ಭವಿಷ್ಯಕ್ಕೆ ಹೆದರಿ ಹೋದ, ಸಿಂಧಿಯಾಗೆ ಬಿಜೆಪಿಯಲ್ಲಿ ಗೌರವ ಸಿಕ್ಕಲ್ಲ: ರಾಹುಲ್ ಗಾಂಧಿ
ದೆಹಲಿ, ಮಾರ್ಚ್ 12: ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾ ಬಗ್ಗೆ ರಾಹುಲ್ ಗಾಂಧಿ ಮತ್ತೊಮ್ಮೆ ಮಾತನಾಡಿದ್ದಾರೆ.
ಸಿಂಧಿಯಾ ಕಾಂಗ್ರೆಸ್ ಬಿಟ್ಟು ಹೋಗಿದ್ದಕ್ಕೆ ಬುಧವಾರ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ 'ನಮ್ಮ ಮನೆಗೆ ಪೂರ್ವಾನುಮತಿ ಇಲ್ಲದೇ ಪ್ರವೇಶಿಸುತ್ತಿದ್ದ ನಾಯಕರಲ್ಲಿ ಸಿಂಧಿಯಾ ಕೂಡ ಒಬ್ಬರು, ಅವರು ನನ್ನ ಕಾಲೇಜ್ ಸಹಪಾಠಿ' ಎಂದಿದ್ದರು.
ಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಬಗ್ಗೆ ಇದೆಂಥಾ 'ರಾಗಾ'?
ಆದ್ರೆ, ಗುರುವಾರ ಸಿಂಧಿಯಾ ಕಾಂಗ್ರೆಸ್ ತೊರೆದ ಬಗ್ಗೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ 'ಸಿಂಧಿಯಾ ರಾಜಕೀಯ ಭವಿಷ್ಯಕ್ಕೆ ಹೆದರಿ ಪಕ್ಷ ಬಿಟ್ಟು ಹೋಗಿದ್ದಾರೆ. ಅವರಿಗೆ ಬಿಜೆಪಿಯಲ್ಲಿ ಗೌರವ ಸಿಕ್ಕಲ್ಲ' ಎಂದು ಟೀಕಿಸಿದ್ದಾರೆ.
'ಇದು ಸಿದ್ಧಾಂತದ ಹೋರಾಟ, ಒಂದು ಕಡೆ ಕಾಂಗ್ರೆಸ್ ಮತ್ತು ಬಿಜೆಪಿ-ಆರ್ಎಸ್ಎಸ್. ಜ್ಯೋತಿರಾಧಿತ್ಯ ಸಿಂಧಿಯಾ ಅವರ ಸಿದ್ಧಾಂತ ನನಗೆ ತಿಳಿದಿದೆ, ಅವನು ನನ್ನೊಂದಿಗೆ ಕಾಲೇಜಿನಲ್ಲಿದ್ದನು, ನನಗೆ ಅವನನ್ನು ಚೆನ್ನಾಗಿ ತಿಳಿದಿದೆ. ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿಸಿ ತನ್ನ ಸಿದ್ಧಾಂತ ಬಿಟ್ಟು ಆರ್ ಎಸ್ ಎಸ್ ಜೊತೆ ಹೋದರು'' ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ : ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ
'ವಾಸ್ತವ ಅಂದ್ರೆ ಬಿಜೆಪಿಯಲ್ಲಿ ಸಿಂಧಿಯಾಗೆ ಗೌರವ ಸಿಗುವುದಿಲ್ಲ ಮತ್ತು ಆತ ತೃಪ್ತನಾಗುವುದಿಲ್ಲ. ಅದನ್ನು ಆತ ತಿಳಿದುಕೊಳ್ಳುತ್ತಾನೆ. ಅದು ನನಗೆ ಗೊತ್ತು, ಯಾಕಂದ್ರೆ ಸಿಂಧಿಯಾ ನನಗೆ ಬಹಳ ದಿನದ ಸ್ನೇಹಿತ. ಅವನ ಹೃದಯದಲ್ಲಿ ಏನಿದೆ ಮತ್ತು ಅವನ ಬಾಯಿಂದ ಹೊರಬರುತ್ತಿರುವುದು ವಿಭಿನ್ನವಾಗಿದೆ' ಎಂದು ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ.