ನವದೆಹಲಿ: ಮುಂಗಾರು ಅಧಿವೇಶನದ ಮೊದಲ ದಿನ ಕನ್ನಡಿಗರ ಮಿಂಚು!
ನವದೆಹಲಿ, ಜೂನ್ 17: ಹದಿನೇಳನೇ ಲೋಕಸಭೆಯ ಮೊದಲ ಲೋಕಸಭಾ ಅಧಿವೇಶನ ಇಂದು ಆರಂಭವಾಗಿದ್ದು, ಹೊಸ ಸಂಸದರೆಲ್ಲರೂ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಮೊದಲ ದಿನದ ಅಧಿವೇಶನದಲ್ಲಿ ಕರ್ನಾಟಕದ ಸಂಸದರು ಪ್ರಮುಖ ಆಕರ್ಷಣೆಯಾಗಿ ಕಂಡು ಬಂದರು.
ರಾಜ್ಯದ 28 ಸಂಸದರು ಲೋಕಸಭೆ ಪ್ರವೇಶಿಸಿದ್ದು, 25 ಮಂದಿ ಬಿಜೆಪಿಯವರೇ ಇದ್ದಾರೆ, ಇಂದು ಎಲ್ಲ ಸಂಸದರು ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದ ಸಂಸದರು ಬಹುತೇಕ ಎಲ್ಲರೂ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿ ಗಮನಸೆಳೆದರು.
ಅನಂತ್ ಕುಮಾರ್ ಕಚೇರಿ ಬೇಡ ಎಂದ ಸಂಸದ ತೇಜಸ್ವಿ ಸೂರ್ಯ
ಮೊದಲಿಗೆ ಪ್ರಮಾಣ ವಚನ ಸ್ವೀಕರಿಸಿದ ಸದಾನಂದಗೌಡ ಅವರು, ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಕರ್ನಾಟಕದ ಎಲ್ಲ ಸಂಸದರು ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು.
ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರು ಕೊಡಗು ಸಂಪ್ರದಾಯಕ ಶೈಲಿಯಲ್ಲಿ ಉಡುಗೆತೊಟ್ಟುಕೊಂಡು ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಕೊಡಗಿನ ಸಾಂಪ್ರದಾಯಿಕ ಶೈಲಿಯ ಉಡುಗೆಯಲ್ಲಿ ಪ್ರತಾಪ್ ಸಿಂಹ ಅವರು ಪ್ರಮುಖ ಆಕರ್ಷಣೆ ಆಗಿದ್ದರು.
ಪಂಚೆ, ಶಲ್ಯ ತೊಟ್ಟು ಸಂಸತ್ ಪ್ರವೇಶಿಸಿದ ತೇಜಸ್ವಿ ಸೂರ್ಯ
ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿರುವ ತೇಜಸ್ವಿ ಸೂರ್ಯ ಅವರು ಪಂಚೆ, ಶಲ್ಯ ಧರಿಸಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಕಾಂಗ್ರೆಸ್ನ ಡಿಕೆ ಸುರೇಶ್, ಜೆಡಿಎಸ್ನ ಪ್ರಜ್ವಲ್ ರೇವಣ್ಣ, ಮಂಡ್ಯ ಸಂಸದೆ ಸುಮಲತಾ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಮೊದಲ ದಿನದ ಅಧಿವೇಶನ ಸಂಸದರ ಪ್ರಮಾಣ ವಚನ ನೋಡಲು ರಾಜ್ಯ ಸರ್ಕಾರ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಹ ದೆಹಲಿಗೆ ತೆರಳಿದ್ದರು. ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಇನ್ನೂ ಕೆಲವು ಸಂಸದರ ಜೊತೆಗೆ ಡಿ.ಕೆ.ಶಿವಕುಮಾರ್ ಅವರು ಫೊಟೊ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.