ಮೋದಿ ಸಭೆಯ ಮೇಲೆ ಮುಂಬೈ ಮಾದರಿ ದಾಳಿಗೆ ಸಂಚು?
ನವದೆಹಲಿ, ಡಿಸೆಂಬರ್ 07 : ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಸಾರ್ವಜನಿಕ ಸಭೆಯೊಂದರ ಮೇಲೆ 26/11 ಮಾದರಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪಾಕಿಸ್ತಾನ ಮೂಲದ ಲಷ್ಕರ್-ಇ-ತಯ್ಬಾ ಸಂಚು ಹೂಡಿತ್ತು ಎಂಬ ಸಂಗತಿಯನ್ನು ಬೇಹುಗಾರಿಕೆ ದಳ ಮತ್ತು ದೆಹಲಿ ಪೊಲೀಸರು ಬಯಲಿಗೆಳೆದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಿಂದ ಭಾರತದೊಳಗೆ ನುಸುಳಲು ಯತ್ನಿಸುತ್ತಿರುವ ಲಷ್ಕರ್ ಉಗ್ರರ ಮೇಲೆ ತೀವ್ರ ನಿಗಾ ಇಟ್ಟಿರುವ ಈ ಎರಡೂ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿದಾಗ ಈ ಸಂಗತಿ ಬಯಲಾಗಿದೆ. ಇದರ ಪ್ರಕಾರ, ಮೋದಿ ಭಾಗವಹಿಸಿದ್ದ ಸಭೆಯ ಮೇಲೆ ಆತ್ಮಹತ್ಯಾ ದಾಳಿ ನಡೆಸುವುದು ಇಲ್ಲವೆ ಗ್ರೆನೇಡ್ ದಾಳಿ ನಡೆಸುವ ಯೋಜನೆಯನ್ನು ಲಷ್ಕರ್ ರೂಪಿಸಿತ್ತು. [ಐಸಿಸ್ ಸರ್ವನಾಶಕ್ಕೆ ಪಣತೊಟ್ಟ ವೀರ ಯೋಧ ಅಬು]
ಪಿಟಿಐ ವರದಿಯ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರದ ಮುಖಾಂತರ ಲಷ್ಕರ್ ಶಂಕಿತ ಉಗ್ರರಾದ ಡುಜಾನಾ ಮತ್ತು ಉಕಾಶಾ ಎಂಬಿಬ್ಬರು ಭಾರತದೊಳಗೆ ನುಸುಳಿ ಬಂದಿರುವುದರ ಬಗ್ಗೆ ದೆಹಲಿ ಪೊಲೀಸ್ ವಿಶೇಷ ದಳಕ್ಕೆ ಬೇಹುಗಾರಿಕೆ ಮಾಹಿತಿ ಸಿಕ್ಕ ನಂತರ ಮೋದಿ ಹತ್ಯೆಯ ಸಂಚು ಬಯಲಿಗೆ ಬಿದ್ದಿದೆ.
ಈ ಸಂಚಿನಲ್ಲಿ ಇನ್ನೂ ಇಬ್ಬರು ಭಾಗಿಯಾಗಿದ್ದು, ಶಬ್ಬೀರ್ ಎಂಬಾತನಿಗೆ 47 ಸಾವಿರ ನೀಡಲಾಗಿದ್ದು, ಆತ ಮತ್ತಿತರರು ಸೇರಿ ದೆಹಲಿಯಲ್ಲಿ ನಡೆಯುವ ಮೋದಿ ಸಭೆಯ ಮೇಲೆ ಮುಂಬೈ ರೀತಿಯ ದಾಳಿ ನಡೆಸಲು ಸೂಚಿಸಲಾಗಿತ್ತು. ಉದ್ದಮ್ಪುರದಲ್ಲಿ ನಡೆಸಿದ ದಾಳಿಯ ಮಾದರಿಯಲ್ಲೂ ಹತ್ಯಾಕಾಂಡ ನಡೆಸಲು ಉಗ್ರರಿಗೆ ಸೂಚನೆ ಸಿಕ್ಕಿತ್ತು. [ಹಸನ್ಮುಖಿ ವಸುಂಧರೆಯ ಮಡಿಲಲ್ಲಿ ನಿಗಿನಿಗಿ ಜ್ವಾಲಾಮುಖಿ!]
ನವೆಂಬರ್ 20ರಿಂದಲೇ ಕಾಶ್ಮೀರದಲ್ಲಿ ಬೀಡುಬಿಟ್ಟಿರುವ ವ್ಯಕ್ತಿಯನ್ನು ನವೆಂಬರ್ 24ರಂದು ಬಂಧಿಸಲಾಗಿದೆ. ದಕ್ಷಿಣ ಕಾಶ್ಮೀರದ ಬಾಥಿಂಡಿ ಎಂಬಲ್ಲಿ ಅಮೀರ್ ಆಲಂ ಗುಜ್ಜಾರ್ ಎಂಬುವವರ ಮನೆಯಲ್ಲಿ ಆತ ಮತ್ತಿತರಿಬ್ಬರು ಸೇರಿಕೊಂಡಿದ್ದರು. ಓರ್ವನ ಭಾಗೀದಾರಿಕೆ ಸಾಬೀತಾಗಿದ್ದರೆ, ಇನ್ನುಳಿದಿಬ್ಬರ ವಿಚಾರಣೆ ನಡೆಯುತ್ತಿದೆ. [ಉಗ್ರರಿಗೆ ತಿರುಗೇಟು, ಕರ್ನಾಟಕ ಮಸೀದಿಗಳು ಗ್ರೇಟು]