'ಗಾಂಧಿ' ಅಧ್ಯಕ್ಷರಾಗದಿದ್ದರೆ ಕಾಂಗ್ರೆಸ್ ಭವಿಷ್ಯ ಅಯೋಮಯ: ಶಾಸ್ತ್ರಿ ಪುತ್ರ
ನವದೆಹಲಿ, ಜುಲೈ 19: 'ನೆಹರೂ-ಗಾಂಧಿ' ಕುಟುಂಬದ ಸದಸ್ಯರೇ ಅಧ್ಯಕ್ಷರಾಗದಿದ್ದರೆ ಕಾಂಗ್ರೆಸ್ ನ ಭವಿಷ್ಯ ಅಯೋಮಯವಾಗಲಿದೆ ಎಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಶಾಸ್ತ್ರಿ ಆತಂಕ ವ್ಯಕ್ತಪಡಿಸಿದ್ದಾರೆ.
"ಕಾಂಗ್ರೆಸ್ಸಿಗೆ 'ಗಾಂಧಿ' ಕುಟುಂಬಸ್ಥರೇ ಅಧ್ಯಕ್ಷರಾಗಬೇಕು. ಇಲ್ಲವೆಂದರೆ ಅದರಲ್ಲಿ ಒಗ್ಗಟ್ಟು ಒಡೆಯುತ್ತದೆ. ಈಗಾಗಲೇ ಪ್ರಾದೇಶಿಕ ಪಕ್ಷಗಳಾದ ಎನ್ ಸಿಪಿ, ಟಿಎಂಸಿ ಗಳಿಗಾದ ಗತಿಯೇ ಕಾಂಗ್ರೆಸ್ಸಿಗೂ ಬರುತ್ತದೆ" ಎಂದು ಅವರು ಹೇಳಿದ್ದಾರೆ. ಜೊತೆಗೆ ಪ್ರಿಯಾಂಕಾ ಗಾಂಧಿ ಈ ಹುದ್ದೆಗೆ ಸೂಕ್ತ ವ್ಯಕ್ತಿ ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಹೆಗಲಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ?!
ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ಹೀನಾಯ ಪ್ರದರ್ಶನದ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆ ನಂತರ ತೆರವಾದ ಸ್ಥಾನಕ್ಕೆ ಇದುವರೆಗೆ ಯಾರನ್ನೂ ಆರಿಸಲಾಗಿಲ್ಲ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯೂ ಮುಂದಕ್ಕೆ ಹೋಗುತ್ತಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಹಂಗಾಮಿ ಅಧ್ಯಕ್ಷರಾಗಲಿ ಎಂಬ ಕಾರ್ಯಕರ್ತರು, ಹಿರಿಯ ಕಾಂಗ್ರಸ್ ಮುಖಂಡರ ಬೇಡಿಕೆಗೂ ಅವರು ಸೊಪ್ಪು ಹಾಕಿದಂತಿಲ್ಲ. ಕೆಲವೆಡೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನೇ ಪಕ್ಷಾಧ್ಯಕ್ಷರನ್ನಾಗಿ ಮಾಡಿ ಎಂಬ ಬೇಡಿಕೆಯೂ ಕೇಳಿಬರುತ್ತಿದೆ. ಆದರೆ ಗಾಂಧಿ ಕುಟುಂಬದ ಸದಸ್ಯರನ್ನು ಬಿಟ್ಟು ಬೇರೆಯವರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿ ಎಂದು ಈಗಾಗಲೇ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿಯೇ ಸೂಕ್ತ
ಅನಿಲ್ ಶಾಸ್ತ್ರಿ ಅವರೂ ಪ್ರಿಯಾಂಕಾ ಗಾಂಧಿ ಅವರೇ ಆ ಸ್ಥಾನಕ್ಕೆ ಸೂಕ್ತ ಎಂದಿದ್ದಾರೆ. ಪ್ರಿಯಾಂಕಾ ಗಾಂಧಿ ಅವರನ್ನು ಈ ಸ್ಥಾನದಲ್ಲಿ ಕೂರಿಸಲು ಯಾರಾದರೂ ಒಪ್ಪುತ್ತಾರೆ. ನಾನೂ ಅದಕ್ಕೆ ಒಪ್ಪಿಗೆ ಸೂಚಿಸುತ್ತೇನೆ. ಆಕೆ ಈ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬ ನಂಬಿಕೆ ನನಗಿದೆ ಎಂದು ಶಾಸ್ತ್ರಿ ಹೇಳಿದರು.
ಪ್ರಿಯಾಂಕಾಗಿಂತ ಸೂಕ್ತರು ಯಾರಿದ್ದಾರೆ?
ರಾಹುಲ್ ಗಾಂಧಿ ರಾಜೀನಾಮೆಯನ್ನು ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿಯಾಗಿದೆ, ಸೋನಿಯಾ ಗಾಂಧಿ ಮತ್ತೆ ಅಧ್ಯಕ್ಷರಾಗಲು ಅನಾರೋಗ್ಯದಿಂದ ಸಾಧ್ಯವಿಲ್ಲ ಎಂದಿದ್ದಾರೆ. ಈ ಇಬ್ಬರ ನಿಲುವಿನಲ್ಲೂ ಬದಲಾವಣೆ ಇಲ್ಲ ಎಂದಾದರೆ "ಪ್ರಿಯಾಂಕಾ ಗಾಂಧಿ ಅವರಿಗಿಂತ ಸೂಕ್ತರು ಈ ಸ್ಥಾನಕ್ಕೆ ಬೇರೆ ಯಾರಿದ್ದಾರೆ?" ಎಂದು ಶಾಸ್ತ್ರಿ ಪ್ರಶ್ನಿಸಿದ್ದಾರೆ.
ಸೋನಿಯಾ ಗಾಂಧಿಯೇ ಅಧ್ಯಕ್ಷರಾಗಲೀ, ಹಿರಿಯ ಕಾಂಗ್ರೆಸ್ಸಿಗರ ಒತ್ತಾಯ
ಟಿಎಂಸಿ, ಎನ್ ಸಿಪಿಯಂತೇ ಆದೀತು!
ಈಗಾಗಲೇ ಕಾಂಗ್ರೆಸ್ ಹಲವು ಭಾಗಗಳಾಗಿ ಹಂಚಿದೆ. ತೃಣಮೂಲ ಕಾಂಗ್ರೆಸ್, ನ್ಯಾಶ್ನಲಿಸ್ಟ್ ಕಾಂಗ್ರೆಸ್ ಪಕ್ಷ, ವೈ ಎಸ್ ಆರ್ ಕಾಂಗ್ರೆಸ್ ಹೀಗೇ. ಗಟ್ಟಿ ನಾಯಕತ್ವ ಇಲ್ಲದಿದ್ದರೆ ಕಾಂಗ್ರೆಸ್ ಮತ್ತಷ್ಟು ಭಾಗವಾಗುವುದು ಖಂಡಿತ. ಪ್ರಾದೇಶಕ ಪಕ್ಷದ ಸ್ಥಿತಿಯನ್ನು ಕಾಂಗ್ರೆಸ್ ತಲುಪಬಹುದು. ಆದ್ದರಿಂದ ಗಟ್ಟಿ ನಾಯಕತ್ವದಿಂದ ಮಾತ್ರವೇ ಸಮಸ್ಯೆ ಈಡೇರಿಸಲು ಸಾಧ್ಯ ಎಂದು ಅವರು ಹೇಳಿದರು.
ರಾಹುಲ್ ನಿಲುವಿಗೆ ಗೌರವ
"ರಾಹುಲ್ ಗಾಂಧಿ ಅವರ ನಿರ್ಧಾರವನ್ನು ಕಾಂಗ್ರೆಸ್ ಗೌರವಿಸುತ್ತದೆ. ನಾನೂ ಗೌರವಿಸುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವ ಬೇಕು. ಪಕ್ಷ ಈಗಿರುವ ಸ್ಥಿತಿಯಲ್ಲಿ ಗಟ್ಟಿ ನಾಯಕರನ್ನು ಆರಿಸಬೇಕು. ಆದಷ್ಟು ಬೇಗ ಕಾಂಗ್ರೆಸ್ಸಿಗೆ ಅಧ್ಯಕ್ಷರು ದೊರಕುತ್ತಾರೆ ಎಂದುಕೊಂದಿದ್ದೇನೆ" ಎಂದು ಅನಿಲ್ ಹೇಳಿದರು.