ಸುಪ್ರೀಂಕೋರ್ಟ್ ಕಿವಿ ಹಿಂಡಿದ ನ್ಯಾಯಮೂರ್ತಿ ಕುರಿಯನ್ ಜೋಸೆಫ್
ನವದೆಹಲಿ, ನವೆಂಬರ್ 30: ಕಾನೂನು ಪಾಲಿಸದವರು ನಡೆಸುವ ಹಿಂಸಾಚಾರಕ್ಕಿಂತಲೂ ಜನಪ್ರತಿನಿಧಿಗಳ ಮೌನ ಸಮಾಜಕ್ಕೆ ಬಲು ಅಪಾಯಕಾರಿ ಎಂದು ಗುರುವಾರ ನಿವೃತ್ತರಾದ ಸುಪ್ರೀಂಕೋರ್ಟ್ನ ವಿವಾದಾತ್ಮಕ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಹೇಳಿದರು.
ಗುರುವಾರ ಸಹೋದ್ಯೋಗಿಗಳಿಂದ ಬೀಳ್ಕೊಡುಗೆ ಸ್ವೀಕರಿಸಿದ ಬಳಿಕ ಕುರಿಯನ್ ತಮ್ಮ ನ್ಯಾಯಾಂಗ ಬದುಕಿನ ಬಗ್ಗೆ ಮಾತನಾಡಿದರು.
ಇತಿಹಾಸದಲ್ಲಿ ಮೊದಲ ಬಾರಿಗೆ ಸುಪ್ರಿಂ ನ್ಯಾಯಮೂರ್ತಿಗಳಿಂದ ಪತ್ರಿಕಾಗೋಷ್ಠಿ
ದೇಶದ ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಾಲ್ವರು ನ್ಯಾಯಾಧೀಶರ ಜೊತೆಗೂಡಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಭಾರಿ ವಿವಾದ ಸೃಷ್ಟಿಸಿದ್ದ ಅವರು ತಮ್ಮ ನಡೆಯನ್ನು ಮತ್ತೆ ಸಮರ್ಥಿಸಿಕೊಂಡರು.
'ನಾನು ಸರಿಯಾದ ಕೆಲಸ ಮಾಡಿದ್ದೆ. ಆ ಗಳಿಗೆಗೆ ಅದರ ಅವಶ್ಯಕತೆ ಇತ್ತು ಮತ್ತು ಅದು ನನ್ನ ಕರ್ತವ್ಯವೂ ಆಗಿತ್ತು. ಅದರ ಹಿನ್ನೆಲೆ ಗೊತ್ತಿಲ್ಲದೇ ಇರುವವರಿಗೆ, ಅದು ಕೇವಲ ಭಾವುಕತೆಯ ಸ್ಫೋಟವಲ್ಲ. ಆದರೆ, ನಾವು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಮಾಡಬೇಕಿತ್ತು. ಬೇರೆ ಯಾವ ಆಯ್ಕೆಗಳೂ ಇರದ ಕಾರಣ ನಾವು ಹಾಗೆ ಮಾಡಲೇಬೇಕಾಯಿತು' ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಕರೆದಿದ್ದು ಏಕೆ?
ಆ ಸುದ್ದಿಗೋಷ್ಠಿ ಶೇ 100ರಷ್ಟೇನೂ ಪರಿಣಾಮಕಾರಿಯಾಗಲಿಲ್ಲ. ಆದರೆ, ಅದು ಒಂದು ಸಂದೇಶ ರವಾನಿಸಿತು. ಕೆಲವು ಸಂಗತಿಗಳು ಸ್ವಲ್ಪ ಬದಲಾದವು. ಸುಪ್ರೀಂಕೋರ್ಟ್ನಲ್ಲಿ ಮಾತ್ರವಲ್ಲ, ಹೈಕೋರ್ಟ್ನಲ್ಲಿ ಕೂಡ. ಕೆಲವು ವಿಷಯವಾರು ನ್ಯಾಯಪೀಠ ಹಂಚಿಕೆಗಳು ನಡೆದವು ಮತ್ತು ಸ್ವಲ್ಪ ಎಚ್ಚರಿಕೆ ವಹಿಸಲಾಯಿತು ಎಂದು ತಿಳಿಸಿದರು.
ನ್ಯಾಯಾಂಗ, ನ್ಯಾಯದ ಪರ ದನಿ ಎತ್ತಿದ್ದೇವೆ: ನ್ಯಾ. ಕುರಿಯನ್ ಜೋಸೆಫ್
ಸುಪ್ರೀಂಕೋರ್ಟ್ ತಾನು ಸಂವಿಧಾನದ ನೈತಿಕತೆಯನ್ನು ರಕ್ಷಿಸಲು ಇರುವ ಏಕೈಕ ರಕ್ಷಕ ಎಂದು ಭಾವಿಸಿಕೊಳ್ಳುವುದು ಬೇಡ. ಸಾರ್ವಜನಿಕರ ಒಳಿತು ಮತ್ತು ಆಸಕ್ತಿಗಳ ಬಗ್ಗೆ ಜನಪ್ರತಿನಿಧಿಗಳಿಗೂ ತಿಳಿದಿರುತ್ತದೆ. ಅವರು ತರುವ ವೈವಿಧ್ಯ ಕೋರ್ಟ್ ಪೀಠಗಳಿಗಲ್ಲ. ಹೀಗಾಗಿ ಸಂವಿಧಾನವನ್ನು ತಾವು ಮಾತ್ರ ವ್ಯಾಖ್ಯಾನಿಸಬಲ್ಲೆವು ಎಂದು ನ್ಯಾಯಾಲಯಗಳು ಅಂದುಕೊಳ್ಳಬಾರದು. ಹೀಗಾಗಿ ಕಾನೂನು ತಯಾರಕರನ್ನು ಕೂಡ ಒಪ್ಪಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬದುಕು ಎನ್ನುವುದು ಸಾರ್ಥಕವಾಗುವುದು ನಗುವಿನೊಂದಿದೆ. ನೀವು ನಗುತ್ತಿದ್ದರೆ ಉಳಿದವರೂ ನಗುತ್ತಿರುತ್ತಾರೆ ಎಂದು ಅವರು ತಮಗೆ ಬೀಳ್ಕೊಡುಗೆ ನೀಡಿದ ವಕೀಲರಿಗೆ ಕಿವಿಮಾತು ಹೇಳಿದರು.
'ನ್ಯಾಯಮೂರ್ತಿ ಕುರಿಯನ್ ಅವರ ಸ್ಥಾನವನ್ನು ತುಂಬುವ ವ್ಯಕ್ತಿ ನಗುಮೊಗದವರಾಗಿರಬೇಕು ಎಂಬುದನ್ನು ಮುಖ್ಯ ನ್ಯಾಯಮೂರ್ತಿಗಳು ಖಚಿತಪಡಿಸಿಕೊಳ್ಳಬೇಕು' ಎಂದು ನಗೆಗಡಲಲ್ಲಿ ಮುಳುಗಿಸಿದರು.
ಈ ವರ್ಷದ ಜನವರಿ 12ರಂದು ನಡೆದಿದ್ದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ಕುರಿಯನ್ ಅವರನ್ನು ಒಳಗೊಂಡಂತೆ ನಾಲ್ವರು ನ್ಯಾಯಾಧೀಶರು ಪ್ರಕರಣಗಳನ್ನು ಬೆಂಚುಗಳಿಗೆ ವರ್ಗಾವಣೆ ಮಾಡುವ ಸಂಬಂಧ ಅಸಮಧಾನ ವ್ಯಕ್ತಪಡಿಸಿದ್ದರು ಮತ್ತು ಕೆಲವು ಪ್ರಕರಣಗಳು ದೇಶದ ಸರ್ವೋಚ್ಛ ನ್ಯಾಯಾಲಯದ ಘನತೆಗೆ ಧಕ್ಕೆ ತರುತ್ತಿವೆ ಎಂದು ಆರೋಪಿಸಿದ್ದರು.