ದೆಹಲಿ ಪತ್ರಕರ್ತನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು
ನವದೆಹಲಿ, ಜುಲೈ 6: ದೆಹಲಿ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಏಮ್ಸ್ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿ ಮೃತಪಟ್ಟ ವ್ಯಕ್ತಿಯ ಕೊನೆ ವಾಟ್ಸಾಪ್ ಸಂದೇಶ ಇದೀಗ ವೈರಲ್ ಆಗುತ್ತಿದೆ.
Recommended Video
ಕೊರೊನಾವೈರಸ್ ಸೋಂಕು ತಗುಲಿದ್ದರಿಂದ ಏಮ್ಸ್ ಗೆ ದಾಖಲಿಸಲಾಗಿತ್ತು. 37 ವರ್ಷ ವಯಸ್ಸಿನ ಮೃತ ಪತ್ರಕರ್ತ ದೆಹಲಿಯ ಈಶಾನ್ಯ ಭಾಗದ ಭಜನ್ ಪುರ್ ಪ್ರದೇಶದ ನಿವಾಸಿಯಾಗಿದ್ದರು. ಸ್ಥಳೀಯ ಹಿಂದಿ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದ ತರುಣ್ ಸಿಸೋಡಿಯಾ ಎಂದು ತಿಳಿದು ಬಂದಿದೆ.
ಕೋವಿಡ್ 19 ಸೋಂಕಿತ 37 ವರ್ಷ ವಯಸ್ಸಿನ ಪತ್ರಕರ್ತ ಆತ್ಮಹತ್ಯೆ
ಏಮ್ಸ್ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದ ವ್ಯಕ್ತಿಯನ್ನು ತಕ್ಷಣವೇ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ತರುಣ್ ಸಾವಿನ ಹಿಂದೆ ಆಸ್ಪತ್ರೆಯ ಕೈವಾಡವಿದೆ. ಆಸ್ಪತ್ರೆಯಲ್ಲಿನ ಹುಳುಕು ತೋರಿಸಿದ್ದರಿಂದ ಕಿರುಕುಳ ನೀಡಲಾಗದೆ, ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ, ತರುಣ್ ಸಾವಿಗೆ ನ್ಯಾಯ ಸಿಗಬೇಕಿದೆ ಎಂದು ಆಪ್ತರು ಆಗ್ರಹಿಸಿದ್ದಾರೆ.
ಡಿಸಿಪಿ ದೇವೇಂದ್ರ ಆರ್ಯ ಹೇಳಿಕೆ
"ಜೂನ್ 24 ರಂದು ಕೊವಿಡ್ 19 ರ ಟ್ರಾಮ್ ಕೇಂದ್ರದಲ್ಲಿ ದಾಖಲಾಗಿದ್ದ ಪತ್ರಕರ್ತ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಆರೋಗ್ಯದಲ್ಲಿ ಏರುಪೇರು ಉಂಟಾಗಿದರಿಂದ ಇತ್ತೀಚೆಗೆ ಮೊದಲ ಮಹಡಿಯಲ್ಲಿದ್ದ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು. ಇದಕ್ಕೂ ಮುನ್ನ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ'' ಎಂದು ದೆಹಲಿ ನೈಋತ್ಯ ವಿಭಾಗದ ಡಿಸಿಪಿ ದೇವೇಂದ್ರ ಆರ್ಯ ತಿಳಿಸಿದರು.
ನನ್ನ ಕೊಲೆಯಾಗಬಹುದು ಎಂದಿದ್ದ ಪತ್ರಕರ್ತ
37 ವರ್ಷ ವಯಸ್ಸಿನ ಪತ್ರಕರ್ತ ಜೂನ್ 24ರಂದು ಜೆಪಿಎನ್ ಎ ಟಿಸಿಗೆ ದಾಖಲಾಗಿದ್ದರು. ಸೋಮವಾರದಂದು ತನಕ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತು. ಜನರಲ್ ವಾರ್ಡ್ ಗೆ ಶಿಫ್ಟ್ ಆಗುವ ಸಾಧ್ಯತೆಯಿದೆ ಎಂದಿದ್ದ ಪತ್ರಕರ್ತ ಇದಕ್ಕೂ ಮುನ್ನ ನನ್ನ ಕೊಲೆಯಾಗಬಹುದು ಎಂದು ಆಪ್ತರಿಗೆ ವಾಟ್ಸಾಪ್ ಮೂಲಕ ಕಳಿಸಿದ್ದರು ಎನ್ನಲಾಗಿದೆ. ಇದೇ ವಾಟ್ಸಾಪ್ ಸಂದೇಶ ಹರಿದಾಡುತ್ತಿದೆ. ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ವರದಿ ಮಾಡಿ, ಆರೋಗ್ಯ ಇಲಾಖೆ ಗಮನ ಸೆಳೆದಿದ್ದ ಪತ್ರಕರ್ತನನ್ನು ಐಸಿಯುಗೆ ಬಲವಂತವಾಗಿ ಶಿಫ್ಟ್ ಮಾಡಲಾಗಿತ್ತು ಎಂಬ ಆರೋಪವಿದೆ.
|
ವಾಟ್ಸಾಪ್ ಸಂದೇಶದಲ್ಲಿ ಏನಿದೆ?
