ಅನುಭವಕ್ಕೆ ಮಣೆ : ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಕಮಲ್ ನಾಥ್
Recommended Video
ನವದೆಹಲಿ, ಡಿಸೆಂಬರ್ 13 : ಹಳೆ ಬೇರಿಗೆ ಹೊಸ ಚಿಗುರು ದಾರಿ ಮಾಡಿಕೊಟ್ಟಿದೆ. ಅನುಭವ ಮತ್ತು ಯುವಶಕ್ತಿಯ ನಡುವೆ ಅನುಭವವೇ ಮೇಲುಗೈ ಸಾಧಿಸಿದೆ.
ಮೂಲಗಳ ಪ್ರಕಾರ, ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಹಿರಿಯ, ಅನುಭವಿ ನಾಯಕ ಕಮಲ್ ನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ರಾಹುಲ್ ಗಾಂಧಿ ಅವರು ಆಯ್ಕೆ ಮಾಡಿದ್ದಾರೆ.
ಸುಮಾರು ಎರಡು ತಾಸುಗಳ ಸತತ ಮಾತುಕತೆಯ ನಂತರ, ಮುಖ್ಯಮಂತ್ರಿ ಗಾದಿಗೆ ಪಟ್ಟುಹಿಡಿದಿದ್ದ 47 ವರ್ಷದ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಮನವೊಲಿಸಲು ರಾಹುಲ್ ಗಾಂಧಿ ಯಶಸ್ವಿಯಾಗಿದ್ದು, ಕಮಲ್ ನಾಥ್ ಅವರಿಗೆ ಹಾದಿ ಸುಗಮ ಮಾಡಿಕೊಡುವಂತೆ ಅವರಿಗೆ ಹೇಳಲಾಗಿದೆ.
ನೆಹರೂ ಗಾಂಧಿ ಕುಟುಂಬದ ನಿಷ್ಠಾವಂತ ನಾಯಕ ಕಮಲ್ ನಾಥ್
ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಕಮಲ್ ನಾಥ್ ಅವರಿಗೆ ಶುಭ ಕಾಮನೆಗಳು. ಅವರ ನಾಯಕತ್ವದಲ್ಲಿ ಮಧ್ಯ ಪ್ರದೇಶದಿಂದಲೇ ಬದಲಾವಣೆಯ ಯುಗ ಆರಂಭವಾಗಲಿದೆ ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ತಾಣದಲ್ಲಿ ಘೋಷಣೆ ಮಾಡಿದೆ.
72 ವರ್ಷದ ಹಿರಿಯ ನಾಯಕ ಕಮಲ್ ನಾಥ್ ಅವರನ್ನು ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಘೋಷಿಸುವುದಕ್ಕೆ ಕಾಂಗ್ರೆಸ್ ತಡಮಾಡಿತ್ತು. ಇದರ ಸೂಚಕವಾಗಿ ದೆಹಲಿಯಿಂದ ಭೋಪಾಲ್ ಗೆ ಮರಳಿದ ಕಮಲ್ ನಾಥ್ ಅವರಿಗೆ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ದೊರೆತಿತ್ತು.
ನವದೆಹಲಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿ ಭೋಪಾಲ್ ಗೆ ವಾಪಸ್ ಮರಳುವಾಗ ಜ್ಯೋತಿರಾಧಿತ್ಯ ಸಿಂಧಿಯಾ ಅವರು, ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ಇಲ್ಲವೇ ಇಲ್ಲ. ಮಧ್ಯ ಪ್ರದೇಶದ ಜನರ ಸೇವೆಗಾಗಿ ನಾವಿದ್ದೇವೆ. ನಾನೀಗ ಭೋಪಾಲ್ ಗೆ ಹೊರಟಿದ್ದೇನೆ, ಕೆಲವೇ ಸಮಯದಲ್ಲಿ ಮುಖ್ಯಮಂತ್ರಿಯ ಘೋಷಣೆಯ ನಿರ್ಣಯ ತಿಳಿಯಲಿದೆ ಎಂದು ಅವರು ಟ್ವೀಟ್ ಮಾಡಿದ್ದರು.
ಶುಕ್ರವಾರ ಪ್ರಮಾಣ ವಚನ : ಕಮಲ್ ನಾಥ್ ಅವರು ಶುಕ್ರವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಉಪ ಮುಖ್ಯಮಂತ್ರಿಯ ಹುದ್ದೆಯ ಆಫರ್ ನೀಡಲಾಗಿತ್ತು. ಆದರೆ, ಅವರನ್ನು ಅದನ್ನು ತಿರಸ್ಕರಿಸಿದ್ದಾರೆ. ಸಿಂಧಿಯಾ ಅವರು ದೆಹಲಿಯಲ್ಲಿ ಕಾಂಗ್ರೆಸ್ ಸೇವೆಯಲ್ಲಿ ತೊಡಗುವ ಸಾಧ್ಯತೆಗಳಿವೆ.
ಡಿಸೆಂಬರ್ 11ರಂದು ಪ್ರಕಟವಾದ ಫಲಿತಾಂಶದಲ್ಲಿ, ಭಾರತೀಯ ಜನತಾ ಪಕ್ಷದೊಡನೆ ಭಾರೀ ಹೋರಾಟ ಮಾಡಿ ಕಾಂಗ್ರೆಸ್ 114 ಸ್ಥಾನಗಳನ್ನು ಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 109 ಸ್ಥಾನ ಪಡೆದು ವಿರೋಧ ಪಕ್ಷದ ಸ್ಥಾನದಲ್ಲಿ ಕೂಡಲಿದೆ. ಕಾಂಗ್ರೆಸ್ಸಿಗೆ ಬಹುಮತ ಸಾಬೀತುಪಡಿಸಲು ಎರಡು ಸ್ಥಾನ ಮಾತ್ರ ಬಾಕಿಯಿದೆ. ಅದನ್ನು ನೀಡಲು ಬಹುಜನ ಸಮಾಜ ಪಕ್ಷ ಮುಂದೆ ಬಂದಿದೆ.
ಮಧ್ಯ ಪ್ರದೇಶದ ಫಲಿತಾಂಶ ಒಂದು ದಿನದ ನಂತರ ಪ್ರಕಟವಾಗಿತ್ತು. ಅಂತಿಮ ಫಲಿತಾಂಶ ಹೊರಬೀಳುತ್ತಿದ್ದಂತೆ, ಸರಕಾರ ರಚನೆಯ ಪ್ರಕ್ರಿಯೆಯೂ ಶುರುವಾಯಿತು ಮತ್ತು ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆಯೂ ಆರಂಭವಾಯಿತು. ಕಮಲ್ ನಾಥ್ ಪರ ಕಾಂಗ್ರೆಸ್ ಹೈಕಮಾಂಡ್ ಒಲವು ಹೊಂದಿದ್ದರೂ ಸಿಂಧಿಯಾ ಅವರು ಮುಖ್ಯಮಂತ್ರಿಯಾಗಿ ರಾಜ್ಯದ ಸೇವೆಗೆ ನಾನೂ ಸಿದ್ಧ ಎಂದು ಘೋಷಿಸಿದ್ದರಿಂದ ಆಯ್ಕೆ ಕಗ್ಗಂಟಾಗಿತ್ತು.