''ಕಾಂಗ್ರೆಸ್ ಪಕ್ಷ ದೊಡ್ಡ ಹಡಗು, ಗಾಂಧಿ, ಅಂಬೇಡ್ಕರ್ ಸಿದ್ಧಾಂತವೇ ಶಕ್ತಿ''
ನವದೆಹಲಿ, ಸೆಪ್ಟೆಂಬರ್ 28: ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿಂದು ಸಿಪಿಐ ಯುವ ಮುಖಂಡ ಕನ್ಹಯ್ಯ ಕುಮಾರ್, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ಮಾತನಾಡಿದ ಕನ್ಹಯ್ಯ, ''ಕಾಂಗ್ರೆಸ್ ಪಕ್ಷ ದೊಡ್ಡ ಹಡಗು, ಗಾಂಧಿ, ಅಂಬೇಡ್ಕರ್ ಸಿದ್ಧಾಂತವೇ ಶಕ್ತಿ'' ಎಂದಿದ್ದಾರೆ.
ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ರಣದೀಪ್ ಸುರ್ಜೇವಾಲ, ಕೆ.ಸಿ ವೇಣುಗೋಪಾಲ್ ಮುಂತಾದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕನ್ಹಯ್ಯ ಮಾತನಾಡಿ, ''ಕಾಂಗ್ರೆಸ್ ಕೇವಲ ಒಂದು ಪಕ್ಷವಲ್ಲ, ಅದೊಂದು ಪರಿಕಲ್ಪನೆ, ದೇಶದ ಅತ್ಯಂತ ಹಳೆಯ ಹಾಗೂ ಪ್ರಜಾಪ್ರಭುತ್ವ ಸಿದ್ಧಾಂತ ಮೇಲೆ ನಂಬಿಕೆಯುಳ್ಳ ಪಕ್ಷ, ನಾನು ಪ್ರಜಾಪ್ರಭುತ್ವವನ್ನು ಪಾಲಿಸುವವನು, ಕಾಂಗ್ರೆಸ್ ಇಲ್ಲದೆ ದೇಶ ಉಳಿಯಲು ಸಾಧ್ಯವಿಲ್ಲ,"' ಎಂದು ಹೇಳಿದರು.
''ಕಾಂಗ್ರೆಸ್ ಒಂದು ದೊಡ್ಡ ಹಡಗು ಇದ್ದಂತೆ, ಪಕ್ಷ ಉಳಿದರೆ ಅನೇಕ ಜನರ ಆಶೋತ್ತರ ಈಡೇರುತ್ತೆ, ಮಹಾತ್ಮಾ ಗಾಂಧೀಜಿ ಅವರ ಐಕ್ಯಮತ್ಯ, ಭಗತ್ ಸಿಂಗ್ ಅವರ ಧೈರ್ಯ ಹಾಗೂ ಬಿಆರ್ ಅಂಬೇಡ್ಕರ್ ಅವರ ಸಮಾನತೆ ಸಿದ್ಧಾಂತವನ್ನು ಉಳಿಸಿ, ಬೆಳೆಸಲು ಕಾಂಗ್ರೆಸ್ ಅಗತ್ಯ, ಹೀಗಾಗಿ ನಾನು ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ'' ಎಂದು ಕನ್ಹಯ್ಯ ಹೇಳಿದರು.
ಕನ್ಹಯ್ಯ ಹಾಗೂ ಜಿಗ್ನೇಶ್ ರನ್ನು ಪಕ್ಷಕ್ಕೆ ಬರಮಾಡಿಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಮಾತನಾಡಿ "ಈ ದೇಶವನ್ನು ಆಳುತ್ತಿರುವ ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಲು ಯುವ ನಾಯಕರಾದ ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೇವಾನಿ ಅವರೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ" ಎಂದರು.
ಗುಜರಾತ್ ರಾಜ್ಯದ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿರಿಸಿ ಮೇವಾನಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳಲಾಗುತ್ತಿದೆ. ಗುಜರಾತ್ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಅಧ್ಯಕ್ಷ, ಪಾಟೀದಾರ್ ಸಮುದಾಯದ ಯುವ ಮುಖಂಡ ಹಾರ್ದಿಕ್ ಪಟೇಲ್ ಮೇಲೆ ಹೈಕಮಾಂಡ್ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ.
ಬಿಹಾರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ ಸ್ಪರ್ಧಿಸಿ, ಮಹಾಘಟಬಂಧನದ ನೇತೃತ್ವ ವಹಿಸಿದ್ದ ಕಾಂಗ್ರೆಸ್ 19 ಕ್ಷೇತ್ರದಲ್ಲಿ ಮಾತ್ರ ಜಯ ಗಳಿಸಿತ್ತು. ಮಿತ್ರಪಕ್ಷಗಳನ್ನು ಗೆಲುವಿನತ್ತ ಕೊಂಡೊಯ್ಯುವಲ್ಲೂ ವಿಫಲವಾಗಿತ್ತು. ಈಗ ಬಿಹಾರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಬಲಗೊಳಿಸಲು ಕನ್ಹಯ್ಯರನ್ನು ಸೇರಿಸಿಕೊಳ್ಳಲಾಗಿದೆ.