ಮೌಸಮಿ ಎಂಬುವರು ಟ್ವೀಟ್ ಮಾಡಿ ತರುಣ್ ಸಿಸೋಡಿಯಾ ಸಾವಿನ ಬಗ್ಗೆ ಏಮ್ಸ್ ನೀಡಿರುವ ಪ್ರಕಟಣೆ ಹಾಗೂ ಕೊನೆ ಸಂದೇಶ ಎನ್ನಲಾದ ವಾಟ್ಸಾಪ್ ಗ್ರೂಪಿನ ಸಂದೇಶವನ್ನು ಹಾಕಿದ್ದಾರೆ. ಇದರಲ್ಲಿ ತರುಣ್ ಅವರು ಮರ್ಡರ್ ಹೋ ಸಕ್ತಾ ಹೇ ಎಂದಿದ್ದಾರೆ. ಏಮ್ಸ್ ಪ್ರಕಟಣೆಯಂತೆ ಟಿಸಿ1ನಿಂದ ತರುಣ್ ಓಡೀ ಹೋಗಿದ್ದಾರೆ. ಅವರ ಹಿಂದೆ ವಾರ್ಡ್ ಅಡೆಂಟರ್ಸ್ ಓಡಿದ್ದಾರೆ. ನಾಲ್ಕನೆ ಮಹಡಿಗೆ ಹೋದ ತರುಣ್ ಕಿಟಕಿ ಒಡೆದು ಕೆಳಗೆ ಹಾರಿದ್ದಾರೆ. ತಕ್ಷಣವೇ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಲು ಯತ್ನಿಸಿದರೂ 3.35ಕ್ಕೆ ಮೃತರಾದರು ಎಂದು ಹಾಕಲಾಗಿದೆ.
|
ತನಿಖೆಗೆ ಆದೇಶಿಸಿದ ಕೇಂದ್ರ ಸಚಿವ ಡಾ. ಹರ್ಷವರ್ಧನ್
ಯುವ ಪತ್ರಕರ್ತ ತರುಣ್ ಸಿಸೋಡಿಯಾ ನಿಧನದಿಂದ ತೀವ್ರ ದುಃಖವಾಗಿದೆ. ಅತ್ಯಂತ ದುರದೃಷ್ಟಕರ ಸಂಗತಿ, ಅವರ ಪತ್ನಿ, ಪುತ್ರ ಹಾಗೂ ಕುಟುಂಬಕ್ಕೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಏಮ್ಸ್ ನಿರ್ದೇಶಕರಿಗೆ ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಹೇಳಿದ್ದಾರೆ.
ಏಮ್ಸ್ ನಿಂದ ಆಂತರಿಕ ತನಿಖೆ
ಕೇಂದ್ರ ಸಚಿವ ಡಾ. ಹರ್ಷ್ ವರ್ಧನ್ ಆದೇಶದಂತೆ ಏಮ್ಸ್ ನಿರ್ದೇಶಕರು ಆಂತರಿಕ ಸಮಿತಿ ರಚಿಸಿದ್ದಾರೆ. ನ್ಯೂರೋ ಸೈನ್ಸ್ ವಿಭಾಗದ ಮುಖ್ಯಸ್ಥೆ ಪ್ರೊ ಪದ್ಮಾ, ಸೈಕಿಯಾಟ್ರಿ ವಿಭಾಗ ಪ್ರೊ ಆರ್ ಕೆ ಛಡ್ಡಾ, ಡೆಪ್ಯುಟಿ ನಿರ್ದೇಶಕ (ಅಡ್ಮಿನ್) ಎಸ್ ಎಚ್ ಪಾಂಡಾ, ಔಷಧ ಹಾಗೂ ಪುನರ್ವಸತಿ ಕೇಂದ್ರದ ಮುಖ್ಯಸ್ಥ ಡಾ ಯು ಸಿಂಗ್ ಅವರು ಸಮಿತಿಯಲ್ಲಿದ್ದಾರೆ. 48 ಗಂಟೆಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ಆದರೆ, ಪತ್ರಕರ್ತನ ಸಾವಿನ ಪ್ರಕರಣದ ತನಿಖೆ ಕೇಂದ್ರ ತನಿಖಾ ಸಂಸ್ಥೆ ಮೂಲಕ ನಡೆಯಲಿ ಎಂದು ತರುಣ್ ಆಪ್ತರು ಆಗ್ರಹಿಸಿದ್ದಾರೆ.