ನ್ಯಾಯಾಧೀಶರಿಗೆ ಲಿಂಗ ಸಂವೇದನೆ ಪಾಠ ಅಗತ್ಯ: ಅಟಾರ್ನಿ ಜನರಲ್
ನವದೆಹಲಿ, ನವೆಂಬರ್ 2: ನ್ಯಾಯಾಧೀಶರಿಗೆ ಲಿಂಗ ಸಂವೇದನೆಯ ಶಿಕ್ಷಣ ನೀಡುವ ಅಗತ್ಯವಿದೆ. ಇದರಿಂದ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ನಿಭಾಯಿಸುವಾಗ ಅವರು ಸೂಕ್ಷ್ಮತೆ ವಹಿಸಲು ಸಾಧ್ಯವಾಗಲಿದೆ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಸುಪ್ರೀಂಕೋರ್ಟ್ಗೆ ಸೋಮವಾರ ಅಭಿಪ್ರಾಯ ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡಿದ್ದ ಮಧ್ಯಪ್ರದೇಶ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠದ ಎದುರು ಅವರು ಈ ಅಭಿಪ್ರಾಯ ಮಂಡಿಸಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಕೇಸ್ ತೀರ್ಪಿತ್ತ ಜಡ್ಜ್ ಯಾದವರಿಗೆ ಭದ್ರತೆ ಇಲ್ಲ!
ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ಸೂಚನೆ ನೀಡಿದ್ದು ತೀವ್ರ ಟೀಕೆಗೆ ಒಳಗಾಗಿತ್ತು. ಈ ಪ್ರಕರಣವನ್ನು ಉಲ್ಲೇಖಿಸಿರುವ ಅಟಾರ್ನಿ ಜನರಲ್, ಈ ರೀತಿಯ ಸೂಚನೆಗಳಿಗೆ ಅನುಮತಿ ನೀಡಲಾಗದು ಎಂದು ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತ್ತು ರಾಜ್ಯ ಅಕಾಡೆಮಿಗಳು ಶಿಕ್ಷಣ ನೀಡಬೇಕಿದೆ ಎಂದಿದ್ದಾರೆ.
'ನ್ಯಾಯಾಧೀಶರಿಗೆ ಶಿಕ್ಷಣ ನೀಡಬೇಕಿದೆ. ನ್ಯಾಯಾಧೀಶರ ನೇಮಕಾತಿ ಪರೀಕ್ಷೆಗಳಲ್ಲಿ ಲಿಂಗ ಸಂವೇಧನೆ ಒಂದು ಭಾಗವಾಗಿರಬೇಕು. ನ್ಯಾಯಾಧೀಶರ ಪರೀಕ್ಷೆಗಳು ಮತ್ತು ರಾಜ್ಯ ಹಾಗೂ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಗಳಲ್ಲಿ ಲಿಂಗ ಸಂವೇದನೆಯ ಕಾರ್ಯಕ್ರಮಗಳನ್ನು ನಡೆಸಬೇಕು' ಎಂದು ಅವರು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠದ ಮುಂದೆ ಹೇಳಿದ್ದಾರೆ.