ಕೆಂಪು ಕೋಟೆ ಮೇಲೆ ಹಾರಾಡಿದ ಧ್ವಜ ಯಾವುದು? ಕೇಂದ್ರದ ಆರೋಪ
ನವದೆಹಲಿ, ಜನವರಿ 26: ಪ್ರತ್ಯೇಕ ಖಲಿಸ್ತಾನಿ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದ ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್, ಪ್ರತಿಭಟನೆ ವೇಳೆ ದೆಹಲಿಯ ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದ್ದಕ್ಕೆ ಪಂಜಾಬ್ ರೈತನಿಗೆ ಬಹುಮಾನ ಘೋಷಿಸಿದ್ದು, ಇದರಲ್ಲಿ ಖಲಿಸ್ತಾನಿಗಳ ಕೈವಾಡವಿದೆ ಎಂದು ಕೇಂದ್ರ ಆರೋಪಿಸಿದೆ.
ಕೃಷಿ ಕಾಯ್ದೆಗಳ ವಿರುದ್ಧ ರೈತರು ಗಣರಾಜ್ಯೋತ್ಸವದ ದಿನದಂದು ಟ್ರ್ಯಾಕ್ಟರ್ ಮೆರವಣಿಗೆ ಹಮ್ಮಿಕೊಂಡಿದ್ದು, ನಗರಕ್ಕೆ ಪ್ರವೇಶ ಪಡೆಯುವ ಸಂದರ್ಭ ಗಲಭೆ ಏರ್ಪಟ್ಟಿದೆ. ಗಲಭೆಯೊಂದಿಗೇ ದೆಹಲಿಯ ಕೆಂಪು ಕೋಟೆ ತಲುಪಿದ ರೈತರು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದಾರೆ. ಆದರೆ ಆ ಧ್ವಜ ಭಾರತದ ತ್ರಿವರ್ಣ ಧ್ವಜವಾಗಿರದೇ ಬೇರೆ ಧ್ವಜವಾಗಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.
ರೈತರ ಪ್ರತಿಭಟನೆ: ದೆಹಲಿ, ಎನ್ಸಿಆರ್ನ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸ್ಥಗಿತ
ಪ್ರತಿಭಟನೆಯಲ್ಲಿ ಒಳನುಸುಳಲು ಪ್ರಯತ್ನಿಸಿದ್ದ ಎಸ್ ಎಫ್ ಜೆ, ಇದೀಗ ಕೆಂಪು ಕೋಟೆಯಲ್ಲಿ ಖಲಿಸ್ತಾನಿ ಧ್ವಜ ಹಾರಿಸಿದ್ದಕ್ಕೆ 2,50,000 ಡಾಲರ್ ಬಹುಮಾನ ಘೋಷಿಸಿರುವುದಾಗಿ ತಿಳಿದುಬಂದಿದೆ. ಈ ಅಂಶ ಮುಂದಿಟ್ಟುಕೊಂಡು ಕೇಂದ್ರ ಪ್ರತಿಭಟನೆಯಲ್ಲಿ ಪ್ರತ್ಯೇಕತಾವಾದಿಗಳ ಕೈವಾಡವನ್ನು ವ್ಯಕ್ತಪಡಿಸಿದೆ.
ದೆಹಲಿಯಲ್ಲಿ ರೈತರ ಪ್ರತಿಭಟನೆಯ ಈ ಹಿಂಸಾತ್ಮಕ ದೃಶ್ಯಗಳ ಹಿಂದೆ ಪಾಕಿಸ್ತಾನ ಮೂಲದ ಖಲಿಸ್ತಾನ ಸಂಘಟನೆಯ ಕೈವಾಡ ವ್ಯಕ್ತಗೊಂಡಿದೆ. ರೈತರ ಆಂದೋಲನವನ್ನು ಸಂಘಟನೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ.
ದೆಹಲಿಯಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಯುವ ಮುನ್ನಾ ದಿನ ಇಂಟೆಲಿಜೆನ್ಸ್ ಬ್ಯೂರೋ ಹೈ ಅಲರ್ಟ್ ಘೋಷಿಸಿತ್ತು. ಪಾಕಿಸ್ತಾನ ಮೂಲದ ಐಎಸ್ ಐ ಬೆಂಬಲಿತ ಸಂಘಟನೆ ಈ ಪ್ರತಿಭಟನೆಯ ಲಾಭ ಪಡೆದುಕೊಳ್ಳುವ ಸಾಧ್ಯತೆಯನ್ನು ಮುಂದಿಟ್ಟಿತ್ತು. ಈ ಹಿಂದೆಯೂ ಹಲವು ಬಾರಿ ಎಸ್ ಜೆಎಫ್ ಸಂಘಟನೆ ರೈತರ ಪ್ರತಿಭಟನೆಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿತ್ತು ಎಂದು ಆರೋಪಿಸಲಾಗಿದೆ.
ಜನವರಿ 13ರಿಂದ ಜನವರಿ 18ರವರೆಗೆ ಈ ಟ್ರ್ಯಾಕ್ಟರ್ ಜಾಥಾಗೆ ಅಡ್ಡಿಪಡಿಸುವ, ಈ ನೆಪದಲ್ಲಿ ಶಾಂತಿ ಕದಡುವ ಕುರಿತು ಪಾಕಿಸ್ತಾನ ಮೂಲದಿಂದ ಸುಮಾರು 300 ಟ್ವಿಟರ್ ಹ್ಯಾಂಡಲ್ ರಚಿಸಲಾಗಿದೆ. ಈ ಬಗ್ಗೆ ಹಲವು ಸಂಸ್ಥೆಗಳು ಮಾಹಿತಿ ನೀಡಿವೆ. ಈ ಪರಿಸ್ಥಿತಿಯೇ ನಮಗೆ ಸವಾಲಾಗಿತ್ತು. ಆದ್ದರಿಂದ ಗಣರಾಜ್ಯೋತ್ಸವದ ಪರೇಡ್ ನಂತರ ಬಿಗಿ ಭದ್ರತೆ ಏರ್ಪಡಿಸಿದ್ದಾಗಿ ಪೊಲೀಸ್ ವಿಶೇಷ ಆಯುಕ್ತ ದೀಪೇಂದರ್ ಪಾಥಕ್ ತಿಳಿಸಿದ್ದಾರೆ.