ಲಾಲೂ ಪ್ರಸಾದ್ ಯಾದವ್ ಏಮ್ಸ್ಗೆ ದಾಖಲು: ತಂದೆ ಆರೋಗ್ಯದ ಬಗ್ಗೆ ಪುತ್ರನ ಕಳವಳ
ಹೊಸದಿಲ್ಲಿ ಮಾರ್ಚ್ 23: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ದಾಖಲಿಸಲಾಗಿದೆ. ಲಾಲೂ ಯಾದವ್ ಅವರಿಗೆ ಕಿಡ್ನಿ ಸೋಂಕು ಹೆಚ್ಚಾಗಿದ್ದು ಅವರನ್ನು ರಿಮ್ಸ್ ವೈದ್ಯಕೀಯ ಮಂಡಳಿಯು ದೆಹಲಿ ಏಮ್ಸ್ಗೆ ಕರೆದೊಯ್ಯಲು ಸೂಚಿಸಿದೆ. ಮಂಗಳವಾರ (ಮಾರ್ಚ್ 22) ಸಂಜೆ 6 ಗಂಟೆ ಸುಮಾರಿಗೆ ವಿಶೇಷ ವಿಮಾನದ ಮೂಲಕ ಅವರನ್ನು ದೆಹಲಿ ಏಮ್ಸ್ಗೆ ಕರೆತಂದ ನಂತರ ರಾತ್ರಿ ವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಲಾಗಿತ್ತು. ನಿನ್ನೆ ಲಾಲೂ ಯಾದವ್ ಅವರನ್ನು ರಾಂಚಿಗೆ ವಾಪಸ್ ಕಳುಹಿಸುವ ಕುರಿತು ಮಾತುಕತೆ ನಡೆದಿತ್ತು ಆದರೆ ಬುಧವಾರ ಮಧ್ಯಾಹ್ನ ಅವರನ್ನು ಏಮ್ಸ್ಗೆ ದಾಖಲಿಸಲಾಗಿದೆ.
ಸದ್ಯ ಲಾಲೂ ಪ್ರಸಾದ್ ಯಾದವ್ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಲಾಲೂ ಯಾದವ್ ಪುತ್ರ ಹಾಗೂ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ. ಅವರು ರಾಂಚಿಯಲ್ಲಿದ್ದಾಗ ಲಾಲು ಯಾದವ್ ಅವರ ಕ್ರಿಯೇಟಿನೈನ್ ಮಟ್ಟ 4.5 ಆಗಿತ್ತು. ದೆಹಲಿಗೆ ಬಂದ ಮೇಲೆ 5.1 ಆಗಿದ್ದು, ಮತ್ತೊಮ್ಮೆ ಪರೀಕ್ಷೆ ನಡೆಸಿದರೆ 5.9ಕ್ಕೆ ತಲುಪಿದೆ. ಸೋಂಕು ನಿರಂತರವಾಗಿ ಹೆಚ್ಚುತ್ತಿದೆ. ಆದ್ದರಿಂದ ನಾವು ಅವರ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದೇವೆ ಎಂದು ತೇಜಸ್ವಿ ಅವರು ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರು: ಏರ್ ಆಂಬುಲೆನ್ಸ್ ಮೂಲಕ ದೆಹಲಿಗೆ ಕರೆತರಲು ಸಿದ್ಧತೆ
ಏನಿದು ಕ್ರಿಯೇಟಿನೈನ್?
ಕ್ರಿಯೇಟಿನೈನ್ ಎನ್ನುವುದು ದೇಹದಲ್ಲಿನ ಸ್ನಾಯುವಿನ ಕ್ರಿಯೆಯ ಮೂಲಕ ಉತ್ಪತ್ತಿಯಾಗುವ ರಾಸಾಯನಿಕ ತ್ಯಾಜ್ಯ ಉತ್ಪನ್ನವಾಗಿದೆ. ಮೂತ್ರಪಿಂಡಗಳು ನಮ್ಮ ರಕ್ತದಿಂದ ಕ್ರಿಯೇಟಿನೈನ್ ಮತ್ತು ಇತರ ತ್ಯಾಜ್ಯ ಉತ್ಪನ್ನಗಳನ್ನು ಫಿಲ್ಟರ್ ಮಾಡುವ ಕೆಲಸ ಮಾಡುತ್ತವೆ. ಫಿಲ್ಟರ್ ಮಾಡಿದ ನಂತರ ಈ ತ್ಯಾಜ್ಯ ಉತ್ಪನ್ನಗಳನ್ನು ನಮ್ಮ ದೇಹದಿಂದ ಮೂತ್ರದ ರೂಪದಲ್ಲಿ ಹೊರಹಾಕಲಾಗುತ್ತದೆ.
ಕ್ರಿಯೇಟಿನೈನ್ ಮಟ್ಟವನ್ನು ಅಳೆಯುವುದರಿಂದ ನಮ್ಮ ಮೂತ್ರಪಿಂಡಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಬಹುದು. ವೈದ್ಯರು ರಕ್ತ ಪರೀಕ್ಷೆ ಅಥವಾ ಮೂತ್ರ ಪರೀಕ್ಷೆ ಮಾಡುವ ಮೂಲಕ ಕ್ರಿಯೇಟಿನೈನ್ ಮಟ್ಟವನ್ನು ನಿರ್ಧರಿಸುತ್ತಾರೆ. ಅಸಹಜ ಕ್ರಿಯೇಟಿನೈನ್ ಮಟ್ಟವು ಮೂತ್ರಪಿಂಡದ ಕಾಯಿಲೆಯ ಸಂಕೇತವಾಗಿದೆ. ದೇಹದಲ್ಲಿನ ಕ್ರಿಯೇಟಿನೈನ್ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಫಿಲ್ಟರ್ ಮಾಡಲು ಮೂತ್ರಪಿಂಡಗಳು ಸಹಾಯ ಮಾಡುತ್ತವೆ. ಕ್ರಿಯೇಟಿನೈನ್ ಮಟ್ಟ ವಯಸ್ಸು, ಲಿಂಗ, ದೇಹದ ಗಾತ್ರದಂತಹ ಅಂಶಗಳನ್ನು ಅವಲಂಬಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಪುರುಷರಾದರೆ 0.6 ರಿಂದ 1.2 ಮಿಗ್ರಾಂ / ಡಿಎಲ್ ಇದನ್ನು ರಕ್ತ ಕ್ರಿಯೇಟಿನೈನ್'ನ ಸಾಮಾನ್ಯ ಮಟ್ಟವೆಂದು ಪರಿಗಣಿಸಲಾಗುತ್ತದೆ. ಆದರೆ ಲಾಲು ಯಾದವ್ ಅವರ ಕ್ರಿಯೇಟಿನೈನ್ ಮಟ್ಟ 4.5 ಆಗಿತ್ತು. ಸೋಂಕು ನಿರಂತರವಾಗಿ ಹೆಚ್ಚುತ್ತದ್ದು ಅವರ ಮಕ್ಕಳಲ್ಲಿ ಆತಂಕ ಹೆಚ್ಚಿಸಿದೆ.
ಲಾಲೂ ಯಾದವ್ ಅವರ ಹಿರಿಯ ಪುತ್ರ, ಆರ್ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ ಅವರು ತಂದೆಯ ವಯಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ ಅವರನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕೆಲಸ ಮಾಡಿದವರು ಬಯಲಿನಲ್ಲಿ ತಿರುಗಾಡುತ್ತಿದ್ದಾರೆ ಎಂದು ತೇಜ್ ಪ್ರತಾಪ್ ಹೇಳಿದ್ದಾರೆ. ಈ ವಿಚಾರವನ್ನು ನಮ್ಮ ತಂದೆ ಬಯಲಿಗೆಳೆದಿದ್ದರು. ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಈ ಕೆಲಸ ಮಾಡಿದವರು ಇಂದು ಮನೆಯಲ್ಲಿ ಕುಳಿತಿದ್ದಾರೆ. ಆದರೆ 73 ವರ್ಷದ ಲಾಲೂ ಯಾದವ್ ಮೇವು ಹಗರಣ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಫೆಬ್ರವರಿ 21 ರಂದು ವಿಶೇಷ ಸಿಬಿಐ ನ್ಯಾಯಾಲಯವು ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಲಾಲೂ ಯಾದವ್ ಕಿಡ್ನಿ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಜೈಲಿನಲ್ಲಿ ಇಡುವ ಬದಲು ರಿಮ್ಸ್ ಗೆ ದಾಖಲಿಸಲಾಗಿತ್ತು. ಲಾಲೂ ಅವರ ಮೂತ್ರಪಿಂಡದ ಶೇಕಡಾ 20 ರಷ್ಟು ಮಾತ್ರ ಕೆಲಸ ಮಾಡುತ್ತಿದೆ.