ವಿಡಿಯೋ: ಹನುಮ ದೇವರನ್ನು ಅಶುದ್ಧಗೊಳಿಸಿದರೇ ಕೇಜ್ರಿವಾಲ್?
ನವದೆಹಲಿ, ಫೆಬ್ರವರಿ 08: ದೆಹಲಿ ಚುನಾವಣೆಯಲ್ಲಿ ಪಾಕಿಸ್ತಾನ, ಬಿರಿಯಾನಿ ಭಾರಿ ಸದ್ದು ಮಾಡುತ್ತಿವೆ. ಈ ಪಟ್ಟಿಗೆ ಈಗ ದೇವರು ಮತ್ತು ಚಪ್ಪಲಿಯೂ ಜೊತೆ ಸೇರಿದೆ.
ಮತದಾನದ ದಿನವಾದ ಇಂದು ದೆಹಲಿ ಬಿಜೆಪಿಯ ಅಧ್ಯಕ್ಷ ಮನೋಜ್ ತಿವಾರಿ, 'ಕೇಜ್ರಿವಾಲ್ ದೇವರನ್ನು ಅಪವಿತ್ರ ಮಾಡಿಬಿಟ್ಟಿದ್ದಾರೆಂದು ಆರೋಪವನ್ನು ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮನೋಜ್ ತಿವಾರಿ, 'ಹನುಮ ದೇವಾಲಯಕ್ಕೆ ಬಂದಿದ್ದ ಕೇಜ್ರಿವಾಲ್ ಚಪ್ಪಲಿ ಮುಟ್ಟಿದ ಕೈಯಲ್ಲೇ ಹಾರ ಹಿಡಿದುಕೊಂಡು ಅದನ್ನೇ ಹನುಮ ದೇವರಿಗೆ ತೊಡಿಸಿದ್ದಾರೆ' ಎಂದಿದ್ದಾರೆ.
देखिये, चुनावी हनुमानभक्त केजरीवाल का सच...
— Manoj Tiwari (@ManojTiwariMP) February 6, 2020
जिन हाथों से जूते उतारे, उन्हीं हाथों से फेंकी बाबा पर फूलों की माला! pic.twitter.com/R1NL6X8aoM
'ಕೇಜ್ರಿವಾಲ್ ಏನು ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಬಂದಿದ್ದರೋ ಇಲ್ಲವೋ ದೇವರನ್ನು ಅಶುದ್ಧಗೊಳಿಸಲು ಬಂದಿದ್ದರೋ?' ಎಂದು ತಿವಾರಿ ಪ್ರಶ್ನೆ ಮಾಡಿದ್ದಾರೆ.
'ನಕಲಿ ಭಕ್ತರು ದೇವಸ್ಥಾನಕ್ಕೆ ಬಂದರೆ ಹೀಗೆಯೇ ಆಗುತ್ತದೆ' ಎಂದ ಅವರು, 'ನಾನು ಪೂಜಾರಿಯವರಿಗೆ ಈ ವಿಷಯವನ್ನು ಹೇಳಿದೆ. ಅವರು ಹಲವು ಭಾರಿ ಹನುಮಂತ ಮೂರ್ತಿಯನ್ನು ತೊಳೆದು ಶುದ್ಧಗೊಳಿಸಿದರು' ಎಂದಿದ್ದಾರೆ.
ನಡೆದಿದ್ದಿಷ್ಟು: ಇಂದು ಬೆಳಿಗ್ಗೆ ಅರವಿಂದ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಹನುಮಂತನ ಗುಡಿಗೆ ತೆರಳಿದ್ದರು. ಬೆಲ್ಟ್ ಮಾದರಿಯ ಚಪ್ಪಲಿ ಧರಿಸಿದ್ದ ಅವರು ಕೈ ಸಹಾಯದಿಂದ ಚಪ್ಪಲಿಯನ್ನು ಬಿಟ್ಟು ದೇವಸ್ಥಾನದ ಒಳಗೆ ಹೋದರು. ನಂತರ ಪೂಜಾರಿ ಹಾರವೊಂದನ್ನು ಕೇಜ್ರಿವಾಲ್ ಕೈಗೆ ಕೊಟ್ಟರು. ಆ ಹಾರವನ್ನು ಕೇಜ್ರಿವಾಲ್ ಅವರು ದೇವರಿಗೆ ಹಾಕಿದರು.
ಘಟನೆಯ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿಯೂ ಹಂಚಿಕೊಂಡಿರುವ ತಿವಾರಿ, 'ನೋಡಿರಿ, ನೋಡಿರಿ 'ಚುನಾವಣೆ ಕಾಲದ ಭಕ್ತನ' ನಿಜವಾದ ಮುಖ. ಯಾವ ಕೈಯಿಂದ ಚಪ್ಪಲಿ ಮುಟ್ಟಿದರೋ ಅದೇ ಕೈಯಿಂದ ದೇವರ ಮೇಲೆ ಹಾರ ಎಸೆದಿದ್ದಾರೆ' ಎಂದು ಬರೆದುಕೊಂಡಿದ್ದಾರೆ.