ಮಂಗಗಳಿಂದ ಸಾಮಾಜಿಕ ಅಂತರದ ಪಾಠ: ಕಿರಣ್ ರಿಜಿಜು ಟ್ವೀಟ್
ನವದೆಹಲಿ, ಏಪ್ರಿಲ್ 30: ಇಡೀ ವಿಶ್ವವೇ ಕೊರೊನಾ ವೈರಸ್ನ ಭೀತಿಯಲ್ಲಿದೆ. ಹೀಗಿರುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ.
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಹಂಚಿಕೊಂಡಿರುವ ಈ ಚಿತ್ರದಿಂದ ಪ್ರಾಣಿಗಳಿಗಿರುವ ಕನಿಷ್ಠ ಬುದ್ಧಿ ಮನುಷ್ಯನಿಗಿಲ್ಲ ಎಂಬುದು ಅರಿವಾಗಿ ಮುಜುಗರವನ್ನುಂಟು ಮಾಡುತ್ತದೆ.
ರಿಜುಜು ಚಿತ್ರದ ಜೊತೆಗೆ ಅಸ್ಸಾಂ -ಅರುಣಾಚಲಪ್ರದೇಶ ಪ್ರದೇಶ ಗಡಿಯಲ್ಲಿ ಅರುಣಾಚಲ ಪ್ರದೇಶದ ಭಾಲುಕ್ಪಾಂಗ್ ಬಳಿ ಕಂಡು ಬಂದ ಪರಿಪೂರ್ಣ ಸಾಮಾಜಿಕ ಅಂತರದ ಚಿತ್ರವಿದು. ನಾವು ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಾಮಾನ್ಯ ದೈನಂದಿನ ಜೀವನದಲ್ಲಿ ನಾವು ಪಾಲಿಸಬೇಕಾದ ಆನೇಕ ಪ್ರಮುಖ ಪಾಠಗಳನ್ನು ಪ್ರಾಣಿಗಳು ನಮಗೆ ಹೇಳಿಕೊಡುತ್ತವೆ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳ ಗಡಿ ಭಾಗದಲ್ಲಿರುವ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬರು ಮಂಗಗಳಿಗೆ ಕಲ್ಲಂಗಡಿ ಮತ್ತು ಬಾಳೆ ಹಣ್ಣು ಕೊಡುತ್ತಿದ್ದಾರೆ. ಈ ವೇಳೆ ಹಣ್ಣು ತಿನ್ನಲು ಮುಗಿಬೀಳದ ಮಂಗಗಳು ಪರಸ್ಪರ ಅಂತರವನ್ನು ಕಾಯ್ದುಕೊಂಡಿರುವ ಚಿತ್ರವನ್ನು ನೋಡಬಹುದಾಗಿದೆ. ಆರುಪ್ ಕಲಿಟಾ ಎಂಬವವರು ತೆಗೆದಿರುವ ಈ ಚಿತ್ರವನ್ನು ಕಿರಣ್ ರಿಜಿಜು ಟವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು 1.5 ಸಾವಿರ ಜನಕ್ಕಿಂತಲೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. 9 ಸಾವಿರಕ್ಕೂ ಹೆಚ್ಚು ಮಂದಿ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ 1718 ಮಂದಿಗೆ ಕೊರೊನಾ ಸೋಂಕು ಹರಡಿದೆ. 67 ಮಂದಿ ಮೃತಪಟ್ಟಿದ್ದಾರೆ, 33050 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.