ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು: ಇದು ನಾರಿ ಶಕ್ತಿಯ ಗೆಲುವು ಎಂದ ಮೋದಿ
ನವದೆಹಲಿ, ಮಾರ್ಚ್ 20: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಕೊನೆಗೂ ಗಲ್ಲುಶಿಕ್ಷೆಯಾಗಿದೆ. ಇಂದು (ಮಾರ್ಚ್ 20) ನಸುಕಿನ ಜಾವ 5.30ಕ್ಕೆ ಅತ್ಯಾಚಾರವೆಸಗಿದ್ದ ನಾಲ್ವರನ್ನು ಗಲ್ಲಿಗೇರಿಸಲಾಗಿದೆ. ಏಳು ವರ್ಷಗಳ ಬಳಿಕ ಸಿಕ್ಕ ಸಜೆಗೆ ದೇಶವೇ ಹರ್ಷ ವ್ಯಕ್ತಪಡಿಸಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ವಿಚಾರಧಾರೆಯನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ಪ್ರಧಾನಿ, ''ನ್ಯಾಯ ಸಿಕ್ಕಿದೆ. ಮಹಿಳಾ ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವುದು ಅತ್ಯಂತ ಅವಶ್ಯಕ. ಪ್ರತಿ ಕ್ಷೇತ್ರದಲ್ಲೂ ನಾರಿ ಶಕ್ತಿ ಸಾಧನೆ ಇದೆ. ಮಹಿಳಾ ಸಬಲೀಕರಣದ ಮೇಲೆ ಕೇಂದ್ರೀಕರಿಸಿ ನಾವು ರಾಷ್ಟ್ರವನ್ನು ನಿರ್ಮಿಸಬೇಕು. ಸಮಾನತೆ ಮತ್ತು ಅವಕಾಶಗಳಿಗೆ ಒತ್ತು ನೀಡಬೇಕು'' ಎಂದಿದ್ದಾರೆ.
ನಿರ್ಭಯಾ ಸಾವಿಗೆ ನ್ಯಾಯ: ಅತ್ಯಾಚಾರಿಗಳಿಗೆ ಕೊನೆಗೂ ಗಲ್ಲು
Justice has prevailed.
— Narendra Modi (@narendramodi) March 20, 2020
It is of utmost importance to ensure dignity and safety of women.
Our Nari Shakti has excelled in every field. Together, we have to build a nation where the focus is on women empowerment, where there is emphasis on equality and opportunity.
ದೆಹಲಿಯ ಬಸ್ ಒಂದರಲ್ಲಿ 2012ರ ಡಿಸೆಂಬರ್ 16ರಂದು ಸ್ನೇಹಿತನೆದುರೇ ಈ ನಾಲ್ವರು ಅಪರಾಧಿಗಳು ನಿರ್ಭಯಾಳನ್ನು ಅತ್ಯಾಚಾರಗೈದು ಹತ್ಯೆ ಮಾಡಿದ್ದರು. ಸತತ 7 ವರ್ಷ ಮೂರು ತಿಂಗಳ ಬಳಿಕ ನಿರ್ಭಯಾ ಸಾವಿಗೆ ನ್ಯಾಯ ದೊರೆತಂತಾಗಿದೆ.
ದೆಹಲಿಯ ತಿಹಾರ್ ಜೈಲಿನಲ್ಲಿ ಇಂದು ಮುಂಜಾನೆ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ನಿರ್ಭಯಾ ಹಂತಕರು ಯಾವುದೇ ಅಂತಿಮ ಇಚ್ಛೆ ವ್ಯಕ್ತಪಡಿಸಿಲ್ಲ. ಗಲ್ಲಿಗೇರಿಸುವ ಮುನ್ನ ನಾಲ್ವರನ್ನು ಪ್ರತ್ಯೇಕವಾಗಿ ಮಾಜಿಸ್ಟ್ರೇಟ್ ಮಾತನಾಡಿಸಿದ್ದರು. ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ನಾಲ್ವರನ್ನು ಗಲ್ಲಿಗೇರಿಸಲಾಯಿತು.