ಸಿಂಘು ಗಡಿಯಲ್ಲಿ ಹತ್ಯೆಯಾದ ಲಖಬೀರ್ ಸಿಂಗ್ ಜೇಬಲ್ಲಿ 50 ರೂ.: ಕುಟುಂಬಸ್ಥರು ಹೇಳುವುದೇನು?
ನವದೆಹಲಿ, ಅಕ್ಟೋಬರ್ 16: ದೆಹಲಿ-ಹರಿಯಾಣ ಗಡಿ ಸಮೀಪದ ಸಿಂಘು ಎಂಬಲ್ಲಿ ನಿಹಾಂಗ್ ಸಿಖ್ಖರ ಗುಂಪಿನಿಂದ ಹತ್ಯೆಗೀಡಾದ ಲಖಬೀರ್ ಸಿಂಗ್ ಒಬ್ಬ ವ್ಯಸನಿಯಾಗಿದ್ದರು ಎಂದು ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ. ಲಖಬೀರ್ ಸಿಂಗ್ ಅನ್ನು ಕೆಲವು ವ್ಯಕ್ತಿಗಳು ಆಮಿಷವೊಡ್ಡಿ ಪ್ರತಿಭಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು ಎಂದು ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆರೋಪಿಸಿದ್ದಾರೆ.
"ಮೃತ ಲಖಬೀರ್ ಸಿಂಗ್, ಸಿಖ್ ಧಾರ್ಮಿಕ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆದರೂ ಈ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ. ಅವನು ಅಲ್ಲಿಗೆ ಹೋಗಲು ಆಮಿಷವೊಡ್ಡಲಾಗಿದ್ದು, ಈ ಬಗ್ಗೆ ಸೂಕ್ತ ರೀತಿ ತನಿಖೆ ನಡೆಸಬೇಕು ಮತ್ತು ಅವನಿಗೆ ನ್ಯಾಯ ಸಿಗಬೇಕು ಎಂದು ಮಾವ ಬಲದೇವ್ ಸಿಂಗ್ ಹೇಳಿದ್ದಾರೆ.
ದೆಹಲಿಯ ಸಿಂಘು ಗಡಿಯಲ್ಲಿ ಲಖಬೀರ್ ಸಿಂಗ್ ಹತ್ಯೆಗೆ ಪ್ರಮುಖ ಕಾರಣಗಳು?
"50 ರೂಪಾಯಿ ತೆಗೆದುಕೊಂಡು ಹೋದ ಲಖಬೀರ್ ಸಿಂಗ್ ಚಬಲ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದೇನೆ ಮತ್ತು ಒಂದು ವಾರದ ನಂತರ ಹಿಂತಿರುಗುವುದಾಗಿ ಹೇಳಿದ್ದರು. "ಅವನು ಅಲ್ಲಿ ಕೆಲಸಕ್ಕೆ ಹೋಗಿದ್ದಾನೆ ಎಂದು ನಾನು ಭಾವಿಸಿದೆ. ಆತ ಗುರು ಗ್ರಂಥ ಸಾಹಿಬ್ ನ ಅಪವಿತ್ರಗೊಳಿಸುವಂತ ವ್ಯಕ್ತಿಯಲ್ಲ, ಈ ಪ್ರಕರಣದಲ್ಲಿ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು," ಎಂದು ಸಹೋದರಿ ರಾಜ್ ಕೌರ್ ಆಗ್ರಹಿಸಿದ್ದಾರೆ.
ಇದೇ ರೀತಿಯ ಟೀಕೆಗಳನ್ನು ಸಂಬಂಧಿಕರು ಹಾಗೂ ನೆರೆಹೊರೆಯವರು ಮಾಡುತ್ತಿದ್ದಾರೆ. "ಲಖ್ಬೀರ್ ಗ್ರಂಥವನ್ನು ಅಪವಿತ್ರಗೊಳಿಸುವಲ್ಲಿ ಭಾಗಿಯಾಗಲು ಸಾಧ್ಯವಿಲ್ಲ" ಎಂದು ಒಬ್ಬ ನಿವಾಸಿ ಹೇಳಿದರೆ, ಇನ್ನೊಬ್ಬ ನಿವಾಸಿ ಲಖಬೀರ್ ವಿರುದ್ಧ ಅಪವಿತ್ರ ಆರೋಪವನ್ನು ತಳ್ಳಿಹಾಕಿದ್ದಾರೆ.
ಲಖಬೀರ್ ಸಿಂಗ್ ಹತ್ಯೆ ಕುರಿತು ಪ್ರಮುಖ ಅಂಶಗಳನ್ನು ಓದಿ:
* ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಕಳೆದೊಂದು ವರ್ಷಗಳಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಸಿಂಘು ಗಡಿಯಲ್ಲಿ ಶುಕ್ರವಾರ ಲಖಬೀರ್ ಸಿಂಗ್ ಮೃತದೇಹ ಪತ್ತೆಯಾಗಿದೆ
* "ಲಖಬೀರ್ ಸಿಂಗ್ ತಮ್ಮ ತಂದೆ ತಾಯಿ ಸಾವಿನ ನಂತರದಲ್ಲಿ ತಮ್ಮ ಸಹೋದರಿ ಹಾಗೂ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಜೊತೆಗೆ ವಾಸವಾಗಿದ್ದರು. ಅವರು ಯಾರೊಂದಿಗೆ ದೆಹಲಿಗೆ ಹೋದರು ಎಂದು ನಾವು ತನಿಖೆ ಮಾಡುತ್ತಿದ್ದೇವೆ. "ದರ್ಶನ್ ಸಿಂಗ್ ಪುತ್ರನಾದ ಲಖಬೀರ್ ಸಿಂಗ್ ಅನ್ನು ಚಿಕ್ಕಪ್ಪ ಹರ್ನಮ್ ಸಿಂಗ್ ಆರು ತಿಂಗಳ ಮಗುವಾಗಿದ್ದಾಗಲೇ ದತ್ತು ಪಡೆದಿದ್ದರು," ಎಂದು ಎಎಸ್ಐ ಕಾಬಲ್ ಸಿಂಗ್ ಹೇಳಿದ್ದಾರೆ.
* ಐಎಎನ್ಎಸ್ ವರದಿಗಳ ಪ್ರಕಾರ, ಲಖಬೀರ್ ಸಿಂಗ್ ಕಳೆದ 3 ರಿಂದ 4 ದಿನಗಳಿಂದ ಸಿಂಘು ಗಡಿಯಲ್ಲಿ ನಿಹಾಂಗ್ ಸಿಖ್ಖರ ಗುಂಪಿನೊಂದಿಗೆ ತಂಗಿದ್ದರು.
* ಲಖಬೀರ್ ಸಿಂಗ್ ಹತ್ಯೆಗೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ನಿಹಾಂಗ್ ಸಿಖ್ ಗುಂಪಿಗೆ ಸೇರಿದ ಸರವಜೀತ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿಯು ಹರಿಯಾಣ ಪೊಲೀಸರ ಎದುರು ಶರಣಾಗಿದ್ದಾನೆ. ಈ ಘಟನೆಗೆ ತಾನೇ ಹೊಣೆ ಎಂದು ಒಪ್ಪಿಕೊಂಡಿದ್ದು, ಶನಿವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
* ಸಂಯುಕ್ತ ಕಿಸಾನ್ ಮೋರ್ಚಾ (SKM) ಸಿಂಘು ಗಡಿ ಪ್ರತಿಭಟನಾ ಸ್ಥಳದಲ್ಲಿ ವ್ಯಕ್ತಿಯ ಬರ್ಬರ ಹತ್ಯೆಯನ್ನು ಖಂಡಿಸಿದ್ದು, ನಿಹಾಂಗ್ಗಳಿಗೂ ತಮಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
* "ಸರ್ಬಲೋಹ್ ಗ್ರಂಥಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಿಂದ ಈ ಘಟನೆ ನಡೆದಿದೆ ಎಂದು ಹೇಳುತ್ತಾ, ಸ್ಥಳದಲ್ಲಿದ್ದ ನಿಹಾಂಗ್ ಗುಂಪು ಕೊಲೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಲಖಬೀರ್ ಸಿಂಗ್ ಸ್ವಲ್ಪ ಸಮಯದವರೆಗೆ ಅದೇ ನಿಹಾಂಗ್ಗಳ ಗುಂಪಿನೊಂದಿಗೆ ಇದ್ದರು ಎಂದು ವರದಿಯಾಗಿದೆ.
* ಸ್ವರಾಜ್ ಇಂಡಿಯಾ ಮತ್ತು ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ನಿಹಾಂಗ್ ಗುಂಪಿಗೆ ರೈತ ಮುಖಂಡರು ಇದು ಧಾರ್ಮಿಕ ಚಳುವಳಿಯಲ್ಲ, ರೈತರ ಆಂದೋಲನಕ್ಕೆ ಸ್ಥಳವಾಗಿದೆ ಎಂದು ಹಲವು ಬಾರಿ ಹೇಳಿದ್ದಾರೆ. ಕ್ರೂರ ಹತ್ಯೆಯನ್ನು ಬಲವಾಗಿ ಖಂಡಿಸಿದ ಅವರು, ಈ ಅನಾಗರಿಕ ಕೃತ್ಯವೆಸಗಿದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
* ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ತಮ್ಮ ಚಂಡೀಗಢ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ಕರೆದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಮತ್ತು ನ್ಯಾಯಯುತ ಕ್ರಮಕ್ಕೆ ಆದೇಶಿಸಿದ್ದಾರೆ.
* ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷವು ಸರ್ಕಾರ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಎಂದಿದ್ದು, ಕಾನೂನು ಹಾದಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದೆ.
* "ಈ ದೇಶವು ಕಾನೂನಿನ ಅಡಿಯಲ್ಲಿ ಆಡಳಿತವನ್ನು ನಡೆಸಲಾಗುತ್ತಿದೆ. ಈ ಬಗ್ಗೆ ತಿಳಿದುಕೊಳ್ಳುವುದು, ತನಿಖೆ ಮಾಡುವುದು ಮತ್ತು ಕಾನೂನು ಹಾದಿಯಲ್ಲಿ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.
ಏನಿದು ಲಖಬೀರ್ ಸಿಂಗ್ ಹತ್ಯೆಯ ಘಟನೆ:
ದೆಹಲಿಯ ಹೊರಗಿನ ಸಿಂಗು ಗಡಿಯಲ್ಲಿ ಲಖಬೀರ್ ಸಿಂಗ್ ಎಂಬ 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯ ದೇಹವು ಪ್ರತಿಭಟನಾ ನಿರತ ರೈತರ ಮುಖ್ಯ ವೇದಿಕೆ ಬಳಿ ಬ್ಯಾರಿಕೇಡ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೈಗಳನ್ನು ಕತ್ತರಿಸಲಾಗಿದೆ. ಚೂಪಾದ ಆಯುಧದಿಂದ ವ್ಯಕ್ತಿಯ ದೇಹದ ಮೇಲೆ ದಾಳಿ ಮಾಡಿದ ಗುರುತುಗಳು ಪತ್ತೆಯಾಗಿದ್ದವು. ಈ ಘಟನೆ ಮುಂಜಾನೆ 3 ಗಂಟೆಗೆ ನಡೆದಿದ್ದು ಎಂದು ತಿಳಿದು ಬಂದಿತ್ತು.
ನೀಲಿ ನಿಲುವಂಗಿ, ಕೈ ಹಾಗೂ ಸೊಂಟದಲ್ಲಿ ಹರಿತವಾದ ಅಸ್ತ್ರ ಈ ನಿಹಾಂಗ್ಗಳು ಯಾರು?
ನಿಹಾಂಗ್ ಎಂದರೆ ಯಾರು?:
ನಿಹಾಂಗ್ ಎಂಬುದು ಸಿಖ್ ತೀವ್ರವಾದಿ ಹೋರಾಟಗಾರರ ಗುಂಪು. ನೀಲಿ ನಿಲುವಂಗಿ, ಉಕ್ಕಿನ ಕೋಟ್ ತೊಡುವ ಇವರು ಸದಾ ತಮ್ಮ ಬಳಿ ಕತ್ತಿ ಇಟ್ಟುಕೊಂಡಿರುತ್ತಾರೆ. ಅಲಂಕೃತ ಪೇಟಗಳನ್ನು ಧರಿಸಿರುತ್ತಾರೆ. ನಿಹಾಂಗ್ ಭಾರತದಲ್ಲಿ ಹುಟ್ಟಿಕೊಂಡ ಸಶಸ್ತ್ರ ಸಿಖ್ ಯೋಧರ ಪಡೆ. ಈ ನಿಹಾಂಗ್ಗಳು ಫತೇಹ್ ಸಿಂಗ್, ಗುರು ಹರಗೋಬಿಂದ್ ಆರಂಭಿಸಿದ "ಅಕಾಲಿ" ಯಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. "ಬೆಳಿಗ್ಗೆ 5 ಗಂಟೆ ಸುಮಾರಿಗೆ, ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ (ಕುಂಡ್ಲಿ, ಸೋನಿಪತ್) ಕೈಗಳು, ಕಾಲುಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ," ಎಂದು ಡಿಎಸ್ ಪಿ ಹನ್ಸ್ ರಾಜ್ ಹೇಳಿದ್ದರು.