ಲೋಕಸಭೆಯಲ್ಲಿ ಕರ್ನಾಟಕದ ಬಿಕ್ಕಟ್ಟಿನ ಸದ್ದು, ಬಿಜೆಪಿಗೆ ಛೀಮಾರಿ!
ನವದೆಹಲಿ, ಜುಲೈ 08: ಕರ್ನಾಟಕದಲ್ಲಿ ಶಾಸಕರ ಸರಣಿ ರಾಜೀನಾಮೆಯಿಂದಾಗಿ ರಾಜಕೀಯ ಅಸ್ಥಿರತೆ ಉಂಟಾಗುವಂತೆ ಮಾಡಿರುವ ಭಾರತೀಯ ಜನತಾ ಪಕ್ಷವು, ಬೇಟೆಗಾರ ಪಕ್ಷವಾಗಿ ಮಾರ್ಪಟ್ಟಿದೆ. ಶಾಸಕರ ಬೇಟೆ ಮಾಡಿ, ಸರ್ಕಾರವನ್ನು ಉರುಳಿಸುತ್ತಿದೆ ಎಂದು ಸಂಸತ್ತಿನಲ್ಲಿ ಇಂದು(ಜುಲೈ 08) ವಿಪಕ್ಷ ನಾಯಕ ಅಧೀರ್ ರಂಜನ್ ಚೌಧುರಿ ಅವರು ಛೀಮಾರಿ ಹಾಕಿದ್ದಾರೆ.
ಜುಲೈ 01ರಂದು ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ ಬಳಿಕ 9 ಕಾಂಗ್ರೆಸ್ ಶಾಸಕರು ಹಾಗೂ 3 ಜೆಡಿಎಸ್ ಶಾಸಕರು ಒಟ್ಟಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸಿದವರ ಪೈಕಿ 10 ಮಂದಿಯನ್ನು ಮುಂಬೈಯ ಐಷಾರಾಮಿ ಹೋಟೆಲ್ ನಲ್ಲಿರಿಸಲಾಗಿದೆ. ಈ ಎಲ್ಲಾ ಘಟನೆ ಹಿಂದೆ ಮೋದಿ ಸರ್ಕಾರದ ಕೈವಾಡವಿದೆ. ಬಿಜೆಪಿ ಈ ರೀತಿ ಪ್ರಜಾಪ್ರಭುತ್ವವನ್ನು ಹಾಳುಗೆಡವುತ್ತಿದೆ ಎಂದು ಅಧೀರ್ ರಂಜನ್ ಅವರು ಹೇಳಿದರು.
ಕಾಂಗ್ರೆಸ್ ಶಾಸಕರ ರಾಜೀನಾಮೆ ರಾಹುಲ್ ಗಾಂಧಿಯ ಷಡ್ಯಂತ್ರ: ರಾಜನಾಥ್
ಲೋಕಸಭೆಯಲ್ಲಿ ಅಧೀರ್ ಅವರು ಮಾತನಾಡುವ ವೇಳೆಗಾಗಲೇ ಎಚ್ ಡಿ ಕುಮಾರಸ್ವಾಮಿ ಸರ್ಕಾರದ 22 ಸಚಿವರು ರಾಜೀನಾಮೆ ಸಲ್ಲಿಸಿದ್ದು, ಸರಣಿ ರಾಜೀನಾಮೆಯಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.
ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡುತ್ತಿರುವ ಬಿಜೆಪಿ ಬಗ್ಗೆ ಸಂಸತ್ತಿನಲ್ಲಿ ಗಟ್ಟಿಯಾಗಿ ಕಾಂಗ್ರೆಸ್ ದನಿಯೆತ್ತಲಿದೆ, ಬಿಜೆಪಿ ಕುದುರೆ ವ್ಯಾಪಾರ, ಬೇಟೆಯನ್ನು ಖಂಡಿಸುತ್ತೇವೆ ಎಂದು ಚೌಧುರಿ ಅವರು ಹೇಳಿದರು.
ಆದರೆ, ಕರ್ನಾಟಕದಲ್ಲಿನ ರಾಜಕೀಯ ಬಿಕ್ಕಟ್ಟಿನಲ್ಲಿ ಯಾವುದೇ ರೀತಿ ಕೈವಾಡವಿಲ್ಲ ಎಂದು ಬಿಜೆಪಿಯ ಕೇಂದ್ರ ನಾಯಕರು ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಸಮನ್ವಯ ಕೊರತೆಯಿಂದ ಉಂಟಾದ ಭಿನ್ನಮತ ಇದಾಗಿದ್ದು, ಆಂತರಿಕ ಸಮಸ್ಯೆಗೆ ಬಿಜೆಪಿ ಕಾರಣವಲ್ಲ ಎಂದು ಹೇಳಿದೆ.