ದೆಹಲಿ ಸಿಎಂ ಸ್ಥಾನಕ್ಕೆ 7 ಬಿಜೆಪಿ ಮುಖಂಡರನ್ನು ಆರಿಸಿದ ಕೇಜ್ರಿವಾಲ್
ನವದೆಹಲಿ, ಜನವರಿ 08: ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಬಿಸಿ ನಿಧಾನಗತಿಯಲ್ಲಿ ಆವರಿಸುತ್ತಿದೆ. ದಶಕಗಳ ನಂತರ ಅಧಿಕಾರಕ್ಕೇರಲು ಬಿಜೆಪಿ ಹವಣಿಸುತ್ತಿದೆ. ಮತ್ತೊಮ್ಮೆ ಅಧಿಕಾರ ಗದ್ದುಗೆಗೇರಲು ಕೇಜ್ರಿವಾಲ್ ತಂತ್ರ ಹೂಡುತ್ತಿದ್ದಾರೆ.
ಈ ನಡುವೆ ಬಿಜೆಪಿ ತನ್ನ ಅಭ್ಯರ್ಥಿಗಳು, ಸಿಎಂ ಅಭ್ಯರ್ಥಿ ಯಾರು ಎಂಬುದನ್ನು ಇಂದು ಘೋಷಿಸುವ ಸಾಧ್ಯತೆಯಿದೆ. ಈ ಕುರಿತಂತೆ ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪ್ರತಿಕ್ರಿಯಿಸಿದ್ದಾರೆ. ದೆಹಲಿ ಸಿಎಂ ಸ್ಥಾನಕ್ಕೇರಲು ಸೂಕ್ತವಾದ 7 ಮಂದಿ ಬಿಜೆಪಿ ಮುಖಂಡರನ್ನು ಹೆಸರಿಸಿದ್ದಾರೆ.
ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಪರಿವೀಕ್ಷಕರು ದೆಹಲಿಯಲ್ಲಿದ್ದು, 14 ಜಿಲ್ಲಾ ಘಟಕಗಳಿಂದ ಮಾಹಿತಿ ಪಡೆದು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸುತ್ತಿದ್ದಾರೆ. ಐದೈದು ವಿಧಾನಸಭಾ ವಿಭಾಗಗಳನ್ನು ಆಯ್ದುಕೊಂಡು ಸೂಕ್ತ ಅಭ್ಯರ್ಥಿಗಳನ್ನು 70 ಕ್ಷೇತ್ರಗಳಲ್ಲಿ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯಿಂದ ಭೋಜ್ ಪುರಿ ನಟ, ದೆಹಲಿ ಎನ್ ಸಿ ಆರ್ ಪ್ರದೇಶಕ್ಕೆ ಸೇರುವ ಪೂರ್ವಾಂಚಲದ ಮನೋಜ್ ತಿವಾರಿ ಹೆಸರು ಬಲವಾಗಿ ಕೇಳಿ ಬಂದಿದೆ. ದೆಹಲಿ ಬಿಜೆಪಿ ಅಧ್ಯಕ್ಷರಾಗಿ ಕಳೆದ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ
ಸುಮಾರು 13000 ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾತನಾಡಿ, ಈ ಬಾರಿ ಸ್ವಯಂ ನಾಮಾಂಕಿತ ಮಾಡಿಕೊಳ್ಳುವ ಅವಕಾಶ ಅಭ್ಯರ್ಥಿಗಳಿಗೆ ಸಿಗಲಿದೆ ಎಂದಿದ್ದರು. ಸುಮಾರು 45 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ವ್ಯಕ್ತಪಡಿಸಿದ್ದಾರೆ.
2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆ
2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದುಕೊಂಡಿತ್ತು. ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದರೆ 2017ರಲ್ಲಿ ಮುನ್ಸಿಪಾಲ್ ಕಾರ್ಪೊರೇಷನ್ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಲಯಕ್ಕೆ ಮರಳಿದೆ.
ಫೆಬ್ರವರಿ 08ರಂದು ಮತದಾನ
ದೆಹಲಿಯಲ್ಲಿ ಫೆಬ್ರವರಿ 08ರಂದು ಮತದಾನ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಹೊರಬರಲಿದೆ. ಜನವರಿ 14ರಿಂದ ಚುನಾವಣಾ ಆಯೋಗ ಅಧಿಸೂಚನೆ ಜಾರಿಯಾಗಲಿದೆ. ಜನವರಿ 24ರೊಳಗೆ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆಯಬಹುದು. ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷ ಈಗಾಗಲೇ ಚುನಾವಣೆ ತಯಾರಿ ನಡೆಸಿವೆ. ಕಾಂಗ್ರೆಸ್ ಹಾಗೂ ಎಎಪಿ ನಡುವೆ ಬಿರುಕು ಮೂಡಿದ್ದು, ಮತ್ತೊಮ್ಮೆ ಚುನಾವಣಾ ಮೈತ್ರಿ ಸಾಧ್ಯತೆ ಬಹುತೇಕ ಅಸಾಧ್ಯ ಎಂಬ ಪರಿಸ್ಥಿತಿ ಮೂಡಿದೆ.
ಗೌತಮ್ ಗಂಭೀರ್ ಸಿಎಂ ಸ್ಥಾನದ ಅಭ್ಯರ್ಥಿ?
ಈ ನಡುವೆ ಸಿಎಂ ಕೇಜ್ರಿವಾಲ್ ಅವರು ಬಿಜೆಪಿ ಸಂಭಾವ್ಯ ಪಟ್ಟಿ ಹೇಗಿರಬಹುದು ಎಂದು ಲೇವಡಿ ಮಾಡಿ 7 ಜನರನ್ನು ಹೆಸರಿಸಿದ್ದಾರೆ. ಗೌತಮ್ ಗಂಭೀರ್, ಮನೋಜ್ ತಿವಾರಿ, ವಿಜಯ್ ಗೋಯೆಲ್, ಹರ್ದೀಪ್ ಸಿಂಗ್ ಪುರಿ, ಹರ್ಷ್ ವರ್ಧನ್, ವಿಜೇಂದ್ರ ಗುಪ್ತ ಹಾಗೂ ಪರ್ವೇಶ್ ಸಿಂಗ್ ಅವರು ದೆಹೆಲಿ ಸಿಎಂ ಆಗಲು ಸೂಕ್ತ ಎಂದಿದ್ದಾರೆ.