ಕರ್ತಾರ್ಪುರ ಯಾತ್ರಾರ್ಥಿಗಳ ಪಟ್ಟಿಯಲ್ಲಿ ಮನಮೋಹನ್ ಸಿಂಗ್ ಹೆಸರು
ಬೆಂಗಳೂರು,ಅಕ್ಟೋಬರ್ 30: ಕರ್ತಾರ್ಪುರ ಕಾರಿಡಾರ್ ಮೂಲಕ ಪಾಕಿಸ್ತಾನದ ಗುರುದ್ವಾರ ಸರ್ಬಾರ್ ಸಾಹಿಬ್ಗೆ ತೆರಳಲಿರುವ ಯಾತ್ರಾರ್ಥಿಗಳ ಪೈಕಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಒಬ್ಬರು.
ಈ ಪಟ್ಟಿಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗುವ ಹಲವಾರು ಪ್ರಮುಖ ನಾಯಕರ ಹೆಸರುಗಳೂ ಇವೆ. ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಹರ್ಸಿಮ್ರತ್ ಕೌರ್ ಬಾದಲ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಮತ್ತು ಇತರ ಪಂಜಾಬ್ ಸಂಸದರು-ಶಾಸಕರು ಭಾಗವಹಿಸಲಿದ್ದಾರೆ.
ಕರ್ತಾರ್ಪುರ ಯಾತ್ರಿಕರ ಮೇಲೆ ದುಬಾರಿ ಶುಲ್ಕ, ಪಾಕ್ ವಿರುದ್ಧ ಆಕ್ರೋಶ
ದೀರ್ಘಾವಧಿಯ ಬೇಡಿಕೆಯಾಗಿದ್ದ ಕರ್ತಾರ್ಪುರ ಕಾರಿಡಾರ್ ಅನ್ನು ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 24 ರಂದು ಎರಡೂ ದೇಶಗಳ ಯಾತ್ರಾರ್ಥಿಗಳಿಗಾಗಿ ಕಾರ್ಯಗತಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದವು.
ಕಾರಿಡಾರ್ ಕರ್ತಾರ್ಪುರದ ದರ್ಬಾರ್ ಸಾಹಿಬ್ ಅನ್ನು ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇವಾಲಯದೊಂದಿಗೆ ಸಂಪರ್ಕಿಸುತ್ತದೆ. ಕರ್ತಾರ್ಪುರ್ ಸಾಹಿಬ್ ಗುರುದ್ವಾರವನ್ನು 1522 ರಲ್ಲಿ ಸಿಖ್ ಸಂಸ್ಥಾಪಕ ಗುರುನಾನಕ್ ದೇವ್ ಸ್ಥಾಪಿಸಿದರು.
ಗೃಹ ಸಚಿವಾಲಯವು ಸಹಿ ಮಾಡಿದ ಒಪ್ಪಂದದ ಪ್ರಕಾರ, ಎಲ್ಲಾ ನಂಬಿಕೆಯ ಭಾರತೀಯ ವ್ಯಕ್ತಿಗಳು ಈ ಸ್ಥಳಕ್ಕೆ ಭೇಟಿ ನೀಡಬಹುದು ಮತ್ತು ಪ್ರಯಾಣವು ವೀಸಾ ಮುಕ್ತವಾಗಿರುತ್ತದೆ. ಆದಾಗ್ಯೂ, ಒಪ್ಪಂದವು 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ ಮತ್ತು ಅದನ್ನು ಪರಸ್ಪರ ಒಪ್ಪಿಗೆಯಿಂದ ವಿಸ್ತರಿಸಬಹುದು.
ಕರ್ತಾರ್ಪುರ ಕಾರಿಡಾರ್ ಒಪ್ಪಂದವನ್ನು ಉಭಯ ದೇಶಗಳು ಒಂದು ತಿಂಗಳ ನೋಟಿಸ್ ನೀಡುವ ಮೂಲಕ ಕೊನೆಗೊಳಿಸಬಹುದು. ಒಪ್ಪಂದದ ನಿರಂತರ ಉಲ್ಲಂಘನೆ ಸಂಭವಿಸಿದಲ್ಲಿ ಕಾರಿಡಾರ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬಹುದು. ಯಾವುದೇ ರೀತಿಯ ಸಮಸ್ಯೆಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹರಿಸಲಾಗುತ್ತದೆ.