ಹರಿಯಾಣ ಪ್ರತಿಭಟನೆ: ರೈತ ತಲೆ ಒಡೆಯಿರಿ ಎಂದ ಅಧಿಕಾರಿ ಅಮಾನತ್ತಿಗೆ ರೈತರ ಪಟ್ಟು!
ನವದೆಹಲಿ, ಸೆಪ್ಟೆಂಬರ್ 8: ಹರಿಯಾಣದಲ್ಲಿ ಅಧಿಕಾರಿಗಳ ಜೊತೆಗೆ ಎರಡನೇ ದಿನವೂ ರೈತರು ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದೆ. ರೈತರ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಕೈ ಬಿಡುವ ಮಾತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹರಿಯಾಣದ ಕರ್ನಾಲ್ ಉಪ ಕಾರ್ಯದರ್ಶಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದ ರೈತರ ಪರವಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಮಾತನಾಡಿದ್ದಾರೆ. ರೈತರ ತಲೆಯನ್ನು ಒಡೆಯಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದ ಎಸ್ ಡಿಎಂ ಆಯುಷ್ ಸಿನ್ಹಾರನ್ನು ಅಮಾನತುಗೊಳಿಸುವಂತೆ ಹಾಗೂ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.
ಕಿಸಾನ್ ಮಹಾಪಂಚಾಯತ್: ಹರಿಯಾಣದಲ್ಲಿ ರೈತರ ಪ್ರತಿಭಟನಾ ಮೆರವಣಿಗೆ ಸುತ್ತಲಿನ ಸುದ್ದಿ
"ಕರ್ನಾಲ್ ಜಿಲ್ಲಾಧಿಕಾರಿಗಳ ಜೊತೆಗೆ 3 ಗಂಟೆಗಳ ಕಾಲ ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದೆ. ಅಧಿಕಾರಿಗಳು ಆಯುಷ್ ಸಿನ್ಹಾರನ್ನು ಅಮಾನತುಗೊಳಿಸಲು ಹಾಗೂ ಎಫ್ಐಆರ್ ದಾಖಲಿಸಲು ಸಿದ್ಧರಿಲ್ಲ. ಚಂಡೀಗಢದಿಂದ ನಿರ್ದೇಶನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ನಾವು ಇಲ್ಲಿ ಪ್ರತಿಭಟನೆ ಮುಂದುವರಿಸಲಿದ್ದೇವೆ," ಎಂದು ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ಆಯುಷ್ ಸಿನ್ಹಾ ಅಮಾನತ್ತಿಗೆ ಪಟ್ಟು ಹಿಡಿದ ರೈತರು
ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ರೈತರು ಇಲ್ಲಿಗೆ ಆಗಮಿಸಲಿದ್ದಾರೆ. ದೆಹಲಿಯಲ್ಲಿ ಈಗಾಗಲೇ ಕೃಷಿ ಕಾಯ್ದೆಗಳ ವಿರುದ್ಧ ನಿರಂತರ ಹೋರಾಟ ನಡೆಯುತ್ತಿದೆ. ಹರಿಯಾಣದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಅವರೂ ಕೈ ಜೋಡಿಸಲಿದ್ದಾರೆ. ರೈತರ ತಲೆಯನ್ನು ಒಡೆಯಬೇಕು ಎಂದು ಹೇಳಿದ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎನ್ನವುದೇ ನಮ್ಮ ಮುಖ್ಯ ಬೇಡಿಕೆಯಾಗಿದೆ, ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ರೈತರ ಮೇಲಿನ ಲಾಠಿಚಾರ್ಜ್ ಬಳಿಕ ಚಿತ್ರಣ ಹೇಗಿತ್ತು?
ಕಳೆದ ಶನಿವಾರವಷ್ಟೇ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ ಮುಖ್ಯಸ್ಥ ಓಂಪ್ರಕಾಶ್ ಧಂಕಾರ್ ಮತ್ತು ಹಿರಿಯ ಮುಖಂಡರು ಭಾಗಿಯಾದ ಸಭೆಗೆ ರೈತರು ವಿರೋಧ ವ್ಯಕ್ತಪಡಿಸಿದರು. ಕರ್ನಾಲ್ ಜಿಲ್ಲೆಯ ಘರೌದಾ ಟೋಲ್ ಪ್ಲಾಜಾದ ಬಳಿ ರೈತರ ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು. ರೈತರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಈ ವೇಳೆ 10ಕ್ಕೂ ಹೆಚ್ಚು ಮಂದಿ ರೈತರು ಗಾಯಗೊಂಡಿದ್ದರು.
ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ನಿಯಂತ್ರಿಸಲು ಅತ್ಯಂತ ಕಡಿಮೆ ಪ್ರಮಾಣದ ಭದ್ರತಾ ಪಡೆ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು ಎಂದು ಕರ್ನಾಲ್ ಪೊಲೀಸ್ ಐಜಿ ಮಮತಾ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಘಟನೆ ನಂತರ ಆ ಪ್ರದೇಶದಲ್ಲಿನ ಚಿತ್ರಣ ಬೇರೆಯದ್ದೇ ಕಥೆಯನ್ನು ಹೇಳುತ್ತದೆ. ರೈತರ ಬಟ್ಟೆಗಳಿಗೆ ನೆತ್ತರು ಅಂಟಿಕೊಂಡಿದ್ದರೆ, ಹಲವು ಬ್ಯಾಂಡೆಜ್ ಹಾಕಿಕೊಂಡಿದ್ದಾರೆ. ಇನ್ನು ಕೆಲವು ಮಂದಿ ಗಂಭೀರವಾಗಿ ಗಾಯಗೊಂಡಿರುವುದರ ಬಗ್ಗೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರೈತರು ಹಾಗೂ ವಿರೋಧ ಪಕ್ಷಗಳ ಆಗ್ರಹದ ನಡುವೆಯೂ ಕರ್ನಾಲ್ ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ ವಿರುದ್ಧ ಯಾವುದೇ ರೀತಿ ಕಾನೂನು ಕ್ರಮ ತೆಗೆದುಕೊಂಡಿಲ್ಲ ಎಂದು ದೂಷಿಸಲಾಗುತ್ತಿದೆ.
ರೈತರು ನಿಯಮ ಉಲ್ಲಂಘಿಸಿದರೆ ತಲೆಗಳನ್ನೇ ಒಡೆಯಿರಿ
ಪೊಲೀಸ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಲ್ ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ, "ಬ್ಯಾರಿಕೇಡ್ ಹಾಕಿರುವ ಪ್ರದೇಶದಿಂದ ಒಬ್ಬರೇ ಒಬ್ಬ ಪ್ರತಿಭಟನಾನಿರತ ರೈತರು ಒಳಗೆ ಬರುವಂತಿಲ್ಲ. ಇದು ತುಂಬಾ ಸರಳ ಮತ್ತು ಸ್ಪಷ್ಟವಾದ ಸಂದೇಶವಾಗಿದೆ. ಅಲ್ಲಿಗೆ ತಲುಪಲು ಯಾರೊಬ್ಬರಿಗೂ ಅನುಮತಿ ಅಥವಾ ಅವಕಾಶ ನೀಡಬಾರದು. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿ ಗಡಿಯನ್ನು ದಾಟಿ ಪ್ರವೇಶಿಸಿದರೆ ನಿಮ್ಮ ಲಾಠಿಗಳನ್ನು ಕೈಗೆತ್ತಿಕೊಳ್ಳಿ ಹಾಗೂ ಅವರಿಗೆ ಬಲವಾಗಿ ಹೊಡೆಯಿರಿ. ಇದು ಬಹಳ ಸ್ಪಷ್ಟವಾಗಿದ್ದು, ಯಾವುದೇ ನಿರ್ದೇಶನಕ್ಕಾಗಿ ಎದುರು ನೋಡುವ ಅಗತ್ಯವಿಲ್ಲ. ಅವರ ಮೇಲೆ ಬಲವಾಗಿ ಹೊಡೆಯಿರಿ. ಒಂದು ವೇಳೆ ನಾನು ಇಲ್ಲಿ ಪ್ರತಿಭಟನಾನಿರತರನ್ನು ನೋಡಿದರೆ, ಅವರ ತಲೆಯನ್ನು ಒಡೆದುಕೊಂಡಿರಬೇಕು. ಅವರ ತಲೆಯನ್ನು ಒಡೆಯುವಷ್ಟು ಬಲವಾಗಿ ನೀವು ಹೊಡೆಯಬೇಕು," ಎಂದು ಸಿನ್ಹಾ ಹೇಳಿಕೆ ನೀಡಿದರೆ ಪೊಲೀಸ್ ಸಿಬ್ಬಂದಿ ಅದಕ್ಕೆ ಸರಿ ಎಂದು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ದೆಹಲಿ ಗಡಿಯಲ್ಲಿ ಮುಂದುವರಿದ ರೈತರ ಹೋರಾಟ
ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ. ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ರೈತರು ವಿರೋಧಿಸುತ್ತಿರುವ ಕೃಷಿ ಕಾಯ್ದೆಗಳು ಯಾವುವು?:
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.