ಚಿದು ಜಾಮೀನು ನಿರಾಕರಿಸಿದ ಜಸ್ಟೀಸ್ ಸುನೀಲ್ ಗೌರ್ ನಿವೃತ್ತಿ
ನವದೆಹಲಿ, ಆಗಸ್ಟ್ 23: ಕೇಂದ್ರದ ಮಾಜಿ ವಿತ್ತ, ಗೃಹ ಸಚಿವ ಪಿ ಚಿದಂಬರಂ ಅವರಿಗೆ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಜಸ್ಟೀಸ್ ಸುನೀಲ್ ಗೌರ್ ಅವರು ಶುಕ್ರವಾರದಂದು ನಿವೃತ್ತರಾಗಿದ್ದಾರೆ.
ಜಸ್ಟೀಸ್ ಗೌರ್ ಅವರು ಐಎನ್ಎಕ್ಸ್ ಮೀಡಿಯಾ ಪ್ರಕರಣವಲ್ಲದೆ, ಶಿವಾನಿ ಭಟ್ನಾಗರ್ ಕೊಲೆ ಕೇಸ್, ಸೋನಿಯಾ, ರಾಹುಲ್ ವಿರುದ್ಧದ ನ್ಯಾಷನಲ್ ಹೆರಾಲ್ಡ್ ಕೇಸ್ ಸೇರಿದಂತೆ ಅನೇಕ ಪ್ರಮುಖ ಪ್ರಕರಣಗಳನ್ನು ತಮ್ಮ ಸೇವಾವಧಿಯಲ್ಲಿ ವಿಚಾರಣೆಗೊಳಪಡಿಸಿದ್ದಾರೆ.
Breaking: ಜಾಮೀನು ನಿರಾಕರಣೆ, ಸಿಬಿಐ ವಶಕ್ಕೆ ಪಿ.ಚಿದಂಬರಂ
Recommended Video
ಬಹುಕೋಟಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಕೇಸಿನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಹಾಕಿದ್ದ ಹಿರಿಯ ಕಾಂಗ್ರೆಸ್ಸಿಗ, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರ ಅಳಿಯ ರತುಲ್ ಪುರಿಗೆ ಜಸ್ಟೀಸ್ ಗೌರ್ ಜಾಮೀನು ನಿರಾಕರಿಸಿದ್ದರು.
62 ವರ್ಷ ವಯಸ್ಸಿನ ಗೌರ್ ಅವರು ಪಿ ಚಿದಂಬರಂ ಅವರನ್ನು ಹಗರಣಗಳ ಕಿಂಗ್ ಪಿನ್ ಎಂದು ಕರೆದಿದ್ದು ಉಲ್ಲೇಖಾರ್ಹ. ನ್ಯಾಷನಲ್ ಹೆರಾಲ್ಡ್ ಕೇಸಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖವಾಣಿಯನ್ನು ಮುದ್ರಿಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮೆಟೆಡ್ ಗೆ ಕಚೇರಿ ಖಾಲಿ ಮಾಡುವಂತೆ ಆದೇಶಿಸಿದ್ದರು. ಸದ್ಯ ಈ ಕೇಸ್ ಸುಪ್ರೀಂಕೋರ್ಟಿನಲ್ಲಿದೆ.
ಐಎನ್ಎಕ್ಸ್ ಮೀಡಿಯಾ ಕೇಸ್: ಪಿ ಚಿದಂಬರಂ ಭ್ರಷ್ಟಾಚಾರದ ಹೆಜ್ಜೆಗಳು
1957ರಲ್ಲಿ ಬುಲಂದ್ ಶೇರ್ ನಲ್ಲಿ ಜನಿಸಿದ ಗೌರ್ ಅವರು ಪಂಜಾಬ್, ಹರ್ಯಾಣ ಹೈಕೋರ್ಟ್ ವಕೀಲರಾಗಿ 1984ರಲ್ಲಿ ವೃತ್ತಿ ಬದುಕು ಆರಂಭಿಸಿದರು. ಸಿವಿಲ್, ಕ್ರಿಮಿನಲ್ ,ಸಾಂವಿಧಾನಿಕ ಮೊಕದ್ದಮೆಗಳನ್ನು ನಿಭಾಯಿಸಿದರು. 1995ರಲ್ಲಿ ದೆಹಲಿ ಹೈಯರ್ ಜ್ಯೂಡಿಷಿಯಲ್ ಸೇವೆಗೆ ಬಡ್ತಿ ಹೊಂದಿದರು. 2008ರ ಏಪ್ರಿಲ್ 11ರಂದು ದೆಹಲಿ ಹೈಕೋರ್ಟಿನ ಜಡ್ಜ್ ಆಗಿ ಬಡ್ತಿ ಸಿಕ್ಕಿತು. 2012ರಲ್ಲಿ ಖಾಯಂ ಜಡ್ಜ್ ಆಗಿ ನೇಮಕವಾದರು.