ದೆಹಲಿ ಹಿಂಸಾಚಾರ: ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ವರ್ಗಾವಣೆ
ನವದೆಹಲಿ, ಫೆಬ್ರವರಿ.27: ದೆಹಲಿ ಹಿಂಸಾಚಾರ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಮುರಳೀಧರ್ ರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಳಿಸಲಾಗಿದೆ.
ಬುಧವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ದೆ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಜೊತೆ ನಡೆಸಿದ ಸಮಾಲೋಚನೆ ಬಳಿಕ ನ್ಯಾಯಮೂರ್ತಿ ಎಸ್.ಮುರಳೀಧರ್ ವರ್ಗಾವಣೆ ಕುರಿತು ಅಧಿಸೂಚನೆ ಹೊರಡಿಸಲಾಗಿದೆ.
ದೆಹಲಿ ಹಿಂಸಾಚಾರ: ಮೃತ ಹೆಡ್ ಕಾನ್ಸ್ ಟೇಬಲ್ ಕುಟುಂಬಕ್ಕೆ 1 ಕೋಟಿ ಪರಿಹಾರ
ಪಂಜಾಬ್ ಮತ್ತು ಹರಿಯಾಣ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸುವಂತೆ ನ್ಯಾ.ಮುರಳೀಧರ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಸೂಚನೆಯಲ್ಲಿ ನಿರ್ದೇಶನ ನೀಡಿದ್ದಾರೆ.
ಫೆಬ್ರವರಿ.12ರಂದೇ ವರ್ಗಾವಣೆಗೆ ಶಿಫಾರಸ್ಸು
ಕಳೆದ ಫೆಬ್ರವರಿ.12ರಂದೇ ಸುಪ್ರೀಂಕೋರ್ಟ್ ಕೊಲ್ಜಿಯಂ ಸಭೆ ನಡೆಸಲಾಗಿತ್ತು. ಅಂದೇ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಮುರಳೀಧರ್ ರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗೆ ವರ್ಗಾವಣೆ ಮಾಡುವಂತೆ ಶಿಫಾರಸ್ಸು ಮಾಡಲಾಗಿತ್ತು.
ನ್ಯಾ.ಮುರಳೀಧರ್ ವರ್ಗಾವಣೆ ಶಿಫಾರಸ್ಸಿಗೆ ವ್ಯಾಪಕ ವಿರೋಧ
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಮುರಳೀಧರ್ ವರ್ಗಾವಣೆ ಶಿಫಾರಸ್ಸನ್ನು ಕಳೆದ ವಾರವೇ ದೆಹಲಿಯ ಹೈಕೋರ್ಟ್ ಬಾರ್ ಅಸೋಸಿಯೇಷನ್ ವ್ಯಾಪಕವಾಗಿ ವಿರೋಧಿಸಿತ್ತು. ಈ ರೀತಿಯ ವರ್ಗಾವಣೆ ಕಾನೂನು ವ್ಯವಸ್ಥೆಯಲ್ಲಿ ಅಪಾಯಕಾರಿ ಬೆಳವಣಿಗೆಯಾಗಿದೆ. ಇದರಿಂದ ಜನರಿಗೆ ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ ಎಂದು ಬಾರ್ ಅಸೋಸಿಯೇಷನ್ ಹೇಳಿತ್ತು.
ನ್ಯಾ.ಮುರಳೀಧರ್ ವರ್ಗಾವಣೆ ಮರುಪರಿಶೀಲನೆಗೆ ಮನವಿ
ನ್ಯಾಯಮೂರ್ತಿ ಮುರಳೀಧರ್ ವರ್ಗಾವಣೆ ವಿರೋಧಿಸಿ ಕಳೆದ ವಾರ ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ವಕೀಲರು ತಮ್ಮ ಕೆಲಸವನ್ನು ತ್ಯಜಿಸಿ ಪ್ರತಿಭಟನೆ ನಡೆಸಿದ್ದರು. ಇಂಥ ಬೆಳವಣಿಗೆಯು ಅಪರೂಪದಲ್ಲೇ ಅಪರೂಪವಾಗಿದೆ. ಸರ್ಕಾರವು ನ್ಯಾ.ಮುರಳೀಧರ್ ವರ್ಗಾವಣೆ ಆದೇಶವನ್ನು ಮರುಪರಿಶೀಲನೆ ನಡೆಸಬೇಕು ಎಂದು ಬಾರ್ ಅಸೋಸಿಯೇಷನ್ ಮನವಿ ಮಾಡಿಕೊಂಡಿದೆ.
ಹಿಂಸಾಚಾರ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.ಮುರಳೀಧರ್
ಬುಧವಾರ ದೆಹಲಿ ಹಿಂಸಾಚಾರದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠದಲ್ಲಿ ನ್ಯಾ.ಮುರಳೀಧರ್ ಕೂಡಾ ಇದ್ದರು. ಹಿಂಸಾಚಾರಕ್ಕೆ ಪ್ರಚೋದಿಸುವಂತಾ ಹೇಳಿಕೆ ನೀಡಿದ ಮೂವರು ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲು ಸ್ಯಾಲಿಸಿಟರಿ ಜನರಲ್ ತುಷಾರ್ ಮೆಹ್ತಾಗೆ ಹೈಕೋರ್ಟ್ ಸೂಚಿಸಿತ್ತು. ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಶಾಸಕ ಕಪಿಲ್ ಮಿಶ್ರಾ ಮತ್ತು ಬಿಜೆಪಿ ಮುಖಂಡ ಪರ್ವೇಜ್ ವರ್ಮಾ ವಿರುದ್ಧ ಹೈಕೋರ್ಟ್ ಕಿಡಿ ಕಾರಿತ್ತು. ಮೂವರ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಿದ್ದು, ಈ ಹಿಂದೆ ನಾಯಕರು ಬಹಿರಂಗವಾಗಿ ಪ್ರಚೋದನೆ ನೀಡುವಂತಾ ಮಾತನ್ನು ಆಡಿದ್ದಾರೆ. ಆ ಹೇಳಿಕೆಗಳ ವಿಡಿಯೋವನ್ನು ಹೈಕೋರ್ಟ್ ನಲ್ಲಿ ಪ್ರಸಾರ ಮಾಡುವಂತೆ ಸೂಚನೆ ನೀಡಿತ್ತು.