ಇನ್ನೂ ಚಿಂತಾಜನಕ ಸ್ಥಿತಿಯಲ್ಲಿ ಹನುಮಂತಪ್ಪ ಕೊಪ್ಪದ್
ನವದೆಹಲಿ, ಫೆಬ್ರವರಿ 09 : ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಆರು ದಿನಗಳ ನಂತರವೂ ಜೀವಂತವಾಗಿದ್ದ ಯೋಧ ಧಾರವಾಡದ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ದೆಹಲಿಯ ರಿಸರ್ಚ್ ಮತ್ತು ರೆಫರಲ್ ಆಸ್ಪತ್ರೆ ಹೇಳಿಕೆಯನ್ನು ಸಂಜೆ 4.15ಕ್ಕೆ ಬಿಡುಗಡೆ ಮಾಡಿದೆ.
ಅವರು ಇನ್ನೂ ಕೋಮಾದಲ್ಲಿಯೇ ಇದ್ದು, ರಕ್ತದೊತ್ತಡ ಕುಸಿದಿದೆ. ತೀವ್ರ ಆಘಾತಕ್ಕೆ ಒಳಗಾಗಿರುವ ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಅವರಿಗೆ ನ್ಯೂಮೋನಿಯಾ ಕೂಡ ಆಗಿದ್ದು, ಸಾಕಷ್ಟು ತಪಾಸಣೆಯ ನಂತರ ಯಕೃತ್ತು ಮತ್ತು ಮೂತ್ರಕೋಶ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. [ಸಿಯಾಚಿನ್ ಪವಾಡ: ಹನುಮಂತಪ್ಪ ಬಗ್ಗೆ ಅವರ ಅವ್ವ ಹೇಳಿದ್ದೇನು?]
ಹಿಮದ 25 ಅಡಿ ಕೆಳಗೆ ಹುದುಗಿದ್ದರೂ ಅದೃಷ್ಟವಶಾತ್ ಅವರಿಗೆ ತೀವ್ರ ಚಳಿಯ ಹೊಡೆತಕ್ಕೆ ಸಂಬಂಧಿಸಿದ ತೊಂದರೆ ಅಥವಾ ಮೂಳೆ ಮುರಿತಗಳಾಗಿಲ್ಲ. ಅವರನ್ನು ತೀವ್ರನಿಗಾ ಘಟಕ ತಜ್ಞರು, ನರರೋಗ ತಜ್ಞರು, ಮೂತ್ರಕೋಶ ತಜ್ಞರು ಸತತವಾಗಿ ತಪಾಸಣೆ ಮಾಡುತ್ತಿದ್ದಾರೆ. ಅವರಿಗೆ ನೀರಾಹಾರ ನೀಡಲಾಗುತ್ತಿದ್ದು, ರಕ್ತದೊತ್ತಡ ಮೇಲೆ ತರಲು ಔಷಧಿ ನೀಡಲಾಗುತ್ತಿದೆ.
ಅವರ ದೇಹವನ್ನು ಬಾಹ್ಯವಾಗಿ ಬಿಸಿಯಾಗಿ ಇಡಲಾಗುತ್ತಿದೆ. ಮುಂದಿನ 24ರಿಂದ 48 ಗಂಟೆಗಳ ಅವಧಿಯಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಹನುಮಂತಪ್ಪ ಅವರ ತಾಯಿ, ಹೆಂಡತಿ ಮತ್ತಿತರ ಸಂಬಂಧಿಗಳು ದೆಹಲಿಗೆ ತೆರಳಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ದೇಶದ ಜನತೆ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. [ದೆಹಲಿಗೆ ಹೊರಟ ಯೋಧ ಹನುಮಂತಪ್ಪ ಕುಟುಂಬದವರು]