ಸೇನೆ ವಿರುದ್ಧ ಸುಳ್ಳು ಆರೋಪ: ಶೆಹ್ಲಾಗೆ ಕಾಂಗ್ರೆಸ್ ನಾಯಕ ಸಲ್ಮಾನ್ ನಿಜಾಮಿ ತರಾಟೆ
ನವದೆಹಲಿ, ಆಗಸ್ಟ್ 20: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯು ನಾಗರಿಕರನ್ನು ಎಳೆದೊಯ್ದು ಹಿಂದೆ ನೀಡುವ ಮೂಲಕ ದೌರ್ಜನ್ಯಗಳನ್ನು ಎಸಗುತ್ತಿದೆ ಎಂಬ ಆರೋಪ ಮಾಡಿದ್ದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ನಾಯಕಿ ಶೆಹ್ಲಾ ರಶೀದ್ ಅವರಿಗೆ ಕಾಶ್ಮೀರದ ಕಾಂಗ್ರೆಸ್ ನಾಯಕ ಸಲ್ಮಾನ್ ನಿಜಾಮಿ ತಪರಾಕಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯ ಚಟುವಟಿಕೆಗಳ ಕುರಿತು ಸುಳ್ಳು ಸುದ್ದಿಗಳನ್ನು ಶೆಹ್ಲಾ ಹಬ್ಬಿಸುತ್ತಿದ್ದಾರೆ ಎಂದು ಸಲ್ಮಾನ್ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಗರಿಕರ ಮೇಲೆ ದೌರ್ಜನ್ಯ: ಶೆಹ್ಲಾ ರಶೀದ್ ಆರೋಪ ನಿರಾಕರಿಸಿದ ಸೇನೆ
ಭಾನುವಾರ ಸರಣಿ ಟ್ವೀಟ್ಗಳನ್ನು ಮಾಡಿದ್ದ ಶೆಹ್ಲಾ, ಸೇನೆಯು ಕಾಶ್ಮೀರದಲ್ಲಿನ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಮನೆಗಳಿಗೆ ನುಗ್ಗಿ ದಾಂದಲೆ ಎಬ್ಬಿಸುತ್ತಿದ್ದಾರೆ. ರೇಷನ್ಗಳನ್ನು ನೆಲಕ್ಕೆ ಸುರಿಯುತ್ತಿದ್ದಾರೆ. ಯುವಕರನ್ನು ಎಳೆದೊಯ್ದು ಚಿತ್ರಹಿಂಸೆ ನೀಡುತ್ತಿದ್ದಾರೆ. ಕಾಶ್ಮೀರದಲ್ಲಿ ಯಾವ ಸಂಪರ್ಕವೂ ಇಲ್ಲ ಎಂದು ಆರೋಪಿಸಿದ್ದರು. ತಮಗೆ ವಿವಿಧ ಮೂಲಗಳಿಂದ ಈ ಮಾಹಿತಿ ದೊರಕಿದೆ ಎಂದು ಹೇಳಿಕೊಂಡಿದ್ದರು.
ಈ ಆರೋಪವನ್ನು ಭಾರತೀಯ ಸೇನೆ ತಳ್ಳಿಹಾಕಿತ್ತು. ಶೆಹ್ಲಾ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಅದು ಆರೋಪಿಸಿತ್ತು.
ಕಾಶ್ಮೀರದಲ್ಲಿ ಭಾರತೀಯ ಸೇನೆಯ ಕ್ರಮಗಳನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ನಿಜಾಮಿ, 'ಕೆಲವು ಕಲ್ಲು ತೂರಾಟ ಮಾಡುವವರು ಹಾಗೂ ಪ್ರತ್ಯೇಕತಾವಾದಿಗಳನ್ನು ಬಂಧಿಸಲಾಗಿದೆ. ಹಿಂಸಾಚಾರದಂತ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಈ ರೀತಿಯ ಕ್ರಮಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ. ಜನರಲ್ಲಿ ಭಯ ಹುಟ್ಟಿಸುವ ಸಲುವಾಗಿ ಭಾರತೀಯ ಸೇನೆಯ ಸಿಬ್ಬಂದಿ ಯುವಕರನ್ನು ಹಿಂಸಿಸುತ್ತಿದ್ದಾರೆ ಎನ್ನುವಂತಹ ಯಾವ ಘಟನೆಗಳೂ ನಡೆದಿಲ್ಲ ಎಂದು ಸ್ಥಳೀಯರು ಮತ್ತು ಪತ್ರಕರ್ತರು ನನಗೆ ಖಚಿತಪಡಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ದಯವಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ' ಎಂದು ಶೆಹ್ಲಾ ವಿರುದ್ಧ ಕಿಡಿಕಾರಿದ್ದಾರೆ.
ಯೋಧರ ಬಗ್ಗೆ ಸುಳ್ಳು ಆರೋಪ: ಶೆಹ್ಲಾ ರಶೀದ್ ವಿರುದ್ಧ ಕ್ರಿಮಿನಲ್ ಕೇಸ್
ಶೆಹ್ಲಾ ಅವರು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ಎಂದು ಆರೋಪಿಸಿ ವಕೀಲ ಅಲಾಖ್ ಅಲೋಕ್ ಶ್ರೀವಾಸ್ತವ ಅವರು ಸುಪ್ರೀಂಕೋರ್ಟ್ನಲ್ಲಿ ಕ್ರಿಮಿನಲ್ ದೂರು ಸಲ್ಲಿಸಿದ್ದಾರೆ.