ಕಮಲ್ನಾಥ್ ಸ್ಟಾರ್ ಕ್ಯಾಂಪೇನರ್ ಮಾನ್ಯತೆ ರದ್ದು: ಸುಪ್ರೀಂ ಮೊರೆ
ನವದೆಹಲಿ, ಅಕ್ಟೋಬರ್ 31: ಮಧ್ಯ ಪ್ರದೇಶ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ಮಾನ್ಯತೆಯನ್ನು ರದ್ದುಗೊಳಿಸಿರುವ ಚುನಾವಣಾ ಆಯೋಗದ ವಿರುದ್ಧ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಕಮಲನಾಥ್ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದರು. ಅಲ್ಲದೇ ಈ ಕುರಿತು ಅವರಿಗೆ ನೀಡಲಾದ ಸೂಚನೆಯನ್ನು ಕಡೆಗಣಿಸಿದ್ದರು. ಈ ಹಿನ್ನಲೆ ಅವರನ್ನು ಪಕ್ಷದ ಸ್ಟಾರ್ ಕ್ಯಾಂಪೇನರ್ ಸ್ಥಾನಮಾನದಿಂದ ತೆಗೆದುಹಾಕುತ್ತಿರುವುದಾಗಿ ತಿಳಿಸಿದೆ.
'ಐಟಂ' ಹೇಳಿಕೆ ನೀಡಿದ ಕಮಲ್ ನಾಥ್ 'ಸ್ಟಾರ್ ಕ್ಯಾಂಪೇನರ್' ಮಾನ್ಯತೆ ರದ್ದು
ಪದೇ ಪದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದನ್ನು ಉಲ್ಲೇಖಿಸಿ ಚುನಾವಣಾ ಆಯೋಗ ಶುಕ್ರವಾರ ಕಮಲ್ ನಾಥ್ ಅವರ ಸ್ಟಾರ್ ಪ್ರಚಾರಕರ ಸ್ಥಾನಮಾನವನ್ನು ರದ್ದುಪಡಿಸಿದೆ.
ಹೀಗಾಗಿ ಮಧ್ಯಪ್ರದೇಶ ಉಪ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವ ಕಮಲ್ ನಾಥ್ ಅವರ ಪ್ರಯಾಣ, ವಸತಿ ಸೇರಿದಂತೆ ಎಲ್ಲ ಸಂಪೂರ್ಣ ವೆಚ್ಚಗಳನ್ನು ಆ ವಿಧಾನಸಭೆ ಕ್ಷೇತ್ರದಲ್ಲಿನ ಪಕ್ಷದ ಅಭ್ಯರ್ಥಿಯೇ ಭರಿಸಬೇಕಾಗಲಿದೆ.
ಕಮಲ್ ನಾಥ್ ಅವರು ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಇಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಸಿದ್ಧಪಡಿಸುವುದು ರಾಜಕೀಯ ಪಕ್ಷಗಳ ಹಕ್ಕು. ಆದರೆ ಅದನ್ನು ರದ್ದುಗೊಳಿಸುವ ಮೂಲಕ ಚುನಾವಣಾ ಆಯೋಗ ತನ್ನದೇ ಆದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಕಮಲ್ ನಾಥ್ ಹೇಳಿದ್ದಾರೆ.