಗಿ ನಿನ್ನೆ ವಕೀಲರು ಸುಪ್ರೀಂಕೋರ್ಟ್ನಲ್ಲಿ ಸುಧೀರ್ಘ ವಾದ ಮಂಡಿಸಿದ್ದು, ವಾದ ಆಲಿಸಿದ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಪೀಠವು ಇಂದಿಗೆ ಆದೇಶವನ್ನು ಕಾಯ್ದಿರಿಸಿದೆ.
ಇಂದು ಹೊರಡಿಸಲಾಗುವ ಆದೇಶದ ಮೇಲೆ ರಾಜ್ಯ ರಾಜಕಾರಣದ ಮುಂದಿನ ಮಜಲುಗಳು ಬದಲಾವಣೆ ಆಗಲಿವೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ರಾಜೀನಾಮೆ ನೀಡಿರುವ 16 ಶಾಸಕರ ರಾಜಕೀಯ ಭವಿಷ್ಯವೂ ಸಹ ಇಂದಿನ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ನಿಂತಿದೆ.
ಬೆಳಿಗ್ಗೆ 10:30 ಕ್ಕೆ ಸುಪ್ರೀಂಕೋರ್ಟ್ ನ್ಯಾಯ ಪೀಠವು ಆದೇಶವನ್ನು ಹೊರಡಿಸಲಿದೆ.