ಕುತೂಹಲ ಕೆರಳಿಸಿದ ಮೋದಿ-ಕೆಸಿಆರ್ ಭೇಟಿ, ಉಭಯ ನಾಯಕರು ಚರ್ಚಿಸಿದ್ದೇನು?
Recommended Video
ನವದೆಹಲಿ, ಡಿಸೆಂಬರ್ 27: ಸಂಯುಕ್ತ ಕೂಟ ರಚನೆಯ ಮುಂದಾಳತ್ವ ವಹಿಸಿ, ಘಟಾನುಘಟಿ ನಾಯಕರನ್ನು ಭೇಟಿಯಾಗುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಪರೋಕ್ಷವಾಗಿ ಎನ್ ಡಿಎ ಸರ್ಕಾರಕ್ಕೇ ಬೆಂಬಲ ನೀಡಲಿದ್ದಾರಾ?
ಬುಧವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಕೆಸಿಆರ್ ಸುಮಾರು 1 ಗಂಟೆ 15 ನಿಮಿಷಗಳ ಕಾಲ ಮೋದಿಯವರೊಂದಿಗೆ ಮಹತ್ವದ ಚರ್ಚೆ ನಡೆಸಿದರು. ಸಂಯುಕ್ತ ಕೂಟ ರಚನೆಯ ಸುದ್ದಿ ಸದ್ದು ಮಾಡುತ್ತಿರುವ ಹೊತ್ತಲ್ಲಿ, ಅದರ ನೇತೃತ್ವ ಹೊತ್ತ ನಾಯಕ ಕೆಸಿಆರ್ ಮೋದಿ ಅವರನ್ನು ಭೇಟಿಯಾಗಿದ್ದು ಕುತೂಹಲ ಕೆರಳಿಸಿದೆ.
ತೆಲಂಗಾಣ ಸೆಂಟಿಮೆಂಟ್ : ನಾಯ್ಡು ಜುಟ್ಟು ನರೇಂದ್ರ ಮೋದಿ ಕೈಯಲ್ಲಿ!
ಕೆಲವು ಮೂಲಗಳ ಪ್ರಕಾರ ಕೆಸಿಆರ್ ಮತ್ತು ಮೋದಿಯವರ ನಡುವೆ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಸಂಬಂಧಿಸಿದ ಮಾತುಕತೆಯೊಂದಿಗೆ, ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮಹತ್ವದ ಚರ್ಚೆಯೂ ನಡೆದಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು, ಪ್ರಾದೇಶಿಕ ಪಕ್ಷಗಳೇ ಕೂಡಿ ರಚಿಸಲು ಮುಂದಾಗಿರುವ ಸಂಯುಕ್ತ ಕೂಟ ಚುನಾವಣೆಯ ನಂತರ ಎನ್ ಡಿಎ ಬೆನ್ನಿಗೆ ನಿಲ್ಲಲಿದೆಯಾ ಎಂಬ ಅನುಮಾನ ಉಭಯ ನಾಯಕರ ಭೇಟಿಯ ನಂತರ ಎದ್ದಿದೆ.
ಮೋದಿಗೆ ಟಿಪ್ಸ್ ನೀಡಿದರೇ ಕೆಸಿಆರ್?
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಅಮೋಘ ಜಯ ಸಾಧಿಸಿದ ಕೆಸಿಆರ್, ತಮ್ಮ ಗೆಲುವಿಗೆ ಕಾರಣವೇನು ಎಂಬ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಿಸಿದ್ದಾರೆ. ತಾವು ಯಾವೆಲ್ಲ ಸ್ಟ್ರಾಟಜಿ ಬಳಸಿ ಗೆದ್ದಿದ್ದಾಗಿಯೂ ಮೋದಿಯವರಿಗೆ ಟಿಪ್ಸ್ ನೀಡಿದ್ದು, ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯೂ ಈ ತಂತ್ರಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಟಿಆರ್ ಎಸ್-ಬಿಜೆಪಿ ಮೈತ್ರಿ ಬಗ್ಗೆ...
2019 ರ ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಬಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಟಿಆರ್ ಎಸ್ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅದು ಚುನಾವಣೆಯ ಪೂರ್ವದ ಮಾತಾಯ್ತು. ಆದರೆ ಚುನಾವಣೋತ್ತರ ಮೈತ್ರಿಯ ಆಯ್ಕೆಯನ್ನು ಟಿಆರ್ ಎಸ್ ಕಾಯ್ದಿರಿಸಿಕೊಂಡಿದೆ! ಅಲ್ಲದೆ, ವಿಧಾನಸಭೆ ಚುನಾವಣೆಯ ಸಮಯದಲ್ಲೂ ಟಿಆರ್ ಎಸ್ ಮತ್ತು ಬಿಜೆಪಿ ಹೆಚ್ಚು ಕೆಸರೆರಚಾಟ ಮಾಡಿಕೊಳ್ಳದೆ ಒಳಗೊಳಗೇ ಬೆಂಬಲ ನೀಡಿದಂತೆ, ಲೋಕಸಭಾ ಚುನಾವಣೆಯಲ್ಲೂ ಇದೇ ಒಪ್ಪಂದದ ಮೇಲೆ ಕೆಲಸ ಮಾಡುವ ಸಾಧ್ಯತೆ ಇದೆ.
ಮೋದಿ, ಮಾಯಾ, ಅಖಿಲೇಶ್ ರನ್ನು ಭೇಟಿಯಾಗಲಿರುವ ಕೆಸಿಆರ್
ಮೋದಿ ಮುಂದೆ ಬೇಡಿಕೆಯ ಮಹಾಪೂರ
ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಕೆಸಿಆರ್ ಅವರು ಮೋದಿಯವರ ಮುಂಡೆ ಬೇಡಿಕೆಗಳ ಮಹಾಪೂರವನ್ನೇ ಸುರಿಸಿದ್ದಾರೆ! ತೆಲಂಗಾಣಕ್ಕೆ ಪ್ರತ್ಯೇಕ ಹೈಕೋರ್ಟ್, ಕರೀಂನಗರದಲ್ಲಿ ಐಐಟಿ ಸ್ಥಾಪನೆ, ಹತ್ತು ಹಿಂದುಳಿದ ಜಿಲ್ಲೆಗಳಿಗೆ ಅನುದಾನ ಸೇರಿದಂತೆ ಹತ್ತು ಹಲವು ಬೇಡಿಕೆಗಳ ಪಟ್ಟಿಯನ್ನೇ ಹಿಡಿದು ಪ್ರಧಾನಿ ಕಾರ್ಯಾಲಯವನ್ನು ಎಡತಾಕಿದ್ದಾರೆ. ಚುನಾವಣೆ ಕಣ್ಣೆದುರಿರುವಾಗ ಇಲ್ಲ ಎನ್ನುವುದಕ್ಕೂ ಆಗದ ಸಂದಿಗ್ಧದಲ್ಲಿ ಮೋದಿ ಸಿಕ್ಕಿಕೊಂಡಿದ್ದಾರೆ!
ಚಂದ್ರಬಾಬು ನಾಯ್ಡು ಬಗ್ಗೆಯೂ ಚರ್ಚೆ
ಕೆಲವು ಮೂಲಗಳ ಪ್ರಕಾರ ಉಭಯ ನಾಯಕರು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯ ಹೊತ್ತಲ್ಲೇ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯೂ ನಡೆಯಲಿರುವ ಕಾರಣ ವೈಎಸ್ ಆರ್ ಕಾಂಗ್ರೆಸ್ ಮುಖಂಡ ವೈ ಎಸ್ ಜಗನ್ ಮೋಹನ್ ರೆಡ್ಡಿ ಮತ್ತು ನಾಯ್ಡು ಇಬ್ಬರ ಬಗ್ಗೆಯೂ ಮಾತುಕತೆ ನಡೆದಿದೆ. ಅವರ ಕಾರ್ಯತಂತ್ರಗಳ ಬಗ್ಗೆಯೂ ಚರ್ಚೆ ನಡೆದಿದೆ.