ಕರ್ನಾಟಕದ ಹಾವೇರಿಗೆ ರಾಷ್ಟ್ರೀಯ ಸಾಕ್ಷರತಾ ಪ್ರಶಸ್ತಿ
ನವದೆಹಲಿ, ಸೆಪ್ಟೆಂಬರ್, 05 : ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಕರ್ನಾಟಕದ ಹಾವೇರಿ ಸೇರಿದಂತೆ ದೇಶದ ಮೂರು ಜಿಲ್ಲೆಗಳನ್ನು ಈ ಸಾಲಿನ ರಾಷ್ಟ್ರೀಯ ಸಾಕ್ಷರತಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾಕ್ಷರತೆಯಲ್ಲಿ ಯಾವಾಗಲೂ ನಮ್ಮ ರಾಜ್ಯ ಹಿಂದುಳಿದಿದೆ ಎಂಬ ಕೊರಗುವಿಕೆಯಿಂದ ಕೊಂಚ ನಿರಾಳ ಭಾವ ತಾಳಬಹುದು. ಈ ಭಾವ ತಳೆಯಲು ಎಡೆ ಮಾಡಿಕೊಟ್ಟಿರುವುದು ಕರ್ನಾಟಕದ ಹಾವೇರಿ ಜಿಲ್ಲೆ.[ರಾಜ್ಯದ ಜನಸಂಖ್ಯೆ, ಸಾಕ್ಷರತೆ, ಲಿಂಗಾನು ಪ್ರಮಾಣ]
ಹೌದು...ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯ ಗರಿ ಮೂಡಿಸಿ ನಮ್ಮ ಇಡೀ ದೇಶದ ಮುಂದೆ ಹೆಮ್ಮೆಯಿಂದ ಬೀಗುವಂತೆ ಮಾಡಿ ಇಡೀ ರಾಜ್ಯ ಸಂಭ್ರಮದ ನಗು ಬೀರುವಂತೆ ಮಾಡಿದೆ ಹಾವೇರಿ ಜಿಲ್ಲೆ.
ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಸೆಪ್ಟೆಂಬರ್ 8 ರ ಮಂಗಳವಾರದಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಛತ್ತೀಸ್ ಗಢದ ನಕ್ಸಲ್ ಪೀಡಿತ ಬಸ್ತರ್ ಹಾಗೂ ತಮಿಳುನಾಡಿನ ಧರ್ಮಪುರಿ ಪ್ರಶಸ್ತಿಗೆ ಪಾತ್ರವಾದ ಉಳಿದೆರಡು ಜಿಲ್ಲೆಗಳು ಸಾಕ್ಷರತಾ ಪ್ರಶಸ್ತಿಗೆ ಭಾಜನವಾಗಿವೆ. ಒಟ್ಟಿನಲ್ಲಿ ಕರ್ನಾಟಕ, ಛತೀಸ್ ಗಢ, ತಮಿಳುನಾಡು ರಾಜ್ಯಗಳ ಕೀರ್ತಿಯನ್ನು ಹೆಚ್ಚಿಸಿದ ಕೀರ್ತಿ ಈ ಮೂರು ಜಿಲ್ಲೆಗಳಿಗೆ ಸಲ್ಲುತ್ತದೆ.