ಕುಮಾರಸ್ವಾಮಿ, ಮಾಯಾವತಿ ಭೇಟಿ, ಸರ್ಕಾರದ ಕುರಿತು ಚರ್ಚೆ
ನವ ದೆಹಲಿ, ಮೇ 21: ಕರ್ನಾಟಕದ ಭಾವಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ದೆಹಲಿಯಲ್ಲಿ ಇಂದು ಭೇಟಿ ಆದರು.
ಜೆಡಿಎಸ್ ಪಕ್ಷವು ಬಿಎಸ್ಪಿ ಜೊತೆ ಚುನಾವಣಾ ಪೂರ್ವವೇ ಮೈತ್ರಿ ಮಾಡಿಕೊಂಡಿತ್ತು, ಮಾಯಾವತಿ ಅವರು ಚುನಾವಣೆ ಸಮಯದಲ್ಲಿ ಮೂರು ಬಾರಿ ರಾಜ್ಯಕ್ಕೆ ಬಂದು ಜೆಡಿಎಸ್ ಪರವಾಗಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು.
ನನ್ನ ನಿದ್ದೆಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ : ಕುಮಾರಸ್ವಾಮಿ
ಮಾಯಾವತಿ ಅವರನ್ನು ಭೇಟಿ ಆದ ಕುಮಾರಸ್ವಾಮಿ ಅವರು, ಸಚಿವ ಸಂಪುಟ ರಚನೆ, ಗೆದ್ದ ಏಕೈಕ ಬಿಎಸ್ಪಿ ಶಾಸಕನಿಗೆ ಕೊಡತಕ್ಕ ಸಚಿವ ಸ್ಥಾನ, ಸರ್ಕಾರ ರಚನೆ ಮತ್ತು ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇಂದೇ ಕುಮಾರಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಲಿದ್ದು, ಸಚಿವ ಸಂಪುಟ ರಚನೆ, ಸರ್ಕಾರದ ಕಾರ್ಯ, ಮೈತ್ರಿ ಸರ್ಕಾರದ ನಡವಳಿಕೆಗಳು ಇನ್ನಿತರ ಅತಿ ಮುಖ್ಯ ವಿಷಯಗಳನ್ನು ಚರ್ಚೆ ಮಾಡಲಿದ್ದಾರೆ.
ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಆಗುವ ಮುಂಚೆ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಗುಲಾಂ ನಬಿ ಆಜಾದ್ ಅವರು ರಾಹುಲ್ ಅವರನ್ನು ಭೇಟಿ ಆಗಿ ಕರ್ನಾಟಕದ ರಾಜಕೀಯ ಚಿತ್ರಣದ ಮಾಹತಿ ಒದಗಿಸಿದ್ದಾರೆ.