ಕ್ರಿಮಿನಲ್ ಗಳನ್ನು ದೂರವಿಡಲು ಕೇಂದ್ರದ ಹೊಸ ಕಾನೂನು
ನವದೆಹಲಿಯಲ್ಲಿ ಸೋಮವಾರ ಮಾತನಾಡಿದ ಅವರು, ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವವ ಕ್ರಿಮಿನಲ್ ವ್ಯಕ್ತಿಗಳನ್ನು ಚುನಾವಣೆಯಿಂದ ದೂರವಿರಿಸುವುದು ನಮ್ಮ ಕನಸಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ವಿಧೇಯಕವನ್ನು ಜಾರಿಗೆ ತರಲು ಮುಂದಾಗಿದೆ ಎಂದು ಹೇಳಿದರು.
ಹೊಸ ವಿಧೇಯಕ ರಚಿಸುವ ಸಂಬಂಧ ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಆಯೋಗವು ಕೇಂದ್ರ ಸರ್ಕಾರದ ಈ ಉದ್ದೇಶಿತ ವಿಧೇಯಕಕ್ಕೆ ಬೆಂಬಲ ನೀಡಿದರೆ, ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುತ್ತದೆ ಎಂದು ಸಿಬಲ್ ತಿಳಿಸಿದ್ದಾರೆ. ಉದ್ದೇಶಿತ ವಿಧೇಯಕದಂತೆ, ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸದಂತೆ ಕಾನೂನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಹೊಸ ಕಾನೂನಿನಂತೆ ಅತ್ಯಾಚಾರ, ಅಪಹರಣ ಮುಂತಾದ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕನಿಷ್ಠ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇಂತಹವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯೊಡ್ಡುವುದು ವಿಧೇಯಕದ ಮೂಲ ಉದ್ದೇಶವಾಗಿದೆ ಎಂದು ಕಪಿಲ್ ಸಿಬಲ್ ವಿವರಣೆ ನೀಡಿದರು.
ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಕೆಳ ನ್ಯಾಯಾಲಯದಲ್ಲಿ ಶಿಕ್ಷೆ ಜಾರಿಯಾದ ದಿನದಿಂದಲೇ ಸಂಸದರು ಮತ್ತು ಶಾಸಕರ ಸದಸ್ಯತ್ವ ಅನರ್ಹಗೊಳ್ಳುವುದು ಹಾಗೂ ಚುನಾವಣೆಗೆ ಸ್ಪರ್ಧಿಸದಂತೆ ತಡೆಯೊಡ್ಡಬೇಕು ಎಂದು ಸುಪ್ರೀಂಕೋರ್ಟ್ ಜುಲೈನಲ್ಲಿ ಮಹತ್ವದ ತೀರ್ಪು ನೀಡಿತ್ತು.
ಇದಕ್ಕೆ ಕೆಲವೊಂದು ಬದಲಾವಣೆಗಳನ್ನು ಮಾಡಿ, ಸರ್ಕಾರ ಸುಗ್ರೀವಾಜ್ಞೆಗೆ ಹೊರಡಿಸಿತ್ತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನಿ ನಡುವೆ ಸುಗ್ರಿವಾಜ್ಞೆ ಕುರಿತು ಜಟಾಪಟಿ ಪಡೆದ ಹಿನ್ನಲೆಯಲ್ಲಿ ಅದನ್ನು ಸರ್ಕಾರ ಹಿಂಪಡೆದಿತ್ತು.
ಸದ್ಯ ಕಾನೂನು ಸಚಿವ ಕಪಿಲ್ ಸಿಬಲ್ ಮುಂದಿಟ್ಟಿರುವ ಹೊಸ ವಿಧೇಯಕವು ಈ ತೀರ್ಪಿನ ಆಧಾರದ ಮೇಲೆ ರೂಪಿತಗೊಂಡಿದೆ ಎಂದು ತಿಳಿದು ಬಂದಿದೆ. ಕಾನೂನು ಆಯೋಗದ ಅನುಮತಿ ದೊರೆತರೆ ಈ ವಿಧೇಯಕದ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ.