ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ಆಯ್ಕೆ
ನವದೆಹಲಿ, ಫೆಬ್ರವರಿ 12 : ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಆಯ್ಕೆಯಾಗಿದ್ದಾರೆ.
ಸೋಮವಾರ ನಡೆದ ಚುನಾವಣೆಯಲ್ಲಿ ಕಂಬಾರ ಅವರು ಮರಾಠಿ ಲೇಖಕ ಬಾಲಚಂದ್ರ ನೆಮಾಡೆ ಹಾಗೂ ಒಡಿಯಾ ಲೇಖಕಿ ಪ್ರತಿಭಾ ರೊಯ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕಂಬಾರ ಅವರು 56 ಮತಗಳನ್ನು ಗಳಿಸಿದರೆ ಪ್ರತಿಭಾ ರೊಯ್ ಅವರು 29 ಹಾಗೂ ನೆಮಾಡೆ ಅವರು ಕೇವಲ ನಾಲ್ಕು ಮತಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ಚಂದ್ರಶೇಖರ ಕಂಬಾರ ಅವರು ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಹೀಗೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಕಂಬಾರರ ಜನನ, ವಿದ್ಯಾಭ್ಯಾಸ: ಕಂಬಾರರು 1937 ಜನವರಿ 2 ರಂದು ಬೆಳಗಾವಿ ಜಿಲ್ಲೆಯ ಘೋಡಿಗೇರಿ ಗ್ರಾಮದಲ್ಲಿ ಜನಿಸಿದರು. ಗೋಕಾಕ್ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, 1962ರಲ್ಲಿ ಕರ್ನಾಟಕ ವಿವಿಯಿಂದ ಎಂಎ ಪದವಿ ಹಾಗು ಪಿಎಚ್ ಡಿ ಪದವಿ ಪಡೆದಿದ್ದಾರೆ.
ಪ್ರಸಿದ್ಧ ಕಾವ್ಯ ಹಾಗೂ ನಾಟಕಗಳು: ಮುಗುಳು, ಹೇಳತೇನ ಕೇಳ, ಸಾವಿರಾರು ನೆರಳು, ಬೆಳ್ಳಿ ಮೀನು ಕಾವ್ಯ ಗಳು ಹಾಗೂ ಜೋಕುಮಾರಸ್ವಾಮಿ, ಚಾಲೇಶ, ಸಂಗಾಬಾಳ್ಯ, ಕಾಡುಕುದುರೆ ಹರಕೆಯ ಕುರಿ, ಸಿರಿಸಂಪಿಗೆ, ತಿರುಕನ ಕನಸು, ಮಹಾಮಾಯಿ ನಾಟಕಗಳನ್ನು ರಚಿಸಿದ್ದಾರೆ.