ಕಾವೇರಿ ವಿವಾದ ಮರೆಸಲು ವಿಗ್ರಹ ಧ್ವಂಸದ ನಾಟಕ: ಕಮಲ್ ಕಿಡಿ!
ನವದೆಹಲಿ, ಮಾರ್ಚ್ 07: ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನಿಟ್ಟುಕೊಂಡು ದೇಶದ ಹಲವೆಡೆ ವಿಗ್ರಹ ಧ್ವಂಸದ ಪ್ರಕರಣಗಳು ನಡೆಯುತ್ತಿರುವುದನ್ನು ಹಲವು ನಾಯಕರು ಖಂಡಿಸಿದ್ದಾರೆ.
ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಾಕಷ್ಟಿವೆ. ಆದರೆ ಅದಕ್ಕಾಗಿ ಹಿಂಸೆಯ ಹಾದಿ ತುಳಿಯುವುದು ಸರಿಯಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಸೈದ್ಧಾಂತಿಕ ಭಿನ್ನಾಭಿಪ್ರಾಯ ಓಕೆ! ವಿಗ್ರಹ ಧ್ವಂಸವಾಗಬೇಕೆ..?!
ತ್ರಿಪುರದಲ್ಲಿ ರಷ್ಯಾದ ಕ್ರಾಂತಿಕಾರಿ ಚಿಂತಕ ಲೆನಿನ್ ವಿಗ್ರಹ, ತಮಿಳುನಾಡಿನಲ್ಲಿ ಸಾಮಾಜಿಕ ಹೋರಾಟಗಾರ ಪೆರಿಯಾರ್(ಇವಿಆರ್ ರಾಮಸಾಮಿ) ವಿಗ್ರಹ ಮತ್ತು ಕೋಲ್ಕತ್ತಾದಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ವಿಗ್ರಹ ಧ್ವಂಸದ ಕುರಿತು ಸೂಪರ್ ಸ್ಟಾರ್ ಕಮಲ್ ಹಾಸನ್ ಸಹ ಪ್ರತಿಕ್ರಿಯೆ ನೀಡಿದ್ದು, ಕಾವೇರಿ ವಿವಾದದಿಂದ ಜನರ ಗಮನ ಬೇರೆಡೆಗೆ ಹರಿಸುವ ತಂತ್ರ ಇದು ಎಂದಿದ್ದಾರೆ!
|
ಪೆರಿಯಾರ್ ವಿಗ್ರಹಕ್ಕೆ ರಕ್ಷಣೆ ಬೇಡ!
"ಪೆರಿಯಾರ್ ವಿಗ್ರಹಕ್ಕೆ ಪೊಲೀಸ್ ರಕ್ಷಣೆ ನೀಡುವ ಅಗತ್ಯವಿಲ್ಲ. ನಾವು ತಮಿಳರು ಆ ವಿಗ್ರಹವನ್ನು ಕಾಪಾಡುತ್ತೇವೆ. ಕಾವೇರಿ ವಿವಾದವನ್ನು ಮರೆಯಾಗಿಸಿ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ವಿಗ್ರಹ ಧ್ವಂಸದ ನಾಟಕವಾಡಲಾಗುತ್ತಿದೆ ಎನ್ನಿಸುತ್ತಿದೆ" ಫೆ.21 ರಂದು 'ಮಕ್ಕಳ ನೀತಿ ಮಯ್ಯಂ'(ಜನರ ನ್ಯಾಯ ಕೇಂದ್ರ) ಎಂಬ ಹೆಸರಿನಲ್ಲಿ ಹೊಸ ಪಕ್ಷ ಕಟ್ಟಿದ ಕಮಲ್ ಹಾಸನ್ ವಿಗ್ರಹ ಧ್ವಂಸದ ಕುರಿತು ನೀಡಿದ ಪ್ರತಿಕ್ರಿಯೆ ಇದು.
|
ಕಠಿಣ ಕ್ರಮ ಕೈಗೊಳ್ಳಿ
"ನಾನು ಎಲ್ಲಾ ಪಕ್ಷಗಳಿಗೂ ಮನವಿ ಮಾಡಿಕೊಳ್ಳುತ್ತೇನೆ. ತಮ್ಮ ತಮ್ಮ ಪಕ್ಷದ ಯಾವುದೇ ವ್ಯಕ್ತಿ ವಿಗ್ರಹ ಧ್ವಂಸದಂಥ ಪ್ರಕರಣಗಳಲ್ಲಿ ಭಾಗಿಯಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಇಂಥ ಘಟನೆಗಳು ಎಂದಿಗೂ ಸಮರ್ಥನೀಯವಲ್ಲ" ಎಂದು ಗ್ರಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
|
ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ
ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ. ನಮ್ಮಲ್ಲಿ ವಿಭಿನ್ನ ಸಿದ್ಧಾಂತಗಳಿವೆ. ವಿಗ್ರಹ ಧ್ವಂಸ ಮತ್ತು ಹಿಂಸೆಯ ಘಟನೆಗಳನ್ನು ನಾನು ಖಂಡಿಸುತ್ತೇನೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದ್ದಾರೆ.
|
ಮುಯ್ಯಿಗೆ ಮುಯ್ಯಿ ಸರಿಯಲ್ಲ!
ವಿಗ್ರಹ ಧ್ವಂಸದ ಒಂದು ಘಟನೆಗೆ ಮತ್ತೊಂದು ವಿಗ್ರಹ ಧ್ವಂಸ ಮಾಡುವುದೇ ಉತ್ತರವಲ್ಲ. ಇಂಥ ಎಲ್ಲ ಘಟನೆಗಳನ್ನೂ ನಾವು ಖಂಡಿಸುತ್ತೇವೆ. ಕೋಲ್ಕತ್ತಾದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ವಿಗ್ರಹ ಧ್ವಂಸಕ್ಕೆ ಸಂಬಂಧಿಸಿದಂತೆ ನಾವು ಆರು ಮಂದಿಯನ್ನು ಈಗಾಗಲೇ ಬಂಧಿಸಿದ್ದೇವೆ ಎಂದು ಪಶ್ಚಿಮ ಬಂಗಾಳ ಸಚಿವ ಸೋವನ್ ದೇವ್ ಚಟ್ಟೋಪಾಧ್ಯಾಯ ಹೇಳಿದ್ದಾರೆ.