"ದೇಶದ ಕಿರೀಟದಂತಿರುವ ಕಾಶ್ಮೀರ ಭಾರತದಲ್ಲೇ ಇಲ್ಲ"!
ಶ್ರೀನಗರ್, ಫೆಬ್ರವರಿ.07: ಭಾರತದ ಕಿರೀಟದಂತೆ ಹೊಳೆಯುವ ಜಮ್ಮು-ಕಾಶ್ಮೀರ ಅಸಲಿಗೆ ಭಾರತ ಜೊತೆಗಿಲ್ಲ. ನಕ್ಷೆಯಲ್ಲಿ ದೇಶದ ಜೊತೆಗೆ ಗುರುತಿಸಿಕೊಂಡಿರುವ ಕಣಿವೆ ರಾಜ್ಯ ಮಾನಸಿಕವಾಗಿ ಭಾರತೀಯರ ಜೊತೆಗಿಲ್ಲ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಕಿಡಿ ಕಾರಿದ್ದಾರೆ.
ಜಮ್ಮು-ಕಾಶ್ಮೀರದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಉಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮೇಲೆ ಕೇಂದ್ರ ಸರ್ಕಾರವು ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು ಹೇರಿದ್ದಕ್ಕೆ ಅಧೀರ್ ರಂಜನ್ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದ ಮುಖಂಡರಿಗೆ ಮತ್ತೆ ಸಂಕಷ್ಟ: ಒಮರ್ ಅಬ್ದುಲ್ಲಾ, ಮುಫ್ತಿ ಮೇಲೆ ಪಿಎಸ್ಎ ಕಾಯ್ದೆ ಹೇರಿಕೆ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಗೊಳಿಸಿದ ನಂತರದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಕೇಂದ್ರ ಸರ್ಕಾರವು ಗೃಹ ಬಂಧನದಲ್ಲಿ ಇರಿಸಿತ್ತು. ಇನ್ನೇನು, ಗುರುವಾರ ಇಬ್ಬರಿಗೂ ಬಿಡುಗಡೆ ಭಾಗ್ಯ ಸಿಗುತ್ತದೆ ಎನ್ನುವಷ್ಟರಷ್ಟೇ ಉಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ)ಯನ್ನು ಹೇರಲಾಗಿದೆ.
ಕಾಶ್ಮೀರ ಭಾರತದ ಜೊತೆಗಿಲ್ಲ ಎಂದ ಚೌಧರಿ
ಕೇಂದ್ರ ಸರ್ಕಾರದ ವಿರುದ್ಧ ಲೋಕಸಭಾ ಸದಸ್ಯ ಹಾಗೂ ಕಾಂಗ್ರೆಸ್ ಅಧೀರ್ ರಂಜನ್ ಚೌಧರಿ ಹರಿಹಾಯ್ದಿದ್ದಾರೆ. ಜಮ್ಮು-ಕಾಶ್ಮೀರವು ಪ್ರಾದೇಶಿಕವಾಗಿ ಭಾರತದಲ್ಲೇ ಇರಬಹುದು ಆದರೆ ಭಾವನಾತ್ಮಕವಾಗಿ ಕಾಶ್ಮೀರವು ಭಾರತದಲ್ಲೇ ಉಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಕ್ರಮಕ್ಕೆ ರಂಜನ್ ಚೌಧರಿ ಕೆಂಡ
ಕಣಿವೆ ರಾಜ್ಯಕ್ಕೆ 370ರ ಅಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ತೀರಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ಅಧೀರ್ ರಂಜನ್ ಚೌಧರಿ ಕಿಡಿ ಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಲ್ಲಿ ಇಂಥ ಆಡಳಿತ ನೀಡುವುದೇ ಎಂದು ಪ್ರಶ್ನೆ ಮಾಡಿದ್ದಾರೆ.
ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ವಿರುದ್ಧ ಪಿಎಸ್ಎ ಕಾಯ್ದೆ
ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತೆರವುಗೊಳಿಸುತ್ತಿದ್ದಂತೆ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಉಮರ್ ಅಬ್ದುಲ್ಲಾ, ಪೀಪಲ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಇನ್ನೇನು, ಫೆಬ್ರವರಿ.06ರಂದು ಇಬ್ಬರನ್ನು ಗೃಹ ಬಂಧನದಿಂದ ಮುಕ್ತಗೊಳಿಸಬೇಕು ಎನ್ನುವಷ್ಟರಷ್ಟೇ ಕೇಂದ್ರ ಸರ್ಕಾರವು ಇಬ್ಬರ ಮೇಲೆ ಸಾರ್ವಜನಿಕ ಹಿತಾಸಕ್ತಿ ಕಾಯ್ದೆಯನ್ನು ಹೇರಿದೆ. ಈ ಬಗ್ಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದರು.
ಸಾರ್ವಜನಿಕ ಹಿತಾಸಕ್ತಿ ಕಾಯ್ದೆ ಎಂದರೇನು?
ಕಾಶ್ಮೀರದಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕ ಹಿತಾಸಕ್ತಿ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆಯ ಅಡಿಯಲ್ಲಿ ಬಂಧಿಸಿದ ಆರೋಪಿಗಳನ್ನು ಯಾವುದೇ ವಿಚಾರಣೆ ಇಲ್ಲದೇ ಕನಿಷ್ಠ ಆರು ತಿಂಗಳಿನಿಂದ 2 ವರ್ಷಗಳವರೆಗೂ ಬಂಧನದಲ್ಲಿ ಇರಿಸಲು ಅವಕಾಶ ಇರುತ್ತದೆ.