ಜಗನ್ ಮೋಹನ್ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಉದಯ್ ಲಲಿತ್
ನವದೆಹಲಿ, ನವೆಂಬರ್ 16: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿ ಯು ಉದಯ್ ಲಲಿತ್ ಹಿಂದೆ ಸರಿಸಿದ್ದಾರೆ. ನ್ಯಾಯಮೂರ್ತಿ ಎನ್ವಿ ರಮಣ ವಿರುದ್ಧ ಆರೋಪ ಮಾಡಿ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಅವರಿಗೆ ಪತ್ರ ಬರೆದಿದ್ದ ಘಟನೆಗೆ ಸಂಬಂಧಿಸಿದಂತೆ ಜಗನ್ ಮೋಹನ್ ರೆಡ್ಡಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಎತ್ತುಕೊಂಡ ಉದಯ್ ಲಲಿತ್, ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಲು ನಿರಾಕರಿಸಿದ್ದಾರೆ.
ಈ ಪ್ರಕರಣವು ಯು ಯು ಲಲಿತ್ ನೇತೃತ್ವದ, ನ್ಯಾಯಮೂರ್ತಿಗಳಾದ ವಿನೀಶ್ ಸರನ್ ಮತ್ತು ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಆಂಧ್ರ ಸಿಎಂ ಸ್ಥಾನಕ್ಕೆ ಚ್ಯುತಿ?: ಜಗನ್ ಮೋಹನ್ ರೆಡ್ಡಿ ಭವಿಷ್ಯ ಇಂದು ನಿರ್ಧಾರ
'ನನಗೆ ಇಲ್ಲಿ ಕಷ್ಟವಿದೆ. ನಾನು ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಆಗುವುದಿಲ್ಲ. ನಾನು ವಕೀಲನಾಗಿ ಈ ಕಕ್ಷಿದಾರರನ್ನು ವ್ಯಾಜ್ಯದಲ್ಲಿ ಪ್ರತಿನಿಧಿಸಿದ್ದೇನೆ. ಹೀಗಾಗಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಮುಖ್ಯ ನ್ಯಾಯಮೂರ್ತಿಗಳು ನಿರ್ಧರಿಸುವ ಬೇರೆ ಯಾವುದೇ ನ್ಯಾಯಮೂರ್ತಿಗಳು ಈ ಪ್ರಕರಣವನ್ನು ವಿಚಾರಣೆ ಮಾಡಲಿ' ಎಂದು ನ್ಯಾ. ಉದಯ್ ಲಲಿತ್ ಹೇಳಿದ್ದಾರೆ.
ವಕೀಲರಾದ ಜಿಎಸ್ ಮಣಿ, ಪ್ರದೀಪ್ ಕುಮಾರ್ ಯಾದವ್ ಮತ್ತು ಎಸ್ಕೆ ಸಿಂಗ್ ಜಂಟಿಯಾಗಿ ಈ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದೆ. ಅಕ್ರಮ ಹಣವರ್ಗಾವಣೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಗಂಭೀರ ಸ್ವರೂಪದ 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಜಗನ್ ಮೋಹನ್ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಾಗಿರುವ ಎನ್ವಿ ರಮಣ ವಿರುದ್ಧ ಯಾವುದೇ ಆಧಾರಗಳಿಲ್ಲದೆ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಲ್ಲಿ ಆ ಮಟ್ಟದ ಆರೋಪಗಳನ್ನು ಮಾಡಿರುವ ಜಗನ್ ಮೋಹನ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ರೆಡ್ಡಿ ಅವರನ್ನು ಸಿಎಂ ಸ್ಥಾನದಿಂದ ತೆಗೆಯಲು ಸೂಕ್ತ ಕ್ರಮ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಕೂಡಲೇ ನಿರ್ಧಾರ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.