ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದ ಎಲ್ಐಸಿ ನೌಕರರು
ನವದೆಹಲಿ, ಫೆಬ್ರವರಿ 04: ಎಲ್ಐಸಿ ಯ ಪಾಲುದಾರಿಕೆಯನ್ನು ಮಾರಾಟ ಮಾಡುವ ಕೇಂದ್ರ ಸರ್ಕಾರದ ನಿರ್ಣಯದ ವಿರುದ್ಧ ಎಲ್ಐಸಿ ನೌಕರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ಇಂದು ಹಲವು ಪ್ರಮುಖ ನಗರಗಳಲ್ಲಿ ಕೇಂದ್ರದ ಎಲ್ಐಸಿ ಯ ಪಾಲುದಾರಿಕೆ ಮಾರಾಟದ ನಿರ್ಣಯದ ವಿರುದ್ಧ ಆಲ್ ಇಂಡಿಯಾ ಇನ್ಶುರೆನ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ ಸದಸ್ಯರು ಪ್ರತಿಭಟನೆ ನಡೆಸಿದರು.
ಶನಿವಾರ ಮಂಡನೆಯಾದ ಬಜೆಟ್ ನಲ್ಲಿ ಕೇಂದ್ರ ಸರ್ಕಾರದ ನಿರ್ಣಯ ಪ್ರಕಟಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರ ಅಧೀನದಲ್ಲಿರುವ ಎಲ್ಐಸಿ ಅಲ್ಲಿನ ಪಾಲುದಾರಿಕೆಯ ಕೆಲ ಭಾಗವನ್ನು ಐಪಿಓ ಮೂಲಕ ಮಾರಾಟ ಮಾಡಲಾಗುವುದು ಎಂದು ಘೋಷಿಸಿದರು.
ಎಲ್ಐಸಿ ಜೊತೆಗೆ ಐಡಿಬಿಐ ಬ್ಯಾಂಕ್ನಲ್ಲಿನ ಪಾಲುದಾರಿಕೆಯನ್ನೂ ಸಹ ಕೇಂದ್ರ ಸರ್ಕಾರ ಮಾರಲು ನಿರ್ಣಯಿಸಿದೆ. ಈಗಾಗಲೇ ಏರ್ಇಂಡಿಯಾ ಮಾರಾಟ ಮಾಡಲು ಸಜ್ಜಾಗಿರುವ ಕೇಂದ್ರ ಈಗ ಎಲ್ಐಸಿ ಯ ಪಾಲುದಾರಿಕೆಯನ್ನೂ ಮಾರಲು ನಿರ್ಣಯಿಸಿರುವ ಬಗ್ಗೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದೆ.
ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಆಲ್ ಇಂಡಿಯಾ ಇನ್ಶುರೆನ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ಒಂದೇ ಬಾರಿಗೆ ಎಲ್ಲ ನಗರಗಳಲ್ಲಿನ ಎಲ್ಐಸಿ ನೌಕರರು ಬೀದಿಗೆ ಇಳಿಯಲಿದ್ದಾರೆ ಎಂದು ಸಂಘಟನೆ ಹೇಳಿದೆ